ಸುನಂದಾ ಪುಷ್ಕರ್ ಅವರದ್ದು ವ್ಯವಸ್ಥಿತ ಕೊಲೆ : ಸ್ವಾಮಿ
ನವದೆಹಲಿ, ಜು. 2 : ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅವರನ್ನು ವೃತ್ತಿಪರ ರೀತಿಯಲ್ಲಿ ಕೊಲೆ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣ್ಯಸ್ವಾಮಿ ಹೇಳಿದ್ದಾರೆ. ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಬುಧವಾರ ಈ ಕುರಿತು ಹೇಳಿಕೆ ನೀಡಿರುವ ಸುಬ್ರಮಣ್ಯ ಸ್ವಾಮಿ ಅವರು ಸುನಂದಾ ಪುಷ್ಕರ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರಿಗೆ ವಿಷ ನೀಡಿ ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ. ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ಆರೋಗ್ಯ ಸಚಿವರ ಪ್ರತಿಕ್ರಿಯೆ : ಇನ್ನು ಸುನಂದಾ ಪುಷ್ಕರ್ ಪ್ರಕರಣ ಕುರಿತು ವೈದ್ಯರು ಆರೋಪ ಮಾಡಿರುವ ಹಿನ್ನಲೆಯಲ್ಲಿ ಪ್ರಕರಣ ಸಂಬಂಧ ಸಂಪೂರ್ಣವಾದ ವರದಿ ನೀಡುವಂತೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಏಮ್ಸ್ ಗೆ ಸೂಚನೆ ನೀಡಿದ್ದಾರೆ.
ಹಿಂದಿನ ಸುದ್ದಿ : ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಸುನಂದಾ ಸಾವು ಸಹಜವಾದದ್ದು ಎಂದು ವರದಿ ನೀಡುವಂತೆ ಶಶಿ ತರೂರ್ ಒತ್ತಡ ಹೇರಿದ್ದರು ಎಂದು ಏಮ್ಸ್ ವೈದ್ಯ ಸುಧೀರ್ ಗುಪ್ತ ಆರೋಪಿಸಿದ್ದಾರೆ.
ಸುನಂದಾ ಪುಷ್ಕರ್ ಮರಣೋತ್ತರ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್) ವೈದ್ಯ ಸುಧೀರ್ ಗುಪ್ತಾ, ಈ ಬಗ್ಗೆ ಕೇಂದ್ರ ಆಡಳಿತ ನ್ಯಾಯಾಧೀಕರಣಕ್ಕೆ ದೂರು ಸಲ್ಲಿಸಿದ್ದಾರೆ. ಶಶಿ ತರೂರ್ ಮತ್ತು ಗುಲಾಂ ನಬಿ ಆಜಾದ್ ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ದೂರಿದ್ದಾರೆ.
ಶಶಿ ತರೂರ್ ಮಾತ್ರವಲ್ಲದೇ ಆಗ ಕೇಂದ್ರ ಆರೋಗ್ಯ ಸಚಿವರಾಗಿದ್ದ ಗುಲಾಮ್ ನಬಿ ಆಜಾದ್ ಸಹ ಸತ್ಯಾಂಶ ಮುಚ್ಚಿಟ್ಟು, ಸುನಂದಾ ಅವರ ಸಾವು ಸಹಜ ಎಂದು ವರದಿ ನೀಡುವಂತೆ ಒತ್ತಡ ಹಾಕಿದ್ದರು. ಆದ್ದರಿಂದ ಸಾವಿನ ಪ್ರಕರಣದ ವರದಿಯಲ್ಲಿ ಸಂಪೂರ್ಣ ಸತ್ಯಾಂಶ ಬಹಿರಂಗಪಡಿಸಲು ಸಾಧ್ಯವಾಗಿಲ್ಲ ಎಂದು ಸುಧೀರ್ ಗುಪ್ತಾ ಹೇಳಿದ್ದಾರೆ. [ಸುನಂದಾ ಪುಷ್ಕರ್ ನಿಗೂಢ ಸಾವು]
ಸುನಂದಾ ಪುಷ್ಕರ್ ಸಾವಿನ ಕುರಿತ ಪ್ರಶ್ನೆಗಳಿಗೆ ಇದುವರೆಗೂ ಉತ್ತರ ದೊರಕಿರಲಿಲ್ಲ. ನಿದ್ರೆ ಮಾತ್ರೆ ಸೇವಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು. ಸದ್ಯ ಏಮ್ಸ್ ವೈದ್ಯರು ಮಾಡಿರುವ ಆರೋಪ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. [ಸುನಂದಾ ಸಾವು ಅಸ್ವಾಭಾವಿಕ-ಹಠಾತ್: ದಿಲ್ಲಿ ವೈದ್ಯರು]
ಅಂದಹಾಗೆ, 2014 ರ ಜ.17ರಂದು ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಸುನಂದಾ ಪುಷ್ಕರ್ ಮೃತದೇಹ ಪತ್ತೆಯಾಗಿತ್ತು. ಇದೊಂದು ಸಹಜ ಸಾವು, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿತ್ತು.












Click it and Unblock the Notifications