ಭಾರತದಲ್ಲಿ ಜಾಗ್ರತೆ ವಹಿಸಿ: ತನ್ನ ಪ್ರಜೆಗಳಿಗೆ ಯುಎಇ ಎಚ್ಚರಿಕೆ
ನವದೆಹಲಿ, ಡಿಸೆಂಬರ್ 16: ಪೌರತ್ವ ತಿದ್ದುಪಡಿ ಕಾಯ್ದೆಯು ದೇಶದ ಅನೇಕ ಕಡೆ ಭಾರಿ ಪ್ರತಿಭಟನೆ, ಸಂಘರ್ಷಗಳಿಗೆ ಕಾರಣವಾಗಿರುವುದರಿಂದ ಈ ಸಂದರ್ಭದಲ್ಲಿ ಭಾರತದಲ್ಲಿರುವ ಮತ್ತು ಭಾರತಕ್ಕೆ ಪ್ರವಾಸ ಕೈಗೊಂಡಿರುವ ತನ್ನ ಪ್ರಜೆಗಳಿಗೆ ನವದೆಹಲಯಲ್ಲಿರುವ ಯುಎಇ ರಾಯಭಾರ ಕಚೇರಿ ಜಾಗ್ರತೆ ವಹಿಸುವಂತೆ ಸೂಚನೆ ನೀಡಿದೆ.
ಪ್ರತಿಭಟನೆಗಳು ಹೆಚ್ಚಾಗಿ ನಡೆಯುತ್ತಿರುವ ಪ್ರದೇಶಗಳಿಂದ ದೂರ ಇರುವಂತೆ ಮತ್ತು ಸದಾ ಜಾಗೃತರಾಗಿ ಇರುವಂತೆ ಅದು ತಿಳಿಸಿದೆ. ಯಾವುದೇ ತುರ್ತು ಸಂದರ್ಭದಲ್ಲಿ ಮತ್ತು ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸುವಂತೆ ಹೇಳಿದೆ.
ಭಾರತಕ್ಕೆ ಭೇಟಿ ನೀಡಿರುವ ಮತ್ತು ನೀಡಲಿರುವ ನಾಗರಿಕರು ವಿದೇಶಾಂಗ ಸಚಿವಾಲಯದ ತವಾಜುಡಿ ಸೇವಾ ವಿಭಾಗದಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಹಾಗೂ ಸಚಿವಾಲಯದ ವೆಬ್ಸೈಟ್ನಲ್ಲಿ ಲಭ್ಯವಿರುವ ಪ್ರಯಾಣ ಸಲಹೆಗಳು, ಸೂಚನೆಗಳನ್ನು ತಿಳಿದುಕೊಳ್ಳುವಂತೆ ಸಲಹೆ ನೀಡಿದೆ.

ಅಮೆರಿಕ, ಬ್ರಿಟನ್ ಮತ್ತು ಕೆನಡಾಗಳು ಕೂಡ ತಮ್ಮ ಪ್ರಜೆಗಳಿಗೆ ಪ್ರಯಾಣ ಮಾರ್ಗದರ್ಶಿ ಸೂಚನೆಗಳನ್ನು ನೀಡಿವೆ.
ರಾಜಧಾನಿ ದೆಹಲಿ, ಪಶ್ಚಿಮ ಬಂಗಾಳ, ಈಶಾನ್ಯದ ಬಹುತೇಕ ಎಲ್ಲ ರಾಜ್ಯಗಳು ಮತ್ತು ಉತ್ತರ ಪ್ರದೇಶದ ಹಲವೆಡೆ ಪ್ರತಿಭಟನೆಗಳು ಹಿಂಸಾಚಾರದ ಸ್ವರೂಪ ಪಡೆದುಕೊಂಡಿವೆ. ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಘರ್ಷಣೆಗಳು ನಡೆದಿವೆ. ಇನ್ನೂ ಕೆಲವು ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಪ್ರತಿಭಟನೆ ನಡೆಯುವ ಸ್ಥಳಗಳ ಸಮೀಪದ ಭೇಟಿಗಳನ್ನು ರದ್ದುಗೊಳಿಸಬೇಕು. ಅನಿವಾರ್ಯ ಸಂದರ್ಭಗಳಲ್ಲಿ ರಾಯಭಾರ ಕಚೇರಿಗಳನ್ನು ಸಂಪರ್ಕಿಸಿ ಸೂಕ್ತ ಭದ್ರತೆಯೊಂದಿಗೆ ತೆರಳಬೇಕು ಎಂದು ವಿವಿಧ ದೇಶಗಳು ಸೂಚನೆ ನೀಡಿವೆ.












Click it and Unblock the Notifications