ದೆಹಲಿಗೆ ಹಾರಲಿದ್ದಾರೆ ಕೈ ನಾಯಕರು: ಸೋನಿಯಾ ಜೊತೆ ಸಭೆ
ಬೆಂಗಳೂರು, ಸೆಪ್ಟೆಂಬರ್ 10: ಡಿ.ಕೆ.ಶಿವಕುಮಾರ್ ಬಂಧನದ ವಿರುದ್ಧ ಪ್ರತಿಭಟನೆ ಕೈಗೊಂಡಿರುವ ಕಾಂಗ್ರೆಸ್ ಪ್ರತಿಭಟನೆ ಮುಗಿದ ಕೂಡಲೇ ಪ್ರಮುಖ ನಾಯಕರು ದೆಹಲಿ ಹಾದಿ ಹಿಡಿಯಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಅವರು ನಾಳೆ ರಾತ್ರಿ ದೆಹಲಿಗೆ ತೆರಳಲಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಅಲ್ಲಿ ಮಹತ್ವದ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಅಖಿಲ ಭಾರತ ಮಟ್ಟದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರ ಸಭೆ ನಡೆಯುತ್ತಿದ್ದು, ಸೋನಿಯಾಗಾಂಧಿಯವರು ಅಧ್ಯಕ್ಷರಾದ ಮೇಲೆ ಪಕ್ಷ ಸಂಘಟನೆಗಾಗಿ ನಡೆಯುತ್ತಿರುವ ಮಹತ್ವದ ಮೊದಲ ಸಭೆ ಇದಾಗಿದೆ.

ನಾಳಿನ ಸಭೆಯಲ್ಲಿ ಪ್ರತ್ಯೇಕವಾಗಿ ರಾಜ್ಯಗಳ ವಿಷಯ ಚರ್ಚೆಗಿಂತಲೂ ಮುಖ್ಯವಾಗಿ ಒಟ್ಟಾರೆ ಕಾಂಗ್ರೆಸ್ ಪಕ್ಷ ಮುಂದಿನ ಸವಾಲುಗಳಿಗೆ ಹೇಗೆ ತಯಾರಾಗಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರೊಂದಿಗೆ ಸೋನಿಯಾ ಗಾಂಧಿ ಅವರು ಪ್ರತ್ಯೇಕ ಸಭೆಯನ್ನೂ ನಡೆಸುವ ಸಾಧ್ಯತೆ ಇದ್ದು, ಈ ಸಮಯ ರಾಜ್ಯದ ರಾಜಕಾರಣ ಚರ್ಚೆಗೆ ಬರಲಿದೆ. ವಿಪಕ್ಷ ನಾಯಕ ಆಯ್ಕೆ ವಿಚಾರವೂ ಚರ್ಚೆಗೆ ಬರುವ ಸಾಧ್ಯತೆ ಇದೆ.












Click it and Unblock the Notifications