ಮೋದಿ ಇಸ್ರೇಲ್ ಭೇಟಿ: ಟ್ವಿಟ್ಟರ್ ನಲ್ಲಿ ಪರ-ವಿರೋಧ ಚರ್ಚೆ
ನವದೆಹಲಿ, ಜುಲೈ 4: ಇಂದಿನಿಂದ (ಜು.4) ಮೂರು ದಿನಗಳ ಕಾಲ ಇಸ್ರೇಲ್ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರ ಈ ವಿದೇಶಿ ಪ್ರಯಾಣ ಅತ್ಯಂತ ಮಹತ್ವದ್ದು ಎನ್ನಿಸಿರುವುದಕ್ಕೆ ಕಾರಣ, ಭಾರತದ ಪ್ರಧಾನಿಯೊಬ್ಬರು ಪ್ರಪ್ರಥಮ ಬಾರಿಗೆ ಇಸ್ರೇಲ್ ಪ್ರವಾಸಕ್ಕೆ ತೆರಳುತ್ತಿರುವುದು.
ಈಗಾಗಲೇ ಮೋದಿ ಭೇಟಿ ಕುರಿತು ಎಲ್ಲೆಡೆ ಬಿರುಸಿನ ಚರ್ಚೆ ನಡೆಯುತ್ತಿದ್ದು, ಉಭಯ ದೇಶದ ನಾಯಕರೂ ಚರ್ಚಿಸಲಿರುವ ಮಹತ್ವದ ವಿಷಯಗಳ ಕುರಿತೂ ಸುದ್ದಿಯಾಗುತ್ತಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, 'ನನ್ನ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿ ಇಸ್ರೇಲಿಗೆ ಬರುತ್ತಿದ್ದಾರೆ' ಎಂದು ತಮ್ಮ ಸಂತಸವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.
ಕೃಷಿ ಮತ್ತು ನೀರಾವರಿ ಕ್ಷೇತ್ರಗಳ ಬೆಳವಣಿಗೆಯ ಕುರಿತಂತೆ ಉಭಯ ನಾಯಕರೂ ಗಂಭೀರ ಚರ್ಚೆ ನಡೆಸುವ ಸಾಧ್ಯತೆ ಇದೆ. ನರೇಂದ್ರ ಮೋದಿ ಭೇಟಿ ಇಸ್ರೇಲಿಗೆ ಅತ್ಯಂತ ಮಹತ್ವದ್ದಾಗಿರುವುದರಿಂದ ಈ ಕುರಿತು ಟ್ವಿಟ್ಟರ್ ನಲ್ಲಿಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಲವರು ಪ್ರಧಾನಿ ಮೋದಿಯವರ ಇಸ್ರೇಲ್ ಭೇಟಿಯನ್ನು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಈ ಭೇಟಿ ಅನಗತ್ಯ ಎಂದೂ, ಮುಜುಗರವನ್ನುಂಟುಮಾಡುತ್ತಿದೆ ಎಂದೂ ಪ್ರತಿಕ್ರಿಯಿಸಿದ್ದಾರೆ.
|
ಇಸ್ರೇಲ್ ಪ್ರವಾಸದ ಬಗ್ಗೆ ಮೋದಿ ಹೇಳಿದ್ದು...
ಆರ್ಥಿಕತೆ ಬಾಂಧವ್ಯವನ್ನು ಪ್ರೋತ್ಸಾಹಿಸುವ ಜೊತೆಗೆ ಜನರೊಂದಿಗೆ ಸಂವಾದ ನಡೆಸುವವರೆಗೂ ನನ್ನ ಇಸ್ರೇಲ್ ಭೇಟಿಯ ಕಾರ್ಯಕ್ರಮಗಳು ವಿಸ್ತರಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
|
ಸ್ಫೂರ್ತಿಯಾಗಲಿದೆ ಈ ಭೇಟಿ
ಪ್ರಧಾನಿ ಮೋದಿಯವರ ಇಸ್ರೇಲ್ ಭೇಟಿ ನಮ್ಮ ಶತ್ರುಗಳಿಗೆ ಸಮರ್ಥ ಮತ್ತು ಆಕ್ರಮಣಕಾರಿ ಪ್ರತಿಕ್ರಿಯೆ ನೀಡಲು ಸ್ಫೂರ್ತಿ ನೀಡಲಿದೆ ಎಂದು ಭಾವಿಸಿದ್ದೇವೆ. ಹೇಡಿಗಳಂತೆ ಬದುಕುವ ದಿನಕ್ಕೆ ಅಂತ್ಯ ಬೇಕಿದೆ ಎಂದು ಪ್ರೊ.ಎಂ.ಕೆ. ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
|
ಮಹತ್ವದ ಮೈಲಿಗಲ್ಲು
ಪ್ರಧಾನಿಯವರ ಇಸ್ರೇಲ್ ಭೇಟಿ ಭಾರತದ ಮಟ್ಟಿಗೊಂದು ಮಹತ್ವದ ಮೈಲಿಗಲ್ಲು. ಏಕೆಂದರೆ ಇಸ್ರೇಲ್ ತನ್ನ ರಾಷ್ಟ್ರವನ್ನು ಸುತ್ತಲ ಶತ್ರು ರಾಷ್ಟ್ರಗಳಿಂದ ಹೇಗೆ ರಕ್ಷಿಸಿಕೊಂದಿದೆ ಎಂಬ ತಂತ್ರವನ್ನು ಭಾರತವೂ ಅಗತ್ಯವಾಗಿ ಅರಿಯಬೇಕಿದೆ ಎಂದು ರವಿ ದೇವ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಭಾರತ ಮತ್ತಷ್ಟು ಸದೃಢಗೊಳ್ಳಲಿದೆ
ನಮ್ಮ ಆರ್ಥಿಕತೆ, ಸೇನೆ ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟ ಮತ್ತಷ್ಟು ಗಟ್ಟಿಯಾಗುವುದಕ್ಕೆ ಪ್ರಧಾನಿ ಮೋದಿಯವರ ಇಸ್ರೇಲ್ ಭೇಟಿ ಸಹಾಯಕವಾಗಲಿದೆ ಎಂದು ಹರಿಶಂಕರ್ ತಿವಾರಿ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಮುಜುಗರವನ್ನುಂಟುಮಾಡುವ ಸಂಗತಿ!
ಪ್ಯಾಲೆಸ್ತಿನ್ ನ ಭೂಮಿಯನ್ನು ಕಬಳಿಸಿದ ಇಸ್ರೇಲ್ ನಿಜಕ್ಕೂ ಯುದ್ಧಾಪರಾಧಿ. ಇಂಥ ಇಸ್ರೇಲ್ ಗೆ ನಮ್ಮ ಪ್ರಧಾನಿ ತೆರಳುತ್ತಿರುವುದು ನಿಜಕ್ಕೂ ನಮಗೆ ಮುಜುಗರವನ್ನುಂಟುಮಾಡುವ ಸಂಗತಿ ಎಂದು ವಖಾರ್ ಶೇಖ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ರೆಡ್ ಕಾರ್ಪೆಟ್ ಅಲ್ಲ, ಬ್ಲಡ್ ಕಾರ್ಪೆಟ್!
ಪ್ರಧಾನಿ ಮೋದಿಯವರಿಗೆ ಕೆಂಪುಹಾಸಿನ ಸ್ವಾಗತ ಕೋರುತ್ತಿರುವ ಇಸ್ರೇಲ್ ಹಾಸಿರುವುದು ಖಂಡಿತ ರೆಡ್ ಕಾರ್ಪೆಟ್ ಅಲ್ಲ, ಅದು ಪ್ಯಾಲೆಸ್ತೀನಿಯರ ರಕ್ತ ಹರಿದ ಬ್ಲಡ್ ಕಾರ್ಪೆಟ್ ಎಂದು ಆರಿಶ್ ಖುರೇಶಿ ಎನ್ನುವವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications