ಹಕ್ಕಿ ಜ್ವರ; ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ ಕೇಂದ್ರ ಸಚಿವ
ನವದೆಹಲಿ, ಜನವರಿ 11: ದೇಶದಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಆದರೆ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಹೈನುಗಾರಿಕಾ ಸಚಿವ ಗಿರಿರಾಜ್ ಸಿಂಗ್ ತಿಳಿಸಿದ್ದಾರೆ.
ಕೇರಳ, ರಾಜಸ್ಥಾನ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್, ಉತ್ತರ ಪ್ರದೇಶ, ದೆಹಲಿ ಮಹಾರಾಷ್ಟ್ರ ಹಾಗೂ ಉತ್ತರಖಾಂಡದಲ್ಲಿ ಹಕ್ಕಿ ಜ್ವರ ಪ್ರಕರಣಗಳು ದೃಢಪಟ್ಟಿರುವುದಾಗಿ ಕೇಂದ್ರ ಮಾಹಿತಿ ನೀಡಿದೆ.
ಆದರೆ ಜನರು ಆತಂಕ ಪಡುವ ಅಗತ್ಯವಿಲ್ಲ. ಈ ಸೋಂಕಿನ ಕುರಿತು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಕೋಳಿ ಮಾಂಸ, ಉತ್ಪನ್ನಗಳನ್ನು ಸೂಕ್ತ ರೀತಿ ಬೇಯಿಸಿ ಸೇವಿಸಿದರೆ ಮನುಷ್ಯರಿಗೆ ಯಾವುದೇ ರೀತಿ ತೊಂದರೆ ಇಲ್ಲ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

"ದೇಶದಲ್ಲಿ ಈಗಾಗಲೇ ಕೊರೊನಾ ಸೋಂಕಿನ ಕುರಿತು ಆತಂಕವಿದೆ. ಹೀಗಿದ್ದಾಗ ಹಕ್ಕಿ ಜ್ವರದ ಕುರಿತು ಸುಖಾಸುಮ್ಮನೆ ವದಂತಿಗಳು ಹುಟ್ಟಿಕೊಳ್ಳುತ್ತಿವೆ. 2006ರಿಂದಲೂ ಹಕ್ಕಿ ಜ್ವರ ಪ್ರಕರಣಗಳು ದೇಶದಲ್ಲಿವೆ. ಆದರೆ ಮನುಷ್ಯರಿಗೆ ಈ ಸೋಂಕು ತಗುಲುವ ಸಾಧ್ಯತೆ ತೀರಾ ಕಡಿಮೆಯಿದೆ. ಮಾಂಸವನ್ನು ಬೇಯಿಸಿ ಸೇವಿಸಿದರೆ ಮನುಷ್ಯರಿಗೆ ಯಾವುದೇ ಅಪಾಯವಿಲ್ಲ" ಎಂದು ಹೇಳಿದ್ದಾರೆ.
ಇದುವರೆಗೂ ದೇಶದ ಹತ್ತು ರಾಜ್ಯಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ದೃಢಪಟ್ಟಿವೆ. ಪ್ರಕರಣ ಕಂಡುಬಂದ ಸುತ್ತಮುತ್ತಲ ರಾಜ್ಯಗಳಿಗೂ ಹಕ್ಕಿ ಜ್ವರದ ಕುರಿತು ಜಾಗೃತಿ ಮೂಡಿಸುವಂತೆ ತಿಳಿಸಲಾಗಿದೆ. ಮೃಗಾಲಯ, ಪೌಲ್ಟ್ರಿ, ಮಾಂಸದ ಮಾರುಕಟ್ಟೆಗಳಲ್ಲಿ, ಕೆರೆಗಳು ಇರುವ ಕಡೆ ನಿಗಾ ವಹಿಸಲು ಸೂಚಿಸಲಾಗಿದೆ.












Click it and Unblock the Notifications