ಸಿಂಘ್ವಿ ಗೆದ್ದಲು ವಾದ ತಿರಸ್ಕೃತ: 56 ಕೋಟಿ ರೂ. ದಂಡ
ಬೆಂಗಳೂರು, ನ. 12: ರಾಜ್ಯಸಭೆ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ಅಭಿಷೇಕ ಮನು ಸಿಂಘ್ವಿ ಅವರ ಮೇಲೆ ತೆರಿಗೆ ಅಪರಾಧ ಎಸಗಿದ ಆರೋಪ ಬಂದಿದೆ. ಈ ಕುರಿತು ಆಂಗ್ಲ ದೈನಿಕ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಟಿಸಿದೆ.
ತಮ್ಮ ಆದಾಯದ ದಾಖಲೆಗಳನ್ನು ಗೆದ್ದಲುಗಳು ತಿಂದಿವೆ ಎಂಬ ಅಭಿಷೇಕ ಸಿಂಘ್ವಿ ಅವರ ವಾದವನ್ನು ಆದಾಯ ತೆರಿಗೆ ಇತ್ಯರ್ಥ ಆಯೋಗ (ಐಟಿಎಸ್ಸಿ) ತಿರಸ್ಕರಿಸಿದ್ದು, ಅವರಿಗೆ 56 ಕೋಟಿ ರೂ. ದಂಡ ವಿಧಿಸಿದೆ.

ತಮ್ಮ ಆದಾಯ ಕುರಿತ ದಾಖಲೆಗಳನ್ನು ಗೆದ್ದಲು ತಿಂದುಬಿಟ್ಟಿವೆ ಎಂದು ಅಭಿಷೇಕ ಸಿಂಘ್ವಿ 2012ರ ಡಿಸೆಂಬರ್ 13ರಂದು ಆಯೋಗಕ್ಕೆ ತಿಳಿಸಿದ್ದರು. ಅಲ್ಲದೆ, 2013ರಲ್ಲಿ ತಮಗೆ ದಂಡ ಹಾಗೂ ಕಾನೂನು ಕ್ರಮದಿಂದ ವಿನಾಯಿತಿ ನೀಡಬೇಕೆಂದು ಮನವಿ ಸಲ್ಲಿಸಿದ್ದರು.
ಸಿಂಗ್ವಿ ಅವರು ತಮ್ಮ ಕಚೇರಿಯ ಸಿಬ್ಬಂದಿಗಾಗಿ ಮೂರು ವರ್ಷಗಳಲ್ಲಿ 5 ಕೋಟಿ ರೂ. ಮೌಲ್ಯದ ಲ್ಯಾಪ್ಟಾಪ್ಗಳನ್ನು ಖರೀದಿಸಿದ್ದಾರೆಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ವಕೀಲರಲ್ಲಿಯೇ ನಾನು ಹೆಚ್ಚು ತೆರಿಗೆ ಪಾವತಿಸುವವ
ಈ ಕುರಿತು ಇಂಡಿಯನ್ ಎಕ್ಸ್ಪ್ರೆಸ್ಗೆ ಪ್ರತಿಕ್ರಿಯೆ ನೀಡಿರುವ ಸಿಂಘ್ವಿ, ಅತಿ ಹೆಚ್ಚು ತೆರಿಗೆ ಪಾವತಿಸುವ ವಕೀಲರಲ್ಲಿಯೇ ನಾನು ಪ್ರಥಮ ಅಥವಾ ದ್ವಿತೀಯ ಸ್ಥಾನದಲ್ಲಿದ್ದೇನೆ. ಈ ಪ್ರಕರಣದಲ್ಲಿ ಕೂಡ ಸಂಪೂರ್ಣ ಮೊತ್ತವನ್ನು ಚೆಕ್ನಲ್ಲಿ ನೀಡಲಾಗಿದ್ದು, ಅದು ವೆಚ್ಚವಾಗಿದೆ. ಇದೊಂದು ಅತಿಹೆಚ್ಚು ವೆಚ್ಚ ಮಾಡಿದ ಪ್ರಕರಣವಾಗಿದೆ. ಆದರೆ, ಇಲಾಖೆ ಒಪ್ಪಿಕೊಳ್ಳುತ್ತಿಲ್ಲ. ಇಲಾಖೆ ತನಿಖೆ ಆರಂಭಿಸುವುದಕ್ಕಿಂತ ಮೊದಲೇ ಈ ಕುರಿತು ನಾನು ತಿಳಿಸಿದ್ದೇನೆ, ಇದಕ್ಕೂ ಮುಂಚೆಯೇ ಪೊಲೀಸರಿಗೆ ನನ್ನ ದಾಖಲೆ ನಾಶವಾಗಿರುವ ಕುರಿತು ವರದಿ ಮಾಡಿದ್ದೇನೆಂದು ಸಮರ್ಥಿಸಿಕೊಂಡಿದ್ದಾರೆ.
ಆಯೋಗದ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಇದೇ ವರ್ಷ ಸೆಪ್ಟೆಂಬರ್ನಲ್ಲಿ ಅಭಿಷೇಕ ಸಿಂಘ್ವಿ ಅವರು ಜೋಧ್ಪುರ ಹೈ ಕೋರ್ಟ್ಗೆ ಮನವಿ ಸಲ್ಲಿಸಿದ್ದರು.
ಅಲ್ಲದೆ, ನಾನು ಇಲಿ ಮತ್ತು ಬೆಕ್ಕಿನ ಆಟದ ಬಲಿಪಶುವಾಗಿದ್ದೇನೆ. ನನಗೆ ದಂಡ ವಿಧಿಸುವುದು ತೆರಿಗೆ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಿಂಘ್ವಿ ಆರೋಪಿಸಿದ್ದಾರೆ.












Click it and Unblock the Notifications