'ಕೇಂದ್ರ ಸರಕಾರದ ವಿರುದ್ಧ ಮಾತನಾಡುವವರೆಲ್ಲ ರಾಷ್ಟ್ರವಿರೋಧಿಗಳು'
ರಾಷ್ಟ್ರವಿರೋಧಿ ಎಂಬ ಪದ ದುರ್ಬಳಕೆಯಾಗುತ್ತಿದೆ. ಸರಕಾರದ ವಿರುದ್ಧ ಧ್ವನಿ ಎತ್ತಿದರೆ ಅಂಥವರ ವಿರುದ್ಧ ರಾಷ್ಟ್ರ ವಿರೋಧಿ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ದೆಹಲಿ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಎಪಿ ಶಾ ಆತಂಕ ವ್ಯಕ್ತಪಡಿಸಿದ್ದಾರೆ
ನವದೆಹಲಿ, ಏಪ್ರಿಲ್ 20: ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಕಿ, ನಿಲ್ಲಬೇಕೆಂದು ನಿಯಮ ಮಾಡಿ ರಾಷ್ಟ್ರೀಯತೆಯನ್ನು ಬಲವಂತವಾಗಿ ಹೇರಲಾಗುತ್ತಿದೆ. ಇದು ಬೇಕೆ ಎಂದು ದೆಹಲಿ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಪಿ ಶಾ ಪ್ರಶ್ನಿಸಿದ್ದಾರೆ.
ಎಂ ಎನ್ ರಾಯ್ ಸಭಾಂಗಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಉಪನ್ಯಾಸ ನೀಡಿದ ಅವರು, ನಾವು ಏನು ತಿನ್ನಬೇಕು ಅನ್ನೋದನ್ನು ಕೂಡ ಯಾಕೆ ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.
ದುರದೃಷ್ಟವೆಂದರೆ, ನಮ್ಮ ಕಲಿಕಾ ಕೇಂದ್ರಗಳ ಮೇಲೆ ಕೂಡ ದಾಳಿಗಳಾಗುತ್ತಿವೆ. ಸ್ವತಂತ್ರ ಆಲೋಚನೆಗಳನ್ನು ದಮನ ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದು ಕೂಡ ಅವರು ಹೇಳಿದ್ದಾರೆ. ನಾನು ಪ್ರೀತಿಸುವ ಈ ದೇಶದಲ್ಲಿ ಯಾರಾದರೂ ಸರಕಾರ ಒಪ್ಪುವ ಆಲೋಚನೆಗಿಂತ ಭಿನ್ನವಾದದ್ದನ್ನು ಹೇಳಿದರೆ ಅವರನ್ನು ರಾಷ್ಟ್ರವಿರೋಧಿ ಎಂದು ಬಿಂಬಿಸಲಾಗುತ್ತದೆ ಎಂದಿದ್ದಾರೆ.['ಸಿನಿಮಾ ಭಾಗವಾಗಿ ರಾಷ್ಟ್ರಗೀತೆ ಪ್ರಸಾರವಾದರೆ ಎದ್ದು ನಿಲ್ಲಬೇಕಿಲ್ಲ']

ಭಿನ್ನಾಭಿಪ್ರಾಯ ಹಾಗೂ ಟೀಕೆಗಳ ಧ್ವನಿಯನ್ನು ಕುಗ್ಗಿಸುವ ಕಾರಣಕ್ಕೆ ರಾಷ್ಟ್ರವಿರೋಧಿ ಎಂಬ ಪದ ಬಳಸಲಾಗುತ್ತಿದೆ. ಇನ್ನೂ ಆತಂಕಕಾರಿ ವಿಚಾರ ಏನೆಂದರೆ ಅಂಥವರ ವಿರೋಧಿ ದೇಶವಿರೋಧಿ ಪ್ರಕರಣ ದಾಖಲಿಸುತ್ತಿದ್ದಾರೆ ಎಂದಿದ್ದಾರೆ.
ರಾಷ್ಟ್ರಗೀತೆ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯ ಅಂದರೆ ನಿಮಗನಿಸಿದ್ದನ್ನು ವ್ಯಕ್ತಪಡಿಸುವುದಷ್ಟೇ ಅಲ್ಲ, ನಿಮಗೆ ಏನು ಮಾತನಾಡಬಾರದು ಹಾಗೂ ವ್ಯಕ್ತಪಡಿಸಬಾರದು ಎಂದು ನಿರ್ಧರಿಸುವ ಹಕ್ಕು ಕೂಡ ಇದೆ ಎಂದಿದ್ದಾರೆ.[ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ]
ಆದರೆ, ಕೋರ್ಟ್ ಮಧ್ಯಪ್ರವೇಶಿಸಿ ನಮ್ಮ ಮೂಲಭೂತ ಹಕ್ಕುಗಳನ್ನೇ ನಿಯಂತ್ರಿಸುತ್ತಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications