ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಹಿಂಸಾಚಾರ, ವಿಪಕ್ಷಗಳ ಕುತಂತ್ರ: ಅಮಿತ್ ಶಾ
ನವದೆಹಲಿ, ಜನವರಿ 03: ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿಯೇ ಸಿಎಎ, ಎನ್ಆರ್ಸಿ ವಿರುದ್ಧ ಪ್ರತಿಭಟನೆ ಮತ್ತು ಹಿಂಸಾಚಾರ ಹೆಚ್ಚಾಗಲು ವಿಪಕ್ಷಗಳ ಕುತಂತ್ರ ಕಾರಣ ಎಂದು ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅಮಿತ್ ಶಾ, 'ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ವಿರುದ್ಧ ಮಾಡಲಾಗುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಹಿಂಸಾಚಾರ ನಡೆದಿಲ್ಲ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರವೇ ಹಿಂಸಾಚಾರ ನಡೆದಿದ್ದು, ಇದು ಬಿಜೆಪಿಗೆ ಕೆಟ್ಟ ಹೆಸರು ಬರುವಂತೆ ಮಾಡುವ ಯತ್ನ' ಎಂದಿದ್ದಾರೆ.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಗೆ ಸವಾಲು ಹಾಕಿರುವ ಅಮಿತ್ ಶಾ, ಸಿಎಎ ಅಡಿಯಲ್ಲಿ ಯಾವುದೇ ಒಬ್ಬ ವ್ಯಕ್ತಿ ಪೌರತ್ವ ಕಳೆದುಕೊಂಡಿದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.

'ಸಿಎಎ ವಿರುದ್ಧ ಎಷ್ಟೇ ಪ್ರತಿಭಟನೆಗಳು ನಡೆದರೂ ಸಹ ಕೇಂದ್ರವು ಸಿಎಎ ಜಾರಿಗೆ ಬದ್ಧವಾಗಿದೆ. ಸಿಎಎ ಕುರಿತು ತಪ್ಪು ಮಾಹಿತಿ ಹರಡುವ ಪ್ರಯತ್ನ ಮಾಡಲಾಗುತ್ತಿದೆ, ಜನರಲ್ಲಿ ಅರಿವು ಮೂಡಿಸುವ ಕಾರ್ಯ ಪಕ್ಷ ನಡೆಸುತ್ತಿದೆ' ಎಂದರು.
2021 ರ ವೇಳೆಗೆ ಎನ್ಪಿಆರ್ ಜಾರಿಗೆ ಉದ್ದೇಶಿಸಲಾಗಿದೆ. 2020 ರ ಏಪ್ರಿಲ್ನಿಂದ ಜನಗಣತಿ ಪ್ರಾರಂಭವಾಗಲಿದೆ. ಎನ್ಪಿಆರ್ ಗೂ ಎನ್ಸಿಆರ್ ಗೂ ಸಂಬಂಧವಿಲ್ಲ, ಜನಗಣತಿ ಪ್ರತಿ ಹತ್ತು ವರ್ಷಕ್ಕೆ ನಡೆಯುತ್ತದೆ ಎಂದು ಶಾ ಹೇಳಿದ್ದಾರೆ.












Click it and Unblock the Notifications