Breaking: ಪಿಎಂಎಲ್ಎ ಆದೇಶ ಮರುಪರಿಶೀಲನೆ: ಕೇಂದ್ರಕ್ಕೆ ಸುಪ್ರೀಂ ನೋಟಿಸ್
ನವದೆಹಲಿ, ಆಗಸ್ಟ್ 25: ನ್ಯಾಯಮೂರ್ತಿ ಖಾನ್ವಿಲ್ಕರ್ ನೇತೃತ್ವದ ಪೀಠವು ಕಳೆದ ತಿಂಗಳು ನೀಡಿದ್ದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ತೀರ್ಪನ್ನು ಮರುಪರಿಶೀಲಿಸಲು ಗುರುವಾರ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ತೀರ್ಪನ್ನು ಮರುಪರಿಶೀಲಿಸಲು ಕೋರಿ ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರು ಸಲ್ಲಿಸಿರುವ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.
ಪಿಎಂಎಲ್ಎ ತೀರ್ಪನ್ನು ಎರಡು ಅಂಶಗಳಲ್ಲಿ ಮರುಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಜಾರಿ ನಿರ್ದೇಶನಾಲಯವು ಆರೋಪಿಗೆ ಪ್ರಕರಣದ ಮಾಹಿತಿಯ ಪ್ರತಿಯನ್ನು (ಇಸಿಐಆರ್) ಒದಗಿಸುವ ಅಗತ್ಯವಿಲ್ಲ ಮತ್ತು ಆರೋಪಿಯು ನಿರಪರಾಧಿ ಎಂದು ಸಾಬೀತುಪಡಿಸಬೇಕು. ಆದರೆ, ತನಿಖಾ ಸಂಸ್ಥೆಯು ತಪ್ಪನ್ನು ಸಾಬೀತುಪಡಿಸಬೇಕಾಗಿಲ್ಲ. ಈ ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು "ಇವು ಪ್ರಾಥಮಿಕವಾಗಿ ಪರಿಗಣಿಸಬೇಕಾದ ಎರಡು ಸಮಸ್ಯೆಗಳಾಗಿವೆ" ಎಂದು ಹೇಳಿದೆ.
ಅಕ್ರಮ ಹಣ ವರ್ಗಾವಣೆ ಅಥವಾ ಕಪ್ಪು ಹಣದ ತಡೆಯ ಕುರಿತು ನಮ್ಮ ಸಂಪೂರ್ಣ ಬೆಂಬಲವಿದೆ. ದೇಶ ಇಂಥ ಅಪರಾಧವನ್ನು ಸಹಿಸಲಾಗದು. ಇದರ ಉದ್ದೇಶ ಉತ್ತಮವಾಗಿದೆ. ಅದರೆ, ಇಸಿಐಆರ್ ನೀಡದೆ ಇರುವುದು ಮತ್ತು ಮುಗ್ಧತೆಯನ್ನು ನಿರೂಪಿಸುವ ಹೊಣೆಯನ್ನು ತಿರುವುಮುರುವಾಗಿಸಿರುವುದು ಈ ಎರಡು ಅಂಶಗಳನ್ನು ನಮ್ಮ ಪ್ರಕಾರ ಮರುಪರಿಗಣಿಸಬೇಕಿದೆ" ಎಂದು ಸಿಜೆಐ ಹೇಳಿದರು.
ಕೇಂದ್ರ ಸರಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪಿಎಂಎಲ್ಎ ತೀರ್ಪಿನ ಒಟ್ಟಾರೆ ಮರುಪರಿಶೀಲನೆಯನ್ನು ವಿರೋಧಿಸಿ ಎರಡು ಸೀಮಿತ ಅಂಶಗಳ ಮೇಲೆ ನೋಟಿಸ್ ಜಾರಿ ಮಾಡಬೇಕು ಎಂದು ಹೇಳಿದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಒಟ್ಟಾರೆ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿದ್ದರು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯು ಸರಕಾರ ಮತ್ತು ಜಾರಿ ನಿರ್ದೇಶನಾಲಯಕ್ಕೆ ವಿಸ್ತೃತ ಅಧಿಕಾರವನ್ನು ನೀಡುತ್ತದೆ. ಸಮನ್ಸ್ ನೀಡುವ, ವಾರಂಟ್ ಇಲ್ಲದೆ ಬಂಧಿಸಲು, ವಶಪಡಿಸಿಕೊಳ್ಳಲು ಮತ್ತು ದಾಳಿಗಳನ್ನು ನಡೆಡಸುವ ಅಧಿಕಾರವನ್ನು ನೀಡುತ್ತದೆ. ಜೊತೆಗೆ ಜಾಮೀನು ಪಡೆಯುವುದನ್ನು ಅಸಾಧ್ಯವಾಗಿಸುತ್ತದೆ.
ತಿದ್ದುಪಡಿ ತೀರ್ಪನ್ನು ಮರುಪರಿಶೀಲಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ಪೀಠದ ಮುಂದೆ ಅರ್ಜಿಯನ್ನು ಮೌಖಿಕವಾಗಿ ಉಲ್ಲೇಖಿಸಲಾಗಿದೆ. ಇದನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಪಟ್ಟಿ ಮಾಡಿದೆ.
2019 ರಲ್ಲಿ ಹಣಕಾಸು ಕಾಯ್ದೆಯ ಮೂಲಕ 2002 ರ ಕಾಯಿದೆಗೆ ತಿದ್ದುಪಡಿಗಳನ್ನು ಮಾಡಲಾಗಿತ್ತು. ಈ ತಿದ್ದುಪಡಿಗಳ ವಿರುದ್ಧ ವ್ಯಾಪಕವಾದ ಪ್ರತಿರೋಧ ಉಂಟಾಗಿತ್ತು. ಇವುಗಳ ಬೆನ್ನಲ್ಲೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಖಾನ್ವಿಲ್ಕರ್ ನೇತೃತ್ವದ ಪೀಠವು ಕಳೆದ ತಿಂಗಳು ತಿದ್ದುಪಡಿಗಳನ್ನು ಎತ್ತಿಹಿಡಿದು ತೀರ್ಪು ನೀಡಿತ್ತು.
ವೈಯಕ್ತಿಕ ಸ್ವಾತಂತ್ರ್ಯ, ಕಾನೂನಿನ ಕಾರ್ಯವಿಧಾನಗಳು ಮತ್ತು ಸಾಂವಿಧಾನಿಕ ಆದೇಶವನ್ನು ಈ ಕಾಯ್ದೆ ಉಲ್ಲಂಘಿಸುತ್ತದೆ ಎಂದು ತಿದ್ದುಪಡಿಗಳ ವಿರುದ್ಧ 240 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಯಿತು. ಈ ಅರ್ಜಿದಾರರಲ್ಲಿ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್ ಮತ್ತು ಸಂಸದ ಕಾರ್ತಿ ಚಿದಂಬರಂ ಕೂಡ ಸೇರಿದ್ದಾರೆ.
ಬಂಧನದ ಆಧಾರ ಅಥವಾ ಸಾಕ್ಷ್ಯವನ್ನು ತಿಳಿಸದೆ ಆರೋಪಿಗಳನ್ನು ಬಂಧಿಸುವ ಅನಿಯಂತ್ರಿತ ಅಧಿಕಾರ ಅಸಂವಿಧಾನಿಕ ಎಂದು ಅರ್ಜಿದಾರರು ವಾದಿಸಿದ್ದರು. ಇಸಿಐಆರ್ ನಕಲು ಪಡೆಯಲು ಆರೋಪಿ ಅರ್ಹರು ಎಂಬ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.
ಪ್ರತಿ ಪ್ರಕರಣದಲ್ಲೂ ಇಸಿಐಆರ್ (Enforcement Case Information Report) ಪ್ರತಿಯನ್ನು ಪೂರೈಸುವುದು ಕಡ್ಡಾಯವಲ್ಲ, ಏಕೆಂದರೆ ಅದು ಆಂತರಿಕ ದಾಖಲೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.