ಬಂಗಾಳಿ ಹುಡುಗರು ಕಸ ಗುಡಿಸುವವರು, ರಾಜ್ಯಪಾಲರಿಂದ ಇದೆಂಥ ಹೇಳಿಕೆ!
ನವದೆಹಲಿ, ಜೂನ್ 06: "ಹರ್ಯಾಣದಿಂದ ಕೇರಳದವರೆಗೆ ಎಲ್ಲಿ ಹೋದರೂ ಕಸಗುಡಿಸುವ ಬಂಗಾಳಿ ಹುಡುಗರು ಸಿಗುತ್ತಾರೆ" ಎನ್ನುವ ಮೂಲಕ ಮೇಘಾಲಯ ರಾಜ್ಯಪಾಲ, ಬಿಜೆಪಿ ಮಾಜಿ ನಾಯಕ ತಥಾಗತ ರಾಯ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಹಿಂದಿ ಹೇರಿಕೆಯ ಸದ್ದು ಕೇಳುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ ಅವರು, ಬಂಗಾಳಿಗಳು ಹಿಂದಿ ಕಲಿತರೆ ತಪ್ಪೇನು? ಈಗ ಕಾಲ ಬದಲಾಗಿದೆ ಎಂಬುದನ್ನು ಅವರಿಗೆ ತಿಳಿಸಿ ಹೇಳುವವರು ಯಾರು? ಕಾಲ ಬದಲಾಗಿದೆ, ಜೊತೆಗೆ ಬಂಗಾಳಿ ಭಾಷೆ ಮೊದಲಿನಂತಿಲ್ಲ. ಬಂಗಾಳದ ಸಂಸ್ಕೃತಿಯೂ ಕ್ಷೀಣಿಸಿದೆ. ಈಗ ಹರ್ಯಾಣದಿಂದ ಕೇರಳದ ವರೆಗೆ ಬೆಂಗಾಳಿ ಹುಡುಗರು ಕಸಗುಡಿಸುವ ಕೆಲಸ ಮಾಡುತ್ತಾರೆ. ಬಂಗಾಳಿ ಹುಡುಗಿಯರು ಮುಂಬೈಯಲ್ಲಿ ಬಾರ್ ಡ್ಯಾನ್ಸರ್ ಗಳಾಗಿ ಕೆಲಸ ಮಾಡುತ್ತಾರೆ. ಇಂದು ಹಿಂದಿ ಹೇರಿಕೆಯ ವಿಷಯ ಸದ್ದು ಮಾಡುತ್ತಿರುವುದಕ್ಕೆ ಕಾರಣ ಅದನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿವೆ. ಇಂದು ಮಹಾರಾಷ್ಟ್ರ, ಅಸ್ಸಾಂ, ಒಡಿಶಾದಂಥ ರಾಜ್ಯಗಳಲ್ಲಿ ಹಿಂದಿಯನ್ನು ಮಾತನಾಡುವುದಿಲ್ಲ. ಹಾಗಂತ ಅವರು ಹಿಂದಿಯನ್ನು ವಿರೋಧಿಸುವುದೂ ಇಲ್ಲ ಎಂದು ರಾಯ್ ಹೇಳಿದರು. ತಥಾಗತ ರಾಯ್ ಅವರ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೊಸ ಶಿಕ್ಷಣ ನೀತಿ ಕರಡು ರೂಪಿಸಿದ್ದು, 500 ಪುಟಗಳ ಈ ವರದಿಯಲ್ಲಿ ಹಿಂದಿ ಮಾತನಾಡದ ರಾಜ್ಯಗಳಲ್ಲಿ ಆಯಾ ರಾಜ್ಯದ ಪ್ರಾದೇಶಿಕ ಭಾಷೆಯ ಜೊತೆಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಕಡ್ಡಾಯ ಕಲಿಸಲು ಸೂಚಿಸಲಾಗಿತ್ತು. ಆದರೆ ಅದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕರಡನ್ನು ತಿದ್ದಲಾಗಿತ್ತು.












Click it and Unblock the Notifications