ಕ್ರಿಸ್ಮಸ್ ರಜೆಗೆ ಕುತ್ತಿಲ್ಲ; ಪ್ರಬಂಧ ಸ್ಪರ್ಧೆ ಕಡ್ಡಾಯವೂ ಅಲ್ಲ
ನವದೆಹಲಿ, ಡಿ. 15: ಕ್ರಿಸ್ಮಸ್ ದಿನವನ್ನು ಉತ್ತಮ ಆಡಳಿತ ದಿನವಾಗಿ ಆಚರಿಸಲು ಕೇಂದ್ರ ಸರ್ಕಾರ ಸೂಚಿಸಿದೆ ಎಂಬ ಮಾಧ್ಯಮಗಳ ವರದಿ ಸುಳ್ಳು ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಸ್ಪಷ್ಟಪಡಿಸಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಹಿಂದೂ ಮಹಾಸಭಾ ಸಂಸ್ಥಾಪಕ ಮದನ ಮೋಹನ ಮಾಳವೀಯ ಅವರ ಜನ್ಮದಿನದ ನಿಮಿತ್ತ ಕ್ರಿಸ್ಮಸ್ ದಿನದಂದು ಉತ್ತಮ ಆಡಳಿತ ದಿನ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳಲ್ಲಿ ಡಿ. 25ರಂದು ಉತ್ತಮ ಆಡಳಿತ ದಿನ ಆಚರಿಸಬೇಕು. ಪ್ರಬಂಧ ಸ್ಪರ್ಧೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು ಆದೇಶ ಹೊರಡಿಸಿದೆ. ಈಗಾಗಲೇ ನವೋದಯ ಶಾಲೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರಿಂದ ಸರ್ಕಾರದ ಕ್ರಮಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. [ಸ್ಮೃತಿ ಇರಾನಿ ರಾಷ್ಟ್ರಪತಿ ಆಗ್ತಾರಂತೆ]

ಈ ಕಾರಣದಿಂದ ಕೇಂದ್ರ ಶಿಕ್ಷಣ ಸಚಿವಾಲಯ ಸೋಮವಾರ ಟ್ವಿಟ್ಟರ್ ಮೂಲಕ ಸ್ಪಷ್ಟೀಕರಣ ನೀಡಿದೆ. ಕ್ರಿಸ್ಮಸ್ ದಿನವಾದ ಡಿ. 25ರಂದು ಶಾಲೆ ತೆರೆದಿಡುವ ಯೋಚನೆ ಕೇಂದ್ರ ಸರ್ಕಾರಕ್ಕಿಲ್ಲ. ಅಲ್ಲದೆ, ಹಮ್ಮಿಕೊಂಡಿರುವ ಪ್ರಬಂಧ ಸ್ಪರ್ಧೆಯು ಆನ್ಲೈನ್ ಆಗಿದ್ದು, ಐಚ್ಛಿಕವಾಗಿದೆ ಎಂದು ಹೇಳಿಕೆ ನೀಡಿದೆ. [ಸಂಸ್ಕೃತ-ಜರ್ಮನಿ ಏನಿದು ಸಂಬಂಧ?]
ನಂತರ ಪತ್ರಿಕಾ ಪ್ರಕಟಣೆಯನ್ನೂ ನೀಡಲಾಗಿದ್ದು, ಕ್ರಿಸ್ಮಸ್ ದಿನದಂದು ಸಿಬಿಎಸ್ಸಿ ಕಚೇರಿಗೂ ರಜೆ ನೀಡಲಾಗಿದೆ. ಚಳಿಗಾಲದ ರಜೆ ಇಲ್ಲದ ಶಾಲೆಗಳಲ್ಲಿ ಮಾತ್ರ ಪ್ರಬಂಧ ಸ್ಪರ್ಧೆ ನಡೆಸಲು ಸೂಚಿಸಲಾಗಿದ್ದು, ಅದೂ ಐಚ್ಛಿಕವಾಗಿದೆ ಎಂದು ಸ್ಮೃತಿ ಇರಾನಿ ತಿಳಿಸಿದ್ದಾರೆ. [ಎಲ್.ಎಲ್. ಭೈರಪ್ಪಗೆ ರಾಷ್ಟ್ರೀಯ ಪ್ರೊಫೆಸರ್ ಗೌರವ]












Click it and Unblock the Notifications