ಪಕ್ಷದ ಹಲವಾರು ಉನ್ನತ ನಾಯಕರ ಸಭೆ ಕರೆದ ಸೋನಿಯಾ ಗಾಂಧಿ: ಬಂಡಾಯ ಶಮನಗೊಳಿಸುವ ಪ್ರಯತ್ನ!
ನವ ದೆಹಲಿ, ಡಿಸೆಂಬರ್ 17: ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಹಲವಾರು ಉನ್ನತ ನಾಯಕರ ಸಭೆಯನ್ನು 2020 ರ ಡಿಸೆಂಬರ್ 19 ರಂದು ಕರೆದಿದ್ದಾರೆ. ಮಾಹಿತಿಯ ಪ್ರಕಾರ, ಈ ಮಹತ್ವದ ಸಭೆಯಲ್ಲಿ ಪಕ್ಷದ ಮೇಲೆ ಕೋಪಗೊಂಡಿರುವ ಹಿರಿಯ ನಾಯಕರನ್ನು ಸೋನಿಯಾ ಗಾಂಧಿ ಆಹ್ವಾನಿಸಿದ್ದಾರೆ.
ಸದ್ಯ ರೈತ ಪ್ರತಿಭಟನೆಯು ಕೇಂದ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದರ ನಡುವೆ ಕಾಂಗ್ರೆಸ್ ಸಂಘಟನೆಯ ಚುನಾವಣೆಯಲ್ಲಿ ಅಧ್ಯಕ್ಷರ ಬಗ್ಗೆ ಒಮ್ಮತ ಮೂಡಿಸಲು ಈ ಸಭೆಯನ್ನು ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ. ಸಭೆಯಲ್ಲಿ ಸೋನಿಯಾ ಗಾಂಧಿ ಹೊಸ ಅಧ್ಯಕ್ಷರ ಆಯ್ಕೆ ಬಗ್ಗೆ ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚಿಸಬಹುದು ಎಂದು ನಂಬಲಾಗಿದೆ.
ಇದೇ ವೇಳೆ ಸೋನಿಯಾ ಗಾಂಧಿ ಅವರು ಪಕ್ಷದ ಬದಲಾವಣೆಗಳನ್ನು ಕೋರಿ ಪತ್ರಗಳನ್ನು ಬರೆದಿದ್ದ 23 ಬಂಡಾಯ ನಾಯಕರನ್ನು ಭೇಟಿ ಮಾಡಲಿದ್ದಾರೆ. ಮಾಧ್ಯಮ ವರದಿಯ ಪ್ರಕಾರ ಸೋನಿಯಾ ಜಿ23 ಅಥವಾ ಗ್ರೂಪ್ 23 ಸಭೆ ನಡೆಸಲಿದ್ದಾರೆ. ಇದು ಡಿಸೆಂಬರ್ 19, 20ರಂದು ಎರಡು ದಿನಗಳ ಕಾಲ ನಡೆಯಬಹುದು ಎನ್ನಲಾಗಿದೆ.

ಬಂಡಾಯದ ಕಡೆಗೆ ಮುಖ ಮಾಡಿರುವವರನ್ನು ಒಟ್ಟುಗೂಡಿಸಿ ಪಕ್ಷದಲ್ಲಿ ಸಾಮರಸ್ಯ ಮೂಡಿಸುವುದು ಸಭೆಯ ಪ್ರಮುಖ ಗುರಿಯಾಗಿದೆ ಎಂದು ಎಐಸಿಸಿ ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಜೊತೆಗೆ ಇದು ಕೇವಲ ಬಂಡಾಯಗಾರರ ಮತ್ತು ಸೋನಿಯಾ ನಡುವಿನ ಸಭೆಯಲ್ಲ, ಬದಲಿಗೆ ಪಕ್ಷದ ಅನೇಕ ಮುಖಂಡರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ದೆಹಲಿ ಮೂಲಗಳು ತಿಳಿಸಿವೆ.












Click it and Unblock the Notifications