ಇಷ್ಟು ವರ್ಷದಲ್ಲೇ ಕೇಂದ್ರದ ಅತ್ಯಂತ ಕೆಟ್ಟ ಬಜೆಟ್ ಇದು: ಪರಮೇಶ್ವರ್
ಬೆಂಗಳೂರು, ಜುಲೈ 05: ಇಷ್ಟೋಂದು ಕೆಟ್ಟ ಬಜೆಟ್ ಅನ್ನು ಇಲ್ಲಿಯವರೆಗೆ ನೋಡಿಲ್ಲ, ಯಾವ ಕ್ಷೇತ್ರಕ್ಕೂ ಆದ್ಯತೆ ನೀಡದ ನೀರಸ ಬಜೆಟ್ ಇದು ಎಂದು ಡಿಸಿಎಂ ಪರಮೇಶ್ವರ್ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್ ಅವರು, ನಮ್ಮ ರಾಜ್ಯದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮ್ ಅವರು ಅತ್ಯಂತ ಕೆಟ್ಟ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದೆವು. ಆದರೆ ನಿರೀಕ್ಷೆ ಹುಸಿಯಾಯಿತು ಎಂದು ಹೇಳಿದರು.
ಚುನಾವಣೆ ಸಂದರತಭದಲ್ಲಿ ಸಾಕಷ್ಟು ಭರವಸೆಗಳನ್ನು ನೀಡಿದ್ದರು. ಅದಕ್ಕಾಗಿ ಜನಸಾಮಾನ್ಯರು ಸಹ ಅವರಿಗೆ ಎರಡನೇ ಬಾರಿ ಆಡಳಿತ ನಡೆಸಲು ಅವಕಾಶ ಕಲ್ಪಿಸಿದ್ದರು. ಆದರೆ, ಜನರ ನಿರೀಕ್ಷೆಯನ್ನು ಸಂಪೂರ್ಣ ಹುಸಿ ಮಾಡಿದ್ದಾರೆ ಎಂದು ಆರೋಪಿಸಿದರು.

ಇಷ್ಟು ವರ್ಷದ ಕೇಂದ್ರದ ಆಡಳಿತದಲ್ಲಿ ಇಷ್ಟು ಕೆಟ್ಟ ಬಜೆಟ್ ಬಂದಿಲ್ಲ ಎಂದ ಪರಮೇಶ್ವರ್, ಈ ಬಾರಿ ಬಜೆಟ್ ಗಾತ್ರ ಕಳೆದ ವರ್ಷಕ್ಕಿಂತ ಕೇವಲ 3 ಲಕ್ಷ ಕೋಟಿ ರು. ಹೆಚ್ಚಿಸಿದ್ದಾರೆ ಆದರೆ ಕೃಷಿಗೆ ಸ್ವಲ್ಪವೂ ಆದ್ಯತೆ ನೀಡಿಲ್ಲ. ರೈತರು ಈ ದೇಶದ ಬೆನ್ನೆಲುಬು. ಅವರಿಗೂ ಯಾವ ಹೊಸ ಯೋಜನೆಯನ್ನೂ ಘೋಷಣೆ ಮಾಡಿಲ್ಲ ಎಂದರು.
ಶಿಕ್ಷಣ, ಕೈಗಾರಿಕೆಗೆ ವಿಶೇಷ ಆದ್ಯತೆ ಇಲ್ಲ, ರೈತರನ್ನಂತೂ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಮೀಸಲಿಟ್ಟಿಲ್ಲ. ಕೇವಲ 60 ಸಾವಿರ ಕೋಟಿ ರು. ಇಟ್ಟಿದ್ದು, ಯಾವುದಕ್ಕೂ ಸಾಲದು . 12 ಸಾವಿರ ಕೋಟಿ ರು. ಕಳೆದ ವರ್ಷದ ಬಾಕಿಯೇ ಇನ್ನು ಕೊಟ್ಟಿಲ್ಲ ಎಂದರು.












Click it and Unblock the Notifications