ಶಾಹಿನ್ ಬಾಗ್ ಇತ್ಯರ್ಥಕ್ಕೆ ನೇಮಕಗೊಂಡ ತ್ರಿಮೂರ್ತಿಗಳ ಕುರಿತು ಮಾಹಿತಿ
ನವದೆಹಲಿ, ಫೆಬ್ರವರಿ.17: ಕೇಂದ್ರ ಸರ್ಕಾರದ ವಿರುದ್ಧ ಶಾಹಿನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನಾಕಾರರಿಗೆ ರಸ್ತೆ ಬಂದ್ ಮಾಡದಂತೆ ಸುಪ್ರೀಂಕೋರ್ಟ್ ಖಡಕ್ ಸಂದೇಶ ರವಾನಿಸಿದೆ. ಹೋರಾಟಗಾರರ ಜೊತೆ ಶಾಂತಿ ಮಾತುಕತೆ ನಡೆಸಲು ಮಧ್ಯಸ್ಥಿಕೆ ವಹಿಸಲು ಇಬ್ಬರನ್ನು ಸ್ವತಃ ಸುಪ್ರೀಂಕೋರ್ಟ್ ನೇಮಿಸಿದೆ.
ಶಾಹಿನ್ ಬಾಗ್ ನಲ್ಲಿನ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರ ಜೊತೆಗೆ ಸಂಧಾನ ಸಭೆ ನಡೆಸಲು ಹಿರಿಯ ವಕೀಲ ಸಂಜಯ್ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್ ಅವರಿಗೆ ಸುಪ್ರೀಂಕೋರ್ಟ್ ಸಲಹೆ ನೀಡಿದೆ. ಈ ಇಬ್ಬರಿಗೆ ಸಾಥ್ ನೀಡಲು ಮಾಹಿತಿ ಆಯೋಗದ ಮಾಜಿ ಮುಖ್ಯಸ್ಥ ವಜಾಹತ್ ಹಬೀಬುಲ್ಲಾ ಅವರಿಗೆ ಸೂಚನೆ ನೀಡಿದೆ.
ಸಿಎಎ ವಿರುದ್ಧ ನಡೆಯುತ್ತಿರುವ ಉಗ್ರ ಹೋರಾಟಕ್ಕೆ ಬ್ರೇಕ್ ಹಾಕಲು ಸರ್ಕಾರದ ಬದಲಿಗೆ ಮಧ್ಯವರ್ತಿಗಳನ್ನು ನೇಮಿಸಿರುವುದು ಸಾಕಷ್ಟು ಕುತೂಹಲಕಾರಿಯಾಗಿದೆ. ಈಗ ಸುಪ್ರೀಂಕೋರ್ಟ್ ನೇಮಿಸಿದಲ ಈ ಮಧ್ಯವರ್ತಿಗಳು ಯಾರು, ಅವರ ಹಿನ್ನೆಲೆ ಏನು ಎಂಬುದರ ಮೇಲೆ ಎಲ್ಲರ ಲಕ್ಷ್ಯ ನೆಟ್ಟಿದೆ.

ವಕೀಲ ಸಂಜಯ್ ಹೆಗ್ಡೆ ಅವರ ಬಗ್ಗೆ ಕಿರು ಪರಿಚಯ
ಮುಲ್ಲಾ ಆಂಡ್ ಮುಲ್ಲಾ ಆಂಡ್ ಕ್ರೈಜ್ ಬ್ಲಂಟ್ ಆಂಡ್ ಕ್ಯಾರೋ ಸ್ಯಾಲಿಸಟರಿಯಲ್ಲಿ ತರಬೇತಿ ಪಡೆದ ಸಂಜಯ್ ಹೆಗ್ಡೆ ಅವರು, ಎಲ್ಎಲ್ಎಂ ಬಳಿಕ ವಕೀಲ ವೃತ್ತಿ ಅಭ್ಯಾಸಕ್ಕಾಗಿ ದೆಹಲಿಯ ಸುಪ್ರೀಂಕೋರ್ಟ್ ಗೆ ತೆರಳುತ್ತಾರೆ. ಹಲವು ಪ್ರಕರಗಳಲ್ಲಿ ಸರ್ಕಾರದ ಪರವಾಗಿ ಹಿರಿಯ ವಕೀಲ ಸಂಜಯ್ ಹೆಗ್ಡೆ ವಾದ ಮಂಡಿಸಿದ್ದಾರೆ. 1996 ರಿಂದ 2004ರವರೆಗೂ ಒಕ್ಕೂಟ ಭಾರತದ ಆರ್ಗ್ಯುಯಿಂಗ್ ಪ್ಯಾನಲ್ ನಲ್ಲಿದ್ದರು. ಇದಲ್ಲದೇ ಕರ್ನಾಟಕದಲ್ಲೂ ವಕೀಲರಾಗಿ ಸಂಜಯ್ ಹೆಗ್ಡೆ ಸೇವೆ ಸಲ್ಲಿಸಿದ್ದಾರೆ.

ಹಿರಿಯ ವಕೀಲೆ ಸಾಧನಾ ರಾಮಚಂದ್ರ ಅವರ ಕಿರು ಪರಿಚಯ
ಹಿರಿಯ ವಕೀಲೆ ಆಗಿರುವ ಸಾಧನಾ ರಾಮಚಂದ್ರ ಅವರು ಕೂಡಾ 1978 ರಿಂದ ವಕೀಲ ವೃತ್ತಿಯಲ್ಲಿ ಅಭ್ಯಾಸ ನಡೆಸಿದ್ದರು. ಹಲವು ವರ್ಷಗಳಿಂದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದ್ದರು. ಮಾನವ ಹಕ್ಕು ಪ್ರಕರಣಗಳ ತನಿಖೆಯಲ್ಲಿ ಸಾಧನಾ ರಾಮಚಂದ್ರ ವಿಶೇಷ ಪಾತ್ರ ವಹಿಸಿದ್ದರು. ಮಕ್ಕಳ ಹಕ್ಕು ಮತ್ತು ಶಿಕ್ಷಣ ರಂಗದಲ್ಲೂ ಇವರ ಸೇವೆ ಸ್ಮರಣೀಯವಾಗಿದೆ.

ವಜಾಹತ್ ಹಬೀಬುಲ್ಲಾ ಕುರಿತು ಮಾಹಿತಿ
1968ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದ ವಜಾಹತ್ ಹಬೀಬುಲ್ಲಾ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2005ರಲ್ಲಿ ನಿವೃತ್ತಗೊಂಡ ಇವರು, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮುಖ್ಯಸ್ಥರಾಗಿದ್ದರು, ಅಷ್ಟೇ ಅಲ್ಲದೇ ಮಾಹಿತಿ ಆಯೋಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. ಇದರ ಜೊತೆಗೆ ಭಾರತ ಸರ್ಕಾರದ ಕಾರ್ಯದರ್ಶಿಯಾಗಿಯೂ ವಜಾಹತ್ ಹಬೀಬುಲ್ಲಾ ಕಾರ್ಯ ನಿರ್ವಹಿಸಿದ್ದರು.

ಶಾಹಿನ್ ಬಾಗ್ ಹೋರಾಟದ ಸಂಧಾನಕ್ಕೆ ಗಣ್ಯರು ಸಜ್ಜು
ಕಳೆದ ಡಿಸೆಂಬರ್.15ರಿಂದ ನಿರಂತರವಾಗಿ ನವದೆಹಲಿಯ ಶಾಹಿನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಹೋರಾಟವನ್ನು ಅಂತ್ಯಗೊಳಿಸಿ, ಪ್ರತಿಭಟನಾಕಾರರ ಜೊತೆಗೆ ಸಂಧಾನ ಸಭೆ ನಡೆಸುವುದಕ್ಕೆ ಮೂವರು ಗಣ್ಯರನ್ನು ಸ್ವತಃ ಸುಪ್ರೀಂಕೋರ್ಟ್ ನೇಮಿಸಿದೆ. ಇದರ ಜೊತೆಗೆ ಪ್ರತಿಭಟನೆ ನಡೆಸುವುದೇ ಆದರೆ, ಬೇರೊಂದು ಸ್ಥಳದಲ್ಲಿ ಹೋರಾಟ ನಡೆಸಿ, ಅದನ್ನು ಬಿಟ್ಟು ರಸ್ತೆ ಬಂದ್ ಮಾಡುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.












Click it and Unblock the Notifications