ಊರ್ಜಿತ್ ಪಟೇಲ್ ರಾಜೀನಾಮೆ ಆಗ್ರಹಿಸುವುದಿಲ್ಲ ಎಂದ ಕೇಂದ್ರ
ನವದೆಹಲಿ, ನವೆಂಬರ್ 06 : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರಕಾರದ ನಡುವಿನ ಶೀತಲಸಮರದಿಂದಾಗಿ ಇಬ್ಬರ ನಡುವೆ ಮುನಿಸು ತಾರಕಕ್ಕೇರಿದ್ದರೂ, ಸೆಂಟ್ರಲ್ ಬ್ಯಾಂಕ್ ನ ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜೀನಾಮೆಯನ್ನು ಪಡೆಯುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ದೇಶದ ಉನ್ನತ ಬ್ಯಾಂಕ್ ಮತ್ತು ಕೇಂದ್ರ ಸರಕಾರಗಳ ನಡುವಿನ ಘರ್ಷಣೆ ಇಂದು ನಿನ್ನೆಯದಲ್ಲ. ಹಿಂದೆ ಕೂಡ ಹಲವಾರು ಬಾರಿ ಈ ರೀತಿ ತಾಕಲಾಟಗಳು ಆಗಿವೆ. ನೆಹರೂ ಅವರ ಸರಕಾರವಿದ್ದಾಗಲೂ ರಿಸರ್ವ್ ಬ್ಯಾಂಕ್ ಜೊತೆ ಭಿನ್ನಾಭಿಪ್ರಾಯಗಳಿದ್ದವು ಎಂದು ಕೇಂದ್ರ ಸರಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಊರ್ಜಿತ್ ಪಟೇಲ್ ಅವರ ಅಧಿಕಾರಾವಧಿ ಮುಂದಿನ ಆಗಸ್ಟ್ ನಲ್ಲಿ ಮುಗಿಯಲಿದ್ದು, ಅವರು ಅವಧಿ ಪೂರೈಸಲಿದ್ದಾರೆ. ರಿಸರ್ವ್ ಬ್ಯಾಂಕ್ ನ ಸ್ವಾಯತ್ತತೆಗೆ ಕೇಂದ್ರ ಧಕ್ಕೆ ತರುತ್ತಿದೆಯೆಂದು ಊರ್ಜಿತ್ ಪಟೇಲ್ ಮತ್ತು ಡೆಪ್ಯುಟಿ ಗವರ್ನರ್ ವಿರಲ್ ಅವರು ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಊರ್ಜಿತ್ ಅವರ ರಾಜೀನಾಮೆ ಪಡೆಯಬಹುದು ಎಂದು ಊಹಿಸಲಾಗಿತ್ತು.

ಸಮ್ಮೇಳನವೊಂದರಲ್ಲಿ ವಿತ್ತ ಸಚಿವರಾದ ಅರುಣ್ ಜೇಟ್ಲಿ ಅವರು ರಿಸರ್ವ್ ಬ್ಯಾಂಕ್ ನೀತಿಯನ್ನು ಬಹಿರಂಗವಾಗಿಯೇ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಊರ್ಜಿತ್ ಪಟೇಲ್ ಅವರೇ ರಾಜೀನಾಮೆ ನೀಡಲಿದ್ದಾರೆ ಎಂಬ ಗಾಳಿಮಾತು ಕೂಡ ಹಬ್ಬಿತ್ತು. ಆದರೆ, ಈ ಗಾಳಿಮಾತನ್ನು ರಿಸರ್ವ್ ಬ್ಯಾಂಕ್ ಮೂಲಗಳೇ ತಳ್ಳಿಹಾಕಿದ್ದವು.
ಆದರೆ, ಕೆಲವೇ ದಿನಗಳಲ್ಲಿ ತಣ್ಣಗಾದ ಕೇಂದ್ರ ಸರಕಾರ, 'ಸಾರ್ವಜನಿಕ ಹಿತಾಸಕ್ತಿ' ಮತ್ತು 'ಭಾರತದ ಆರ್ಥಿಕತೆಯ ಅಭಿವೃದ್ಧಿ'ಗಾಗಿ ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಟ್ಟಿಗೆ ಕೆಲಸ ಮಾಡಬೇಕೆಂದು ಊರ್ಜಿತ್ ಪಟೇಲ್ ಅವರಿಗೆ ಪತ್ರ ಬರೆದಿತ್ತು. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಕೇಂದ್ರ ಸರಕಾರವೇ ಒಂದು ಹೆಜ್ಜೆ ಹಿಂದೆ ಇಟ್ಟಿತ್ತು.
ಹಿಂದೆ 1937ರಲ್ಲಿಯೇ ರಿಸರ್ವ್ ಬ್ಯಾಂಕ್ ನ ಪ್ರಥಮ ಗವರ್ನರ್ ಆಸ್ಬಾರ್ನ್ ಸ್ಮಿತ್ ಅವರು, ಸರಕಾರದ ಹಸ್ತಕ್ಷೇಪ ಸಹಿಸದೆ ರಾಜೀನಾಮೆ ಬಿಸಾಕಿದ್ದರು. 1957ರಲ್ಲಿ ಕೂಡ, ಜವಾಹರಲಾಲ್ ನೆಹರೂ ಆಡಳಿತವಿದ್ದಾಗ, ವಿತ್ತ ಸಚಿವರಾಗಿದ್ದ ಟಿಟಿ ಕೃಷ್ಣಮಾಚಾರಿ ಅವರು ಸ್ಟಾಂಪ್ ಡ್ಯೂಟಿ ಏರಿಸಬೇಕೆಂಬ ಪ್ರಸ್ತಾವವನ್ನು ಅಂದಿನ ರಿಸರ್ವ್ ಬ್ಯಾಂಕ್ ಗವರ್ನರ್ ಬೆನೆಗಲ್ ರಾಮ ರಾವ್ ಅವರು ವಿರೋಧಿಸಿದ್ದರು. ಆಗ, ನೆಹರೂ ಅವರು ರಾವ್ ಅವರಿಗೆ ಪತ್ರ ಬರೆದು, ಸೆಂಟ್ರಲ್ ಬ್ಯಾಂಕ್ ಸ್ವಾಯತ್ತತೆ ಯಾವತ್ತಿಗೂ ಅಬಾಧಿತ. ಆದರೆ, ಸರಕಾರದ ನೀತಿಗಳ ವಿರುದ್ಧ ರಿಸರ್ವ್ ಬ್ಯಾಂಕ್ ನೀತಿ ರೂಪಿಸಬಾರದು ಎಂದಿದ್ದರು. ರಾವ್ ಅವರು ಕೂಡ ರಾಜೀನಾಮೆ ನೀಡಿದ್ದರು.












Click it and Unblock the Notifications