ವಿರೋಧದ ನಡುವೆಯೂ ಎರಡು ಪ್ರಮುಖ ಮಸೂದೆ ಅಂಗೀಕಾರ
ನವದೆಹಲಿ, ಜುಲೈ 25: ವಿಪಕ್ಷಗಳ ಪ್ರಬಲ ವಿರೋಧದ ನಡುವೆಯೂ ಸಂಸತ್ನಲ್ಲಿ ಇಂದು ಎರಡು ಪ್ರಮುಖ ಮಸೂದೆಗಳು ಅಂಗೀಕಾರವಾಗಿವೆ.
ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಇಂದು ಅಂಗೀಕಾರವಾಗಿದೆ. ಆದರೆ ಇದಕ್ಕೆ ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಮತ್ತು ಇತರೆ ವಿಪಕ್ಷಗಳು ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದ್ದವು.
ಬಹು ಚರ್ಚೆ, ವಿರೋಧದ ಬಳಿಕ, ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮಸೂದೆಯನ್ನು ವಿರೋಧಿಸಿ ಸದನದಿಂದ ಹೊರೆನಡೆದವು. ಅಂತಿಮವಾಗಿ ದ್ವನಿ ಮತದ ಮೂಲಕ ತ್ರಿವಳಿ ತಲಾಖ್ ಮಸೂದೆ ಅಂಗೀಕಾರವಾಯಿತು.

ರಾಜ್ಯಸಭೆಯಲ್ಲಿ ಇಂದು ಆರ್ಟಿಐ ಕಾಯ್ದೆ ತಿದ್ದುಪತಿಗೆ ಅಂಗೀಕಾರ ದೊರೆಯಿತು. ಅಲ್ಲಿಯೂ ಸಹ ಕಾಂಗ್ರೆಸ್ ಪಕ್ಷದ ಸದಸ್ಯರು ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಗುಲಾಂ ನಬಿ ಆಜಾದ್ ಸೇರಿದಂತೆ ಕಾಂಗ್ರೆಸ್ ಹಾಗೂ ವಿಪಕ್ಷಗಳ ಹಲವು ಸದಸ್ಯರು ಆರ್ಟಿಐ ಕಾಯ್ದೆಯ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ತಿದ್ದುಪಡಿಯು ಕಾಯ್ದೆಯನ್ನು ನಿಶ್ಯಕ್ತಗೊಳಿಸುತ್ತದೆ ಎಂದು ವಾದಿಸಿದರು ಆದರೆ ಅಂತಿಮವಾಗಿ ತಿದ್ದುಪಡಿ ಅಂಗೀಕಾರವಾಯಿತು.
ರಾಜ್ಯಸಭೆಯಲ್ಲಿಯೂ ಸಹ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕಾಯ್ದೆಯ ತಿದ್ದುಪಡಿ ವಿರೋಧಿಸಿ ಸದನದಿಂದ ಹೊರನಡೆದರು.
ಇದೇ ದಿನ ಲೋಕಸಭೆಯ ಕಲಾಪವನ್ನು ಆಗಸ್ಟ್ 7 ರವರೆಗೆ ನಡೆಸುವ ನಿರ್ಣಯವನ್ನೂ ತೆಗೆದುಕೊಳ್ಳಲಾಯಿತು. ಜೂನ್ 17 ರಂದು ಆರಂಭವಾಗಿರುವ ಸಂಸತ್ ಮುಂಗಾರು ಅಧಿವೇಶನವು ಜುಲೈ 26 ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಮಸೂದೆಗಳು ಮಂಡನೆ ಆಗಬೇಕಿರುವ ಕಾರಣ ಹತ್ತು ದಿನಗಳ ಕಾಲ ಹೆಚ್ಚಿಗೆ ಅಧಿವೇಶನ ನಡೆಸಲಾಗುತ್ತಿದ್ದು, ಆಗಸ್ಟ್ 7 ರಂದು ಅಧಿವೇಶನ ಕೊನೆಗೊಳ್ಳಲಿದೆ.












Click it and Unblock the Notifications