ಕೊರೊನಾ ವೈರಸ್ ಭೀತಿ: ಬಯೋಮೆಟ್ರಿಕ್ ಹಾಜರಾತಿ ತಾತ್ಕಲಿಕ ರದ್ದು
ದೆಹಲಿ, ಮಾರ್ಚ್ 5: ದೇಶದೆಲ್ಲೆಡೆ ಕೊರೊನಾ ವೈರಸ್ ಭೀತಿ ಹೆಚ್ಚಾಗಿರುವ ಕಾರಣ ಅಗತ್ಯ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸರ್ಕಾರದ ಮಟ್ಟದಲ್ಲಿ ಹಾಗೂ ಖಾಸಗಿ ಸಂಸ್ಥೆಗಳ ಮಟ್ಟದಲ್ಲಿ ಸ್ವ-ಹಿತಾಸಕ್ತಿಯಿಂದ ಕೆಲವು ಕ್ರಮಗಳನ್ನು ತೆಗೆದುಕೊಳಲಾಗುತ್ತಿದೆ.
ಇದೀಗ, ದೆಹಲಿ ಸರ್ಕಾರ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಿದೆ. ಸರ್ಕಾರಿ ಇಲಾಖೆಗಳ ಮುಖ್ಯಸ್ಥರಿಗೆ, ಸ್ವಾಯತ್ತ ಸಂಸ್ಥೆಗಳಿಗೆ ಮತ್ತು ಪುರಸಭೆ ನಿಗಮಗಳಿಗೆ ಗುರುವಾರ ಅಧಿಕೃತವಾಗಿ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊರೊನಾ ವೈರಸ್ ಬಗ್ಗೆ 12 ವರ್ಷದ ಹಿಂದೆಯೇ ಸುಳಿವು ನೀಡಿತ್ತಾ ಆ ಪುಸ್ತಕ?
ಅಂದ್ಹಾಗೆ, ರಾಷ್ಟ್ರ ರಾಜಧಾನಿಯ ಘಜಿಯಾಬಾದ್ನಲ್ಲಿ ಮತ್ತೊಂದು ಕೊರೊನಾ ವೈರಸ್ ಪ್ರಕರಣ ವರದಿಯಾಗಿದೆ ಎಂದು ತಿಳಿದು ಬಂದಿದೆ. ಹಾಗಾಗಿ, ಸಹಜವಾಗಿ ದೆಹಲಿಯಲ್ಲಿ ಕೊರೊನಾ ಆತಂಕ ಮತ್ತಷ್ಟು ಹೆಚ್ಚಾಗಿದೆ.
ದೇಶದಲ್ಲಿ ಇದುವರೆಗೂ ಒಟ್ಟು 30 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
ಇನ್ನು ಜಗತ್ತಿನಾದ್ಯಂತ ಸುಮಾರು 96,260 ಕೊರೊನಾ ಕೇಸ್ ಗಳು ದಾಖಲಾಗಿದೆ. ಅದರಲ್ಲಿ 3310 ಜನರು ಸಾವನ್ನಪ್ಪಿದ್ದಾರೆ. ಚೀನಾದಲ್ಲಿ ಅತಿ ಹೆಚ್ಚು ಜನರು ಮೃತಪಟ್ಟಿದ್ದು ಒಟ್ಟು ಸಂಖ್ಯೆ 3013ಕ್ಕೇ ಏರಿದೆ. ಚೀನಾ ಬಿಟ್ಟರೆ ಇಟಲಿಯಲ್ಲಿ ಹೆಚ್ಚು ಜನರ ಕೊರೊನಾಗೆ ಬಲಿಯಾಗಿದ್ದಾರೆ.