ಈ ಗೆಲುವು ನರೇಂದ್ರ ಮೋದಿಗೆ ಸ್ಪಷ್ಟ ಎಚ್ಚರಿಕೆ: ರಾಹುಲ್ ಗಾಂಧಿ
ನವದೆಹಲಿ, ಡಿಸೆಂಬರ್ 11: ಬಿಜೆಪಿ ಮುಕ್ತ ಭಾರತ ನಮ್ಮ ಗುರಿ ಅಲ್ಲ. ಭಿನ್ನಾಭಿಪ್ರಾಯದೊಂದಿಗೆ ಹೋರಾಡುತ್ತೇವೆ, ಪ್ರಜಾಸತ್ತಾತ್ಮಕವಾಗಿಯೇ ಅವರನ್ನು ಮಣಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ನ ಗೆಲುವಿನ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಈ ಪಂಚ ರಾಜ್ಯ ಚುನಾವಣಾ ಸೋಲು ನರೇಂದ್ರ ಮೋದಿಗೆ ಹಾಗೂ ಬಿಜೆಪಿಗೆ ಸ್ಪಷ್ಟ ಸಂದೇಶ ಎಂದು ಅವರು ಹೇಳಿದರು.
ಮೋದಿ ಅವರ ಯೋಜನೆಗಳು ಜನರ ಅಭಿವೃದ್ಧಿಯ ಗುರಿ ಹೊಂದಿಲ್ಲ, ಮೋದಿ ಅವರು ಜನರ ಬಳಿ ಸುಳ್ಳು ಹೇಳಿದ್ದಾರೆ, ರಫೆಲ್ನಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂಬುದೆಲ್ಲದರ ಬಗ್ಗೆ ಬೇಸರಗೊಂಡಿರುವ ಜನರು ಇಂದು ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.

'ಮಹಾಘಟಬಂಧನ್ ಗಟ್ಟಿಯಾಗಿದೆ'
ಮಹಾಘಟಬಂಧನ್ ಬಗ್ಗೆ ಮಾತನಾಡಿದ ಅವರು, ನಿನ್ನೆಯಷ್ಟೆ ನಾವು ಸಭೆ ಸೇರಿದ್ದೆವು. ನಾವೆಲ್ಲಾ ಬಹಳ ಒಗ್ಗಟ್ಟಾಗಿದ್ದೀವಿ. ಒಟ್ಟಾಗಿ ಮೋದಿ ಅವರನ್ನು ಸೋಲಿಸುತ್ತೇವೆ. ಮೋದಿ ಅವರಿಗೆ ಈ ಲೋಕಸಭಾ ಚುನಾವಣೆ ಅಷ್ಟು ಸುಲಭವಲ್ಲ ಎಂದು ಅವರು ಹೇಳಿದರು.

ರೈತರ ಸಾಲಮನ್ನಾ: ರಾಹುಲ್
ಚುನಾವಣೆ ಸಮಯದಲ್ಲಿ ತಾವು ನೀಡಿದ್ದ ಎಲ್ಲ ಭರವೆಯನ್ನು ತಪ್ಪದೇ ಈಡೇರಿಸುತ್ತೇವೆ ಎಂದು ಹೇಳಿದ ರಾಹುಲ್ ಗಾಂಧಿ ಸರ್ಕಾರ ರಚನೆ ಆದ ಕೂಡಲೇ ರೈತರ ಸಾಲಮನ್ನಾ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಇವಿಎಂ ಬಗ್ಗೆ ಅನುಮಾನ ತೀರಿಲ್ಲ: ರಾಹುಲ್
ಇವಿಎಂ ಬಗ್ಗೆ ಕಾಂಗ್ರೆಸ್ ಅನುಮಾನ ಪಡುತ್ತಿತ್ತು ಆದರೆ ಈಗ ಅದು ಗೆದ್ದಿದೆ. ಈಗ ಇವಿಎಂ ಬಗ್ಗೆ ಅನುಮಾನ ಸ್ಪಷ್ಟವಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ. ಇವಿಎಂ ಬಗ್ಗೆ ಕೇವಲ ಕಾಂಗ್ರೆಸ್ ಮಾತ್ರ ಪ್ರಶ್ನೆ ಮಾಡುತ್ತಿಲ್ಲ. ವಿಶ್ವದಾದ್ಯಂತ ಹಲವು ದೇಶಗಳ ಹಲವು ಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಪೂರ್ಣ ಉತ್ತರ ಸಿಗುವವರೆಗೂ ಇವಿಎಂ ಬಗ್ಗೆ ಪ್ರಶ್ನೆಗಳು ಕೇಳುತ್ತಲೇ ಇರುತ್ತೇವೆ ಎಂದು ಅವರು ಹೇಳಿದರು.

'ತೆಲಂಗಾಣದಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಿದ್ದೆ'
ಈ ಗೆಲುವು ಕಾಂಗ್ರೆಸ್ ಕಾರ್ಯಕರ್ತರ ಮತ್ತು ಪ್ರಜಾಪ್ರಭುತ್ವವನ್ನು ಪ್ರೀತಿಸುವ ಜನಗಳ ಗೆಲುವು ಎಂದ ರಾಹುಲ್ ಗಾಂಧಿ, ಕಾಂಗ್ರೆಸ್ ಸೋತ ರಾಜ್ಯಗಳಲ್ಲಿ, ಗೆದ್ದಿರುವ ಪಕ್ಷಗಳಿಗೆ ಅಭಿನಂದನೆಗಳು ಹಾಗೂ ಅಲ್ಲಿಯೂ ಸಹ ಅವಿರತ ದುಡಿದ ಕಾರ್ಯಕರ್ತರಿಗೆ ಅಭಿನಂದನೆ ಎಂದರು. ತೆಲಂಗಾಣದಲ್ಲಿ ಇನ್ನಷ್ಟು ಉತ್ತಮ ಫಲಿತಾಂಶವನ್ನು ನಿರೀ್ಕಷಿಸಿದ್ದೆ ಎಂದು ಅವರು ಹೇಳಿದರು.











Click it and Unblock the Notifications