'ಯಾರಿಗೆ ವೋಟು ಹಾಕಿದ್ದೀಯಾ?' ತಸ್ಲಿಮಾ ಪ್ರಶ್ನೆಗೆ ಮುಸ್ಲಿಂ ಡ್ರೈವರ್ ಉತ್ತರ...
ನವದೆಹಲಿ, ಜೂನ್ 28: ಮಹಾರಾಷ್ಟ್ರದ ಥಾಣೆಯಲ್ಲಿ ಮುಸ್ಲಿಂ ಕ್ಯಾಬ್ ಚಾಲಕನನ್ನು ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ ಥಳಿಸಿದ ಘಟನೆ ವರದಿಯಾಗುತ್ತಿದ್ದಂತೆಯೇ ಭಾರದಲ್ಲಿ ವಾಸವಾಗಿರುವ ಬಾಂಗ್ಲಾ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ ಟ್ವೀಟ್ ವೊಂದನ್ನು ಮಾಡಿದ್ದಾರೆ.
ಎಲ್ಲ ಮುಸ್ಲಿಮರ ಮೇಲೆಯೂ ದಾಳಿಯಾಗುತ್ತಿದೆ ಎಂಬಂತೆ ಬಿಂಬಿಸುತ್ತಿರುವುದು ಸುಳ್ಳು. ಮುಸ್ಲಿಮರೂ ಮೋದಿ ಪರವಾಗಿದ್ದಾರೆ. ಭಾರತದಲ್ಲಿ ಮುಸ್ಲಿಮರು ಸುರಕ್ಷಿತರಾಗಿದ್ದಾರೆ ಎಂಬರ್ಥದಲ್ಲಿ ನಸ್ರೀನ್ ಟ್ವೀಟ್ ಮಾಡಿದ್ದಾರೆ. ಮುಸ್ಲಿಂ ಕ್ಯಾಬ್ ಡ್ರೈವರ್ ಒಬ್ಬರೊಂದಿಗಿನ ಸಂಭಾಷಣೆಯ ಭಾಗವನ್ನು ಅವರು ಟ್ವೀಟ್ ಮಾಡಿದ್ದು, ಅದರ ಕನ್ನಡ ಅನುವಾದ ಇಲ್ಲಿದೆ.

ತಸ್ಲಿಮಾ ನಸ್ರೀನ್: ನಿನ್ನ ಹೆಸರೇನು?
ಊಬರ್ ಡ್ರೈವರ್: ತಾಹಿರ್ ಖಾನ್
ತಸ್ಲಿಮಾ ನಸ್ರೀನ್: ನೀನು ಎಲ್ಲಿ ವಾಸವಿದ್ದೀಯಾ?
ಊಬರ್ ಡ್ರೈವರ್: ಓಖ್ಲಾ
ತಸ್ಲಿಮಾ ನಸ್ರೀನ್: ಯಾರಾದರೂ ನಿನಗೆ ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ, ಪೀಡಿಸಿದ್ದಾರಾ?
ಖಂಡಿತ ಇಲ್ಲ
ತಸ್ಲಿಮಾ ನಸ್ರೀನ್: ನೀನೊಬ್ಬ ಮುಸ್ಲಿಂ ಆಗಿ ಇಲ್ಲಿ ಸುರಕ್ಷಿತವಾಗಿದ್ದೀಯಾ?
ಊಬರ್ ಡ್ರೈವರ್: ಖಂಡಿತ
ತಸ್ಲಿಮಾ ನಸ್ರೀನ್: ಕೆಟ್ಟ ಘಟನೆಗಳು ನಡೆದೇ ಇಲ್ಲವೇ?
ಊಬರ್ ಡ್ರೈವರ್: ಇಲ್ಲವೇ ಇಲ್ಲ
ತಸ್ಲಿಮಾ ನಸ್ರೀನ್: ನೀನು ಯಾರಿಗೆ ಮತ ಹಾಕಿದ್ದೀಯಾ?
ಊಬರ್ ಡ್ರೈವರ್: ಮೋದಿ
ತಸ್ಲಿಮಾ ನಸ್ರೀನ್: ಮನೆ ಕಟ್ಟಲು ನಿನಗೆ ಹಣ ಸಿಕ್ಕಿತಾ?
ಊಬರ್ ಡ್ರೈವರ್: ಹೌದು, ಮೂರು ಪಕ್ಷ ಸಿಕ್ಕಿತು
ಈ ಮೂಲಕ ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ, ಗುಂಪು ಹತ್ಯೆಯ ಘಟನೆಗಳು ಅಲ್ಲಲ್ಲಿ ನಡೆದಿವೆಯಾದರೂ ಅದನ್ನು ಸಾಮಾನ್ಯೀಕರಿಸುವುದು ತಪ್ಪು ಎಂದು ನಸ್ರೀನ್ ಹೇಳಿದ್ದಾರೆ.
ಜಾರ್ಖಂಡ್ ನಲ್ಲಿ ಬೈಕ್ ಕದ್ದಿದ್ದಾನೆಂದು ಆರೋಪಿಸಿ ತಬ್ರೇಝ್ ಎಂಬ ಯುವಕನ್ನು ಥಳಿಸಿ, ಆತನ ಬಳಿ ಜೈ ಶ್ರೀರಾಮ್ ಪಠಿಸುವಂತೆ ಒತ್ತಾಯಿಸಲಾಗಿತ್ತು. ನಂತರ ಆತ ಸಾವಿಗೀಡಾಗಿದ್ದ. ಥಾಣೆಯಲ್ಲಿಯೂ ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ ಕ್ಯಾಬ್ ಡ್ರೈವರ್ ನನ್ನು ಮೂರು ಮಂದಿ ಥಳಿಸಿದ ಪ್ರಕರಣ ಬೆಳಕಿಗೆ ಬಂದಿತ್ತು.
ಇತ್ತೀಚೆಗೆ ಭಾರತ ಪ್ರವಾಸದದಲ್ಲಿದ್ದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ, ಗುಂಪು ಹತ್ಯೆಯನ್ನು ಪರೋಕ್ಷವಾಗಿ ಖಂಡಿಸಿ, ಪ್ರತಿಯೊಂದು ಧರ್ಮದ ಧಾರ್ಮಿಕ ಸ್ವಾತಂತ್ರ್ಯಕ್ಕೂ ಗೌರವ ನೀಡಬೇಕು ಎಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications