ಅನಿಲ್ ದೇಶ್ಮುಖ್ ವಿರುದ್ಧ ಭ್ರಷ್ಟಾಚಾರ ಆರೋಪ: ಪರಮ್ಬೀರ್ ಸಿಂಗ್ಗೆ ಹಿನ್ನಡೆ
ನವದೆಹಲಿ, ಮಾರ್ಚ್ 23: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ತಾವು ಮಾಡಿರುವ ಭ್ರಷ್ಟಾಚಾರ ಆರೋಪಗಳ ತನಿಖೆ ನಡೆಸುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರಿಗೆ ತೀವ್ರ ಹಿನ್ನಡೆಯಾಗಿದೆ.
ಅನಿಲ್ ದೇಶ್ಮುಖ್ ಅವರು ಪ್ರತಿ ತಿಂಗಳೂ ರೆಸ್ಟೋರೆಂಟ್, ಕ್ಲಬ್ ಸೇರಿದಂತೆ ವಿವಿಧ ಕಡೆಗಳಿಂದ 100 ಕೋಟಿ ರೂಪಾಯಿ ಸಂಗ್ರಹ ಮಾಡುವಂತೆ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಸೂಚನೆ ನೀಡಿದ್ದರು ಎಂದು ಪರಮ್ ಬೀರ್ ಸಿಂಗ್ ಆರೋಪಿಸಿದ್ದರು. ಈ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಸಬೇಕೆಂದು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಅರ್ಜಿಯ ವಿಚಾರಣೆ ಮುಂದುವರಿಸಲು ಬಯಸಲಿಲ್ಲ.
ಪರಮ್ ಬೀರ್ ಸಿಂಗ್ ಅವರು ಈ ಬಗ್ಗೆ ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಆರ್. ಸುಭಾಷ್ ರೆಡ್ಡಿ ಅವರ ನ್ಯಾಯಪೀಠ ಸೂಚನೆ ನೀಡಿತು. ಮುಂದೆ ಓದಿ.

ಆಡಳಿತಾತ್ಮಕ ವರ್ಗಾವಣೆ ಅಲ್ಲ
ಪರಮ್ ಬೀರ್ ಸಿಂಗ್ ಪರ ಹಾಜರಿದ್ದ ವಕೀಲ ಮುಕುಲ್ ರೋಹಟಗಿ, ಮಹಾರಾಷ್ಟ್ರದಲ್ಲಿ ಪೊಲೀಸ್ ವ್ಯವಸ್ಥೆ ತೀವ್ರ ಹದಗೆಟ್ಟಿದೆ. ಇದು ಇಡೀ ದೇಶಕ್ಕೆ ಬಹು ಗಂಭೀರವಾದ ಸಾರ್ವಜನಿಕ ಹಿತಾಸಕ್ತಿಯ ಸಂಗತಿ. ಪೊಲೀಸ್ ಅಧಿಕಾರಿಗಳು ಆಡಳಿತಾತ್ಮಕ ನೆಲೆಯಲ್ಲಿ ವರ್ಗಾಯಿಸಲಾಗುತ್ತದೆ. ಆದರೆ ಇಲ್ಲಿ ಸ್ವತಃ ಗೃಹಸಚಿವರೇ ಇದು ಆಡಳಿತಾತ್ಮಕ ವರ್ಗಾವಣೆ ಅಲ್ಲ ಎಂದು ಹೇಳಿದ್ದಾರೆ ಎಂಬುದಾಗಿ ವಾದಿಸಿದರು.

ಹೈಕೋರ್ಟ್ ವಿಚಾರಣೆ ನಡೆಸಬಹುದು
ಇದು ಗಂಭೀರ ಪ್ರಕರಣ ಎಂಬುದನ್ನು ಒಪ್ಪುತ್ತೇವೆ. ಆದರೆ ಇದನ್ನು ಹೈಕೋರ್ಟ್ ವಿಚಾರಣೆ ನಡೆಸಬಹುದು. ಇಲ್ಲಿ ಪರಮ್ ಬೀರ್ ಮತ್ತು ಗೃಹ ಸಚಿವರು ಇಬ್ಬರೂ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಹೈಕೋರ್ಟ್ ತೀರ್ಮಾನಿಸಬಹುದಾದ ಪ್ರಕರಣ. ನೀವು ಅಲ್ಲಿಗೇ ಹೋಗಿ ಎಂದು ನ್ಯಾ. ಕೌಲ್ ಸೂಚಿಸಿದರು. ಬಳಿಕ ವಕೀಲ ಮುಕುಲ್ ರೋಹಟಗಿ ಅವರು ಇಂದೇ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.

ವರ್ಗಾವಣೆ, ನೇಮಕದಲ್ಲಿ ಅವ್ಯವಹಾರ
ವರ್ಗಾವಣೆ ಮತ್ತು ನೇಮಕಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರಶ್ಮಿ ಶುಕ್ಲಾ ಸಲ್ಲಿಸಿರುವ ಅರ್ಜಿಯನ್ನು ವರದಿ ಕುರಿತು ಸಿಬಿಐ ತನಿಖೆ ನಡೆಸುವಂತೆಯೂ ಪರಮ್ ಬೀರ್ ಸಿಂಗ್ ಮನವಿ ಮಾಡಿದ್ದಾರೆ. ಜತೆಗೆ, ತಾವು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮುಂಬೈನಲ್ಲಿರುವ ಅನಿಲ್ ದೇಶ್ಮುಖ್ ಅವರ ನಿವಾಸದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ.

ಕುತೂಹಲ ಕೆರಳಿಸಿದ ಪ್ರಕರಣ
ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ತಮ್ಮನ್ನು ವರ್ಗಾವಣೆ ಮಾಡಿರುವುದಕ್ಕೆ ತಡೆ ನೀಡುವಂತೆ ಕೂಡ ಅವರು ಮನವಿ ಮಾಡಿದ್ದಾರೆ. ಮುಕೇಶ್ ಅಂಬಾನಿ ನಿವಾಸದ ಮುಂದೆ ಜಿಲೆಟಿನ್ ಸ್ಫೋಟಕ ಮತ್ತು ಬಾಂಬ್ ಬೆದರಿಕೆ ಪತ್ರ ಪತ್ತೆಯಾದ ಪ್ರಕರಣದಲ್ಲಿ ಎನ್ಐಎ ತನಿಖೆ ನಡೆಸುತ್ತಿದ್ದು, ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ಬಂಧಿಸಿತ್ತು. ಇದರ ನಡುವೆಯೇ ಪರಮ್ ಬೀರ್ ಸಿಂಗ್ ವರ್ಗಾವಣೆ ಮತ್ತು ಭ್ರಷ್ಟಾಚಾರದ ಆರೋಪ ವಿವಾದ ಸೃಷ್ಟಿಸಿದೆ.












Click it and Unblock the Notifications