'ರವಿಶಂಕರ್ ಗುರೂಜಿ ಉತ್ಸವದಿಂದ ಯಮುನಾ ನದಿ ನಾಶ'
ನವದೆಹಲಿ, ಆಗಸ್ಟ್ 18: ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಯಮುನಾ ನದಿ ತೀರದಲ್ಲಿ ಆಯೋಜಿಸಿದ್ದ ಬೃಹತ್ ವಿಶ್ವ ಸಾಂಸ್ಕೃತಿಕ ಉತ್ಸವದಿಂದ ನದಿ ತೀರ ಹಾಗೂ ಪರಿಸರಕ್ಕೆ ತೀವ್ರವಾಗಿ ನಾಶವಾಗಿದೆ ಎಂದು ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ಗೆ ತಜ್ಞರ ತಂಡ ವರದಿ ನೀಡಿದೆ.
ನದಿ ತಟವು ಈಗ ಸಂಪೂರ್ಣವಾಗಿ ಸಮತಟ್ಟಾಗಿದೆ ಹಾಗೂ ಗಟ್ಟಿಯಾಗಿದೆ ಹಾಗೂ ಅಲ್ಲಿ ಯಾವುದೇ ಗಿಡ ಮರಗಳಿಲ್ಲ ಎಂದು ತಂಡ ತನ್ನ 47 ಪುಟಗಳ ವರದಿಯಲ್ಲಿ ತಿಳಿಸಿದೆ. ಈ ಮೂರು ದಿನಗಳ ಕಾರ್ಯಕ್ರಮದಿಂದ ಪರಿಸರ ವೈವಿಧ್ಯತೆಗೆ ಆದ ಹಾನಿ ಅಪಾರ ಎಂದು ಹೇಳಿರುವ ತಜ್ಞರ ತಂಡ ಈ ಹಾನಿಯನ್ನು ಸರಿಪಡಿಸುವುದು ಅಸಾಧ್ಯ ಎಂದಿದೆ. [ಎಒಎಲ್ ಗೆ 5 ಕೋಟಿ ರು ದಂಡ, ಉತ್ಸವಕ್ಕೆ ಗ್ರೀನ್ ಸಿಗ್ನಲ್]

ಮಾರ್ಚ್ ತಿಂಗಳಲ್ಲಿ ನಡೆದ ಈ ಬೃಹತ್ ಕಾರ್ಯಕ್ರಮದಿಂದ ಈ ಸೂಕ್ಷ್ಮ ಪ್ರದೇಶದ ಮೇಲಾದ ಪರಿಣಾಮವನ್ನು ತಿಳಿಯಲೆಂದೇ ಟ್ರಿಬ್ಯೂನಲ್ ಏಳು ಮಂದಿ ತಜ್ಞರ ತಂಡವನ್ನು ರಚಿಸಿತ್ತು. ಸ್ಥಳ ಪರಿಶೀಲನೆ ನಡೆಸಿದ್ದ ತಂಡವು ''ಕಾರ್ಯಕ್ರಮಕ್ಕಾಗಿ ತಾತ್ಕಾಲಿಕ Ramp ನಿರ್ಮಿಸುವ ಸಲುವಾಗಿ ಭಾರೀ ಪ್ರಮಾಣದ ಮಣ್ಣು ಹಾಗೂ ಇತರ ವಸ್ತುಗಳನ್ನು ಭೂಮಿಯ ಮೇಲೆ ಸುರಿಯಲಾಗಿತ್ತು'' ಎಂದು ಹೇಳಿತ್ತು.
ಕುತೂಹಲಕಾರಿಯೆಂದರೆ ಕಾರ್ಯಕ್ರಮದ ನಂತರ ಪ್ರತಿಕ್ರಿಯಿಸಿದ್ದ ಶ್ರೀ ಶ್ರೀ ರವಿಶಂಕರ್, ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ತಮಗೆ ಬಹುಮಾನ ನೀಡಬೇಕೆಂದೂ, ಈ ಜಾಗ ಹಿಂದಿಗಿಂತ ಈಗ ಉತ್ತಮ ಸ್ಥಿತಿಯಲ್ಲಿದೆಯೆಂದೂ ಹೇಳಿಕೊಂಡಿದ್ದರು. [ ಏನಿದು? ರವಿಶಂಕರ್ ಗುರೂಜಿ ಯಮುನಾ ನದಿ ತೀರ ವಿವಾದ]
172 ಕ್ಕೂ ಅಧಿಕ ಅಂತಾರಾಷ್ಟ್ರೀಯ ಪ್ರತಿನಿಧಿಗಳು, ಪದಾಧಿಕಾರಿಗಳು, ಸಂಸದರು ವಿಶ್ವ ಸಾಂಸ್ಕೃತಿಕ ಉತ್ಸವ 2016ದಲ್ಲಿ ಪಾಲ್ಗೊಂಡಿದ್ದರು
ಯಮುನಾ ನದಿ ನೀರು ಹಾನಿಯಾಗಿರುವ ಕಾರಣ ಸುಮಾರು 100 ರಿಂದ 200 ಕೋಟಿ ರು ಪರಿಹಾರಕ್ಕೆ ಆಗ್ರಹಿಸಲಾಗಿತ್ತು. ಆದರೆ, ಪರಿಸರ ನಾಶ ಮಾಡಿದ ಕಾರಣಕ್ಕೆ ಆರ್ಟ್ ಆಫ್ ಲಿವಿಂಗ್ ಗೆ 5 ಕೋಟಿ ರು ದಂಡ ವಿಧಿಸಲಾಗಿತ್ತು. ಜೊತೆಗೆ ಯಮುನಾ ನದಿ ಪ್ರದೇಶದಲ್ಲಿ ಸಂಪೂರ್ಣವಾಗಿ ಜೀವ ವೈವಿಧ್ಯ ಉದ್ಯಾನ ನಿರ್ಮಿಸುವಂತೆ ಎಒಎಲ್ ಗೆ ಪ್ರಾಧಿಕಾರ ಸೂಚಿಸಿತ್ತು.












Click it and Unblock the Notifications