ದೆಹಲಿ ಗಲಭೆ ಪ್ರಕರಣ: ತಿಹಾರ್ ಜೈಲಿನಿಂದ ಬಿಡುಗಡೆಯಾದ ಮೂವರ ಪ್ರತಿಕ್ರಿಯೆ
ನವದೆಹಲಿ, ಜೂನ್ 17: "ನಮ್ಮನ್ನು ಜೈಲಿಗೆ ಹಾಕುವುದರ ಮೂಲಕ ಬೆದರಿಸುವುದಕ್ಕೆ ಯಾವುದೇ ಕಾರಣಕ್ಕೂ ಸಾಧ್ಯವಾಗುವುದಿಲ್ಲ. ಒಂದು ವೇಳೆ ಅವರು ನಮ್ಮನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದರೆ, ಅದು ನಮ್ಮ ಪ್ರತಿಭಟನೆಯನ್ನು ಮುಂದುವರಿಸುವುದಕ್ಕೆ ಪ್ರೋತ್ಸಾಹಿಸಿದಂತೆ ಆಗುತ್ತದೆ," ಎಂದು ಸಾಮಾಜಿಕ ಹೋರಾಟಗಾರ್ತಿ ನತಾಶಾ ನಾರ್ವಾಲ್ ಹೇಳಿದ್ದಾರೆ.
ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಪಿತೂರಿ ನಡೆಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಮೂವರು ವಿದ್ಯಾರ್ಥಿ ಮುಖಂಡರನ್ನು ತತ್ ಕ್ಷಣವೇ ಬಿಡುಗಡೆಗೊಳಿಸುವಂತೆ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿತು.
ನವದೆಹಲಿಯ ತಿಹಾರ್ ಜೈಲಿನಿಂದ ಗುರುವಾರ ನತಾಶಾ ನರ್ವಾನ್, ದೇವಾಂಗನ ಕಲಿತಾ ಹಾಗೂ ಆಸಿಫ್ ಇಕ್ಬಾಲ್ ತನ್ಹಾ ಬಿಡುಗಡೆಯಾದರು. ಜೈಲಿನಿಂದ ಬಿಡುಗಡೆ ಬೆನ್ನಲ್ಲೇ ಮೂವರು ಸಾಮಾಜಿಕ ಹೋರಾಟಗಾರ್ತಿಯರು ಪ್ರತಿಕ್ರಿಯೆ ನೀಡಿದ್ದಾರೆ.

ತಿಹಾರ್ ಜೈಲಿನಿಂದ ಹೊರ ಬಂದವರು ಹೇಳಿದ್ದೇನು?:
"ಇದು ಸರ್ಕಾರದ ಹತಾಶೆಯನ್ನು ಎತ್ತಿ ತೋರಿಸುತ್ತದೆ, ಆದರೆ ನಾವು ಅವರಿಗೆ ಹೆದರುವ ಮಹಿಳೆಯರೇ ಅಲ್ಲ," ಎಂದು ದೇವಾಂಗನಾ ಕಲಿತಾ ಹೇಳಿದ್ದಾರೆ. ತಿಹಾರ್ ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ಅಲ್ಲಿ ನೆರೆದ ಜನರನ್ನು ಕಂಡು, ""ಸ್ನೇಹಿತರಿಂದ, ಹಿತೈಷಿಗಳಿಂದ ನಮಗೆ ಅಪಾರ ಬೆಂಬಲ ದೊರೆತ ಕಾರಣ ನಾವು ಬದುಕುಳಿದೆವು. ಅವರೆಲ್ಲರಿಗೂ ಧನ್ಯವಾದಗಳು," ಎಂದು ಹೇಳಿದ್ದಾರೆ.
ದೆಹಲಿ ಉಚ್ಛ ನ್ಯಾಯಾಲಯಕ್ಕೆ ಧನ್ಯವಾದ:
"ಅದು ಹೇಗೇ ಆದರೂ, ನಮ್ಮ ನಂಬಿಕೆಯನ್ನು ಎತ್ತಿ ಹಿಡಿದಿದ ದೆಹಲಿ ಉಚ್ಛ ನ್ಯಾಯಾಲಯಕ್ಕೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ನಮ್ಮ ಯಾವುದೇ ಪ್ರತಿಭಟನೆಗಳು ಭಯೋತ್ಪಾದನೆ ಆಗಿರಲಿಲ್ಲ. ಇದು ಮಹಿಳೆಯರ ನೇತೃತ್ವದಲ್ಲಿ ನಡೆಸಿದ ಪ್ರಜಾಪ್ರಭುತ್ವ ಪ್ರತಿಭಟನೆಯಾಗಿತ್ತು. ಅವರು ನಮ್ಮನ್ನು ಜೈಲಿಗೆ ಕಳುಹಿಸುವ ಮೂಲಕ ಬೆದರಿಸಲು ಪ್ರಯತ್ನಿಸಿದ್ದು ಅದು ಸಾಧ್ಯವಾಗಲಿಲ್ಲ. ನಮ್ಮನ್ನು ಬಂಧಿಸುವ ಬೆದರಿಕೆ ಹಾಕಿದರೆ, ಅದು ನಮ್ಮ ಹೋರಾಟವನ್ನು ಮುಂದುವರಿಸುವ ಸಂಕಲ್ಪವನ್ನು ಬಲಪಡಿಸುತ್ತದೆ," ಎಂದು ನತಾಶಾ ನಾರ್ವಾಲ್ ಎಚ್ಚರಿಕೆ ನೀಡಿದ್ದಾರೆ.

ದೆಹಲಿ ಗಲಭೆ ಪ್ರಕರಣದ ಆರೋಪಿಗಳಿಗೆ ಜಾಮೀನು:
2020ರ ಮೇ ತಿಂಗಳಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿ ನತಾಶಾ ನರ್ವಾನ್, ದೇವಾಂಗನ ಕಲಿತಾ ಹಾಗೂ ಆಸಿಫ್ ಇಕ್ಬಾಲ್ ತನ್ಹಾರನ್ನು ಬಂಧಿಸಲಾಗಿತ್ತು. ಕಳೆದ 2021ರ ಜೂನ್ 15ರಂದು ದೆಹಲಿ ಹೈಕೋರ್ಟ್ ಈ ಮೂವರಿಗೂ ಜಾಮೀನು ನೀಡಿದ್ದು, ಆರೋಪಿಗಳಿಗೆ ತಲಾ 50,000 ರೂ. ವೈಯಕ್ತಿಕ ಬಾಂಡ್ಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು.
ಮೂವರು ಆರೋಪಿಗಳಿಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್ ಆರೋಪಿಗಳು ತಮ್ಮ ನಿವಾಸ ಬದಲಾವಣೆಯ ಸಂದರ್ಭದಲ್ಲಿ ಪೊಲೀಸ್ ಠಾಣಾ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಅಲ್ಲದೆ, ಪ್ರಕರಣದ ಯಾವುದೇ ಸಾಕ್ಷಿದಾರರೊಂದಿಗೆ ಸಂಪರ್ಕ ಮಾಡದಂತೆ ಅಥವಾ ಸಾಕ್ಷ್ಯಗಳ ನಾಶ ಮಾಡದಂತೆ ಆದೇಶಿಸಿದೆ.












Click it and Unblock the Notifications