'ಕೆಲ್ಸಕ್ಕೆ ಮುಂಚೆ ಮಾತು ಬೇಡ, ಪಾಕ್ ಗೆ ಪೆಟ್ಟು ಕೊಟ್ಟು, ಸುದ್ದಿ ಹೇಳ್ತೀವಿ'
ಪಾಕಿಸ್ತಾನ ಸೈನ್ಯವು ಇಬ್ಬರು ಭಾರತೀಯ ಸೈನಿಕರ ದೇಹವನ್ನು ತುಂಡರಿಸಿದ ನಂತರ ಹೇಗೆ ಪ್ರತೀಕಾರ ಹೇಳಲಾಗುತ್ತದೆ ಎಂಬ ಬಗ್ಗೆ ಕುತೂಹಲ ಇದೆ. ಅದಕ್ಕೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ನೀಡಿದ ಉತ್ತರ ಇಲ್ಲಿದೆ
ನವದೆಹಲಿ, ಮೇ 4: ಭಾರತೀಯ ಸೈನಿಕರಿಬ್ಬರ ದೇಹವನ್ನು ತುಂಡರಿಸಿದ ಪಾಕ್ ಸೇನೆಗೆ ಪ್ರತೀಕಾರ ಹೇಳಲೇಬೇಕು ಅನ್ನೋ ಮಾತು ಇಡೀ ದೇಶದಲ್ಲಿ ಕೇಳಿಬರುತ್ತಿದೆ. ಈ ಒತ್ತಾಯಕ್ಕೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಗುರುವಾರ ನಿಗೂಢ ಎನಿಸುವಂಥ ಉತ್ತರ ನೀಡಿದ್ದಾರೆ.
ಗಡಿ ನಿಯಂತ್ರಣ ರೇಖೆ ಅಚೆಗಿನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಕಳೆದ ವರ್ಷ ಸರ್ಜಿಕಲ್ ಸ್ಟೈಕ್ ನಡೆಸಿತ್ತು. ಸೆಪ್ಟೆಂಬರ್ ನಲ್ಲಿ ಉರಿ ಸೇನಾ ಕ್ಯಾಂಪ್ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿತ್ತು. ಇಡೀ ದಾಳಿ ಯೋಜನೆಯನ್ನು ಗುಪ್ತವಾಗಿ ಇಟ್ಟಿದ್ದ ಸೇನೆಯು ಮರುದಿನ ಬೆಳಗ್ಗೆ ಘೋಷಣೆ ಮಾಡಿತ್ತು.[ಪಾಕ್ ಭಯೋತ್ಪಾದಕ ರಾಷ್ಟ್ರ ಅಂತ ಘೋಷಿಸೋಕಾಗಲ್ಲ, ಏಕೆ?]
ಜನರಲ್ ರಾವತ್ ಪಿಟಿಐ ಸುದ್ದಿ ಸಂಸ್ಥೆ ಜತೆ ಮಾತನಾಡಿ, ನಾವು ಭವಿಷ್ಯ ಯೋಜನೆಗಳ ಬಗ್ಗೆ ಏನು ಹೇಳೋದಿಲ್ಲ. ಕೆಲಸ ಆದ ಮೇಲೆ ಅದರ ಮಾಹಿತಿ ಹಂಚಿಕೊಳ್ತೀವಿ ಎಂದು ಹೇಳಿದ್ದಾರೆ. ಇನ್ನು ಸೈನ್ಯದ ಶರತ್ ಚಂದ್ ಈಗಾಗಲೇ ಈ ಬಗ್ಗೆ ಮಾತನಾಡಿದ್ದು, "ನಾವು ಏನು ಮಾಡ್ತೀವಿ ಅನ್ನೋದನ್ನು ಹೇಳುವುದಕ್ಕೆ ಇಷ್ಟಪಡಲ್ಲ. ನಾವು ಆಯ್ಕೆ ಮಾಡಿಕೊಂಡ ಸಮಯ ಹಾಗೂ ಸ್ಥಳದಲ್ಲಿ ಕಾರ್ಯಾಚರಣೆ ಮಾಡ್ತೀವಿ" ಎಂದಿದ್ದಾರೆ.