ಮೇಲ್ಮನೆಯಲ್ಲೂ ತ್ರಿವಳಿ ತಲಾಖ್ ಅಂಗೀಕಾರ: ಗಣ್ಯರಿಂದ ಮಿಶ್ರ ಪ್ರತಿಕ್ರಿಯೆ
ನವದೆಹಲಿ, ಜುಲೈ 30: ಇಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ತ್ರಿವಳಿ ತಲಾಖ್ ಮಸೂದೆ ಮಹಿಳೆಯರ ಸಬಲೀಕರಣ ಮತ್ತು ಸಮಾಜದಲ್ಲಿ ಅವರ ಘನತೆ ಹೆಚ್ಚುವುದಕ್ಕೆ ದಾರಿ ಮಾಡಿಕೊಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಎರಡು ಬಾರಿ ಲೋಕಸಭೆಯಲ್ಲಿ ಮಂಡನೆಯಾದರೂ, ರಾಜ್ಯಸಭೆಯಲ್ಲಿ ಮಂಡನೆಯಾಗದೆ ಉಳಿದಿದ್ದ ಮುಸ್ಲಿಂ ಮಹಿಳೆಯರ ರಕ್ಷಣಾ ಕಾಯ್ದೆ ಅಥವಾ ತ್ರಿವಳಿ ತಲಾಖ್ ಮಸೂದೆ ಕೊನೆಗೂ 99(ವಿರೋಧ 84) ಸಂಸದರ ಬೆಂಬಲದಿಂದ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡಿದೆ. ಈ ಕುರಿತು ಗೃಹಸಚಿನ ಅಮಿತ್ ಶಾ, ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸೇರಿದಂತೆ ವಿವಿಧ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.
ಪತ್ನಿಯರಿಗೆ ದಿಡೀರ್ ವಿಚ್ಛೇದನ ನೀಡುವ ಈ ತ್ರಿವಳಿ ತಲಾಖ್ ಪದ್ಧತಿಯ ವಿರುದ್ಧ ಕೆಲವು ಮುಸ್ಲಿಂ ಮಹಿಳೆಯರೇ ಧ್ವನಿ ಎತ್ತಿದ್ದರು. ತ್ರಿವಳಿ ತಲಾಖ್ ಅನ್ನು ಅಪರಾಧ ಎಂದು ಪರಿಗಣಿಸಿ, ಲಿಖಿತ ಕಾನೂನಾತ್ಮಕ ದಾಖಲೆಗಳಿಲ್ಲದೆ, ಮೌಖಿಕವಾಗಿ ಅಥವಾ ಎಸ್ ಎಂಎಸ್ ಮೂಲಕ ವಿಚ್ಛೇದನ ನೀಡುವವರಿಗೆ ಜೈಲು ಶಿಕ್ಷೆ ನೀಡುವ ಈ ಕಾಯ್ದೆಯನ್ನು ಇಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದು, ರಾಷ್ಟ್ರಪತಿಗಳ ಅಂಕಿತ ದೊರೆಯುತ್ತಿದ್ದಂತೆಯೇ ಈ ಕಾಯ್ದೆ ಜಾರಿಗೆ ಬರಲಿದೆ.

ನರೇಂದ್ರ ಮೋದಿ
ಮುಸ್ಲಿಂ ಮಹಿಳೆಯರ(ವಿವಾಹ ಹಕ್ಕು ರಕ್ಷಣೆ) ಮಸೂದೆ 2019 ಅನ್ನು ಮಂಡನೆ ಮಾಡಲು ಬೆಂಬಲ ನೀಡಿದ ಸಂಸತ್ತಿನ ಎರಡೂ ಮನೆಯ ಎಲ್ಲ ಸಂಸದರಿಗೂ ನನ್ನ ಅಭಿನಂದನೆಗಳು. ಅವರ ಈ ನಡೆ ಇತಿಹಾಸದಲ್ಲಿ ಎಂದಿಗೂ ನೆನಪಿನಲ್ಲುಳಿಯುತ್ತದೆ. ಈ ಮಸೂದೆ ಮಹಿಳೆಯರ ಸಬಲೀಕರಣಕ್ಕೆ ಮತ್ತು ಸಮಾಜದಲ್ಲಿ ಅವರ ಘನತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ- ನರೇಂದ್ರ ಮೋದಿ, ಪ್ರಧಾನಿ.

ಅಸಾದುದ್ದಿನ್ ಓವೈಸಿ
2014 ರಿಂದಲೂ ಮುಸ್ಲಿಮರ ಮೇಲೆ ಬೇರೆ ಬೇರೆ ಕಾರಣಕ್ಕೆ ದಾಳಿ ನಡೆಯುತ್ತಿದೆ. ಆದರೆ ಕೇವಲ ತ್ರಿವಳಿ ತಲಾಖ್ ಅನ್ನು ಮಾತ್ರವೇ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ನಾವು ಎಂದಿಗೂ ಇದನ್ನು ಒಪ್ಪುವುದದಿಲ್ಲ, ವಿರೋಧಿಸುತ್ತೇವೆ- ಅಸಾದುದ್ದಿನ್ ಓವೈಸಿ, ಎಐಎಂಐಎಂ ಸಂಸದ

ರವಿಶಂಕರ್ ಪ್ರಸಾದ್
"ಇದೊಂದು ಐತಿಹಾಸಿಕ ದಿನ. ಉಭಯ ಸದನಗಳೂ ಉಸ್ಲಿಂ ಮಹಿಳೆಯರಿಗೆ ನ್ಯಾಯ ನೀಡಿವೆ. ಇದು ಭಾರತ ಬದಲಾಗುತ್ತಿರುವುದರ ಸಂಕೇತ"- ರವಿಶಂಕರ್ ಪ್ರಸಾದ್, ಕಾನೂನು ಸಚಿವ

ಕಮಾಲ್ ಫಾರೂಖಿ
"ನಮ್ಮ ಬಳಿ ಇನ್ನೊಂದು ಅವಕಾಶವಿದೆ. ನಾವು ಈ ಕಾನೂನಿನ ವಿರುದ್ಧ ಸುಪ್ರೀಂ ಕೋರ್ಟಿಗೂ ಹೋಗಹುದು. ಇಂದು ಸಂವಿಧಾನ ಅಪಾಯದಲ್ಲಿದೆ"- ಕಮಾಲ್ ಫಾರೂಖಿ , ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್(ಎಐಎಂಪಿಎಲ್ ಬಿ)

ಯೋಗಿ ಆದಿತ್ಯನಾಥ್
ಮಹಿಳೆಯರ ಘನತೆಯ ಪ್ರತೀಕವಾದ ಈ ಮಸೂದೆಯನ್ನು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವವರೇ ವಿರೋಧಿಸಿದ್ದು ದುರದೃಷ್ಟ- ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಮುಖ್ಯಮಂತ್ರಿ

ಅಮಿತ್ ಶಾ
ಇದು ಪ್ರಜಾಪ್ರಭುತ್ವದ ಮಹತ್ವದ ದಿನ. ಅನಿಷ್ಟ ಪದ್ಧತಿಯಿಂದ ಮುಸ್ಲಿಂ ಮಹಿಳೆಯರನ್ನು ಹೊರತರುವ ತಮ್ಮ ಸಂಕಲ್ಪವನ್ನು ಈಡೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಈ ಐತಿಹಾಸಿಕ ಮಸೂದೆಯನ್ನು ಮಂಡಿಸಿದ ಎಲ್ಲಾ ಪಕ್ಷದವರಿಗೂ ನನ್ನ ಅಭಿನಂದನೆಗಳು- ಅಮಿತ್ ಶಾ, ಸಂಸದ












Click it and Unblock the Notifications