"ಸಿಎಂ ಅರವಿಂದ್ ಕೇಜ್ರಿವಾಲ್ ಪಾಕಿಸ್ತಾನ್ ಬೆಂಬಲಿತ ಮುಖ್ಯಮಂತ್ರಿ"
ನವದೆಹಲಿ, ಫೆಬ್ರವರಿ.01: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿ ಹೋರಾಟವನ್ನೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ದೆಹಲಿ ಉತ್ತರದ ರೋಹಿಣಿ ಎಂಬ ಪ್ರದೇಶದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕ ಯೋಗಿ ಆದಿತ್ಯನಾಥ್ ಅಬ್ಬರದ ಪ್ರಚಾರ ನಡೆಸಿದರು. ಈ ವೇಳೆ ಆಪ್ ಸರ್ಕಾರದ ವಿರುದ್ಧ ಮಾತಿನ ಛಾಟಿ ಬೀಸಿದರು.
ಮೋದಿ ನನ್ನ ಪ್ರಧಾನಿ ಕೂಡ: ಪಾಕ್ ಸಚಿವನಿಗೆ ಕೇಜ್ರಿವಾಲ್ ತಿರುಗೇಟು
ಶಾಹಿನ್ ಬಾಗ್ ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಹೋರಾಟವನ್ನು ಆಪ್ ಸರ್ಕಾರವು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಯೋಗಿ ಆದಿತ್ಯನಾಥ್ ಆರೋಪಿಸಿದರು.
"ಅರವಿಂದ್ ಕೇಜ್ರಿವಾಲ್ ಪಾಕ್ ಬೆಂಬಲಿತ ಸಿಎಂ"
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಪಾಕಿಸ್ತಾನ ಸಚಿವ ಫವಾದ್ ಚೌಧರಿ ಬೆಂಬಲ ಸೂಚಿಸುತ್ತಾರೆ. ದೆಹಲಿ ಮುಖ್ಯಮಂತ್ರಿಗೆ ಪಾಕಿಸ್ತಾನದ ನಂಟು ಎಲ್ಲಿಂದ ಬಂತು ಎಂದು ಯೋಗಿ ಆದಿತ್ಯನಾಥ್ ಪ್ರಶ್ನೆ ಮಾಡಿದ್ದಾರೆ.
"ಪಾಕ್ ಮುಖ್ಯವೋ, ದೆಹಲಿ ಪ್ರಜೆಗಳು ಮುಖ್ಯವೋ"
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಗ್ಗೆ ಇತ್ತೀಚಿಗೆ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಏಕೆಂದರೆ ಇಲ್ಲಿನ ಮುಖ್ಯಮಂತ್ರಿಯು ದೆಹಲಿ ಪ್ರಜೆಗಳ ಬೆಂಬಲವನ್ನು ಸಂಪಾದಿಸಬೇಕೇ ವಿನಃ ಪಾಕಿಸ್ತಾನದ ಸಚಿವರ ಬೆಂಬಲವನ್ನು ಅಲ್ಲ. ಕೇಜ್ರಿವಾಲ್ ಈ ವಿಚಾರದಲ್ಲಿ ಸಂಪೂರ್ಣ ವಿರುದ್ಧವಾಗಿದ್ದು, ಪಾಕಿಸ್ತಾನದ ಸಚಿವರ ಬೆಂಬಲ ಸಂಪಾದಿಸಿದ್ದು ಹೇಗೆ ಸ್ವಾಮಿ ಎಂದು ಲೇವಡಿ ಮಾಡಿದ್ದಾರೆ.