ರಾಜಧಾನಿಯನ್ನು ದೆಹಲಿಯಿಂದ ಸ್ಥಳಾಂತರಿಸಿ: ನೆಟಿಜನ್ಗಳ ಸಲಹೆ
ನವದೆಹಲಿ, ನವೆಂಬರ್ 4: ದೇಶದ ರಾಜಧಾನಿ ದೆಹಲಿ ವಿಪರೀತ ಹೊಗೆ ಮತ್ತು ದೂಳಿನಿಂದ ತುಂಬಿಕೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿಯೇ ಮಾಲಿನ್ಯದ ಪ್ರಮಾಣವು ಅತ್ಯಂತ ಕೆಟ್ಟಮಟ್ಟಕ್ಕೆ ತಲುಪಿದೆ. ಸೋಮವಾರ ದೆಹಲಿಯಲ್ಲಿನ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 500ಕ್ಕೆ ತಲುಪಿದೆ. ಗಾಳಿಯಲ್ಲಿನ ಮಾಲಿನ್ಯಕಾರಕ ಕಣಗಳ ಪ್ರಮಾಣವು 500ಕ್ಕಿಂತ ಹೆಚ್ಚಿದ್ದರೆ ಅದನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಭಾನುವಾರ ಇದು 494ರಷ್ಟಿತ್ತು. 2016ರ ನವೆಂಬರ್ ತಿಂಗಳಿನಲ್ಲಿ ಎಕ್ಯೂಐ 497ಕ್ಕೆ ತಲುಪಿದ್ದು ಇದುವರೆಗಿನ ಅತ್ಯಧಿಕ ಪ್ರಮಾಣವಾಗಿತ್ತು.
ಸೋಮವಾರ ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಕವಿದಿದ್ದ 'ಹೊಂಜು' (ಸ್ಮಾಗ್) ರಸ್ತೆಗಳೇ ಕಾಣಿಸದಷ್ಟು ದಟ್ಟವಾಗಿತ್ತು. ಹೊರಗೆ ಉಸಿರಾಡಲೂ ಅಸಾಧ್ಯವಾದ ವಾತಾವರಣ ಇರುವುದರಿಂದ ಜನರು ಪರದಾಡಿದರು. ಮಂಗಳವಾರದವರೆಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂಗಡಿಮುಂಗಟ್ಟುಗಳು, ಸಾರಿಗೆ ಸಂಪರ್ಕ ಕೂಡ ಅನೇಕ ಕಡೆ ಸುಗಮವಾಗಿ ನಡೆದಿಲ್ಲ. ಅನೇಕ ವಿಮಾನಗಳು ದೆಹಲಿ ಪ್ರವೇಶಿಸಲು ಸಾಧ್ಯವಾಗದೆ ಜೈಪುರ, ಅಮೃತಸರಗಳಲ್ಲಿ ಇಳಿಸಲಾಗಿದೆ. ಸಾರಿಗೆ ಸಂಪರ್ಕದ ತೊಂದರೆಯಿಂದ ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ದೆಹಲಿ; ಜಾರಿಗೆ ಬಂತು ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ
ವಾಯುಮಾಲಿನ್ಯದ ಪ್ರಮಾಣವನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಸೋಮವಾರದಿಂದ ಮತ್ತೆ ಸಮ-ಬೆಸ ಸಂಖ್ಯೆಯ ವಾಹನಗಳ ಸಂಚಾರದ ನಿಯಮವನ್ನು ಜಾರಿಗೊಳಿಸಿದೆ. ಇದು ಅನೇಕ ಕಡೆ ನಾಗರಿಕರು-ಪೊಲೀಸರ ನಡುವೆ ಸಂಘರ್ಷಕ್ಕೂ ಕಾರಣವಾಗಿದೆ. ಈ ಮಧ್ಯೆ ನೆಟ್ಟಿಗರು ರಾಜಧಾನಿಯನ್ನು ದೆಹಲಿಯಿಂದ ನಾಗಪುರ, ಬೆಂಗಳೂರು, ಚೆನ್ನೈ ಅಥವಾ ಬೇರೆ ಸೂಕ್ತ ನಗರಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.
ಎರಡು ಅಥವಾ ನಾಲ್ಕು ರಾಜಧಾನಿ
ದೆಹಲಿಯ ಉಸಿರುಗಟ್ಟಿಸುವ ವಾತಾವರಣ ಜಗತ್ತಿನೆಲ್ಲೆಡೆ ಏನಾಗುತ್ತಿದೆ ಎಂಬುದನ್ನು ನೋಡುವಂತೆ ಮಾಡುತ್ತಿದೆ. ಇಂಡೋನೇಷ್ಯಾ ತನ್ನ ರಾಜಧಾನಿ ಸ್ಥಳಾಂತರಿಸುತ್ತಿದೆ. ಆಸ್ಟ್ರೇಲಿಯಾವು ಸರಾಗ ಆಡಳಿತಕ್ಕಾಗಿ ಕ್ಯಾನ್ಬೆರಾವನ್ನು ಹೊಂದಿದೆ. ಭಾರತಕ್ಕೆ ಎರಡು ಅಥವಾ ನಾಲ್ಕು ರಾಜಧಾನಿಗಳನ್ನು ಹೊಂದಬಾರದೇಕೆ? ಎಂದು ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಪ್ರಶ್ನಿಸಿದ್ದಾರೆ.
ಬೆಂಗಳೂರು ಅಥವಾ ಚೆನ್ನೈಗೆ ಬದಲಿಸಿ
ರಾಜಧಾನಿಯನ್ನು ದೆಹಲಿಯಿಂದ ಬೆಂಗಳೂರು ಅಥವಾ ಚೆನ್ನೈಗೆ ಸ್ಥಳಾಂತರ ಮಾಡಲು ಕಾಲ ಕೂಡಿ ಬಂದಿದೆ ಎಂದು ಸುಪ್ರಿಯಾ ಬಂಡೋಪಾಧ್ಯಾಯ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಯನ್ನು ಆವರಿಸಿದ ವಿಷಕಾರಿ 'ಹೊಂಜು'; ಶಾಲೆಗಳಿಗೆ ರಜಾ ಘೋಷಣೆ
ದಕ್ಷಿಣ ಭಾರತಕ್ಕೆ ಸ್ಥಳಾಂತರಿಸಿ
ರಾಜಧಾನಿಯನ್ನು ದೆಹಲಿಯಿಂದ ದಕ್ಷಿಣ ಭಾರತಕ್ಕೆ ಸ್ಥಳಾಂತರ ಮಾಡಿ. ನಾವು ಕೆಲಸಗಳಿಗಾಗಿ ಎಷ್ಟು ಸಮಯ ಹೀಗೆ ದೆಹಲಿಗೆ ಬರಬೇಕು? ಎಂದು ಸ್ವಾಮಿಲನ್ ಎಂಬುವವರು ಹೇಳಿದ್ದಾರೆ.
ವಾಯುಮಾಲಿನ್ಯ ತಗ್ಗಲಿದೆ
ಸರ್ಕಾರವು ರಾಜಧಾನಿಯನ್ನು ಭಾರತದ ಬೇರೆ ಯಾವುದಾದರೂ ನಗರಕ್ಕೆ ಸ್ಥಳಾಂತರ ಮಾಡಿದರೆ ದೆಹಲಿಯಲ್ಲಿನ ತೀರಾ ಇಕ್ಕಟ್ಟಾದ ಸಂಚಾರ ದಟ್ಟಣೆ ಮತ್ತು ಜನಸಂಖ್ಯೆ ನಿಯಂತ್ರಣಕ್ಕೆ ಬರಲಿದೆ. ಇದರಿಂದ ವಾಯುಮಾಲಿನ್ಯ ಕೂಡ ತಗ್ಗಲಿದೆ ಎಂದು ಅತುಲ್ ಚತುರ್ವೇದಿ ಹೇಳಿದ್ದಾರೆ.
'ಗ್ಯಾಸ್ ಚೇಂಬರ್ ಆದ ದೆಹಲಿ!' ಮಾಸ್ಕ್ ನೀಡಿದ ಕೇಜ್ರಿವಾಲ್
ಆಡಳಿತ ವಿಭಜನೆಯ ಅನುಕೂಲ
ದೆಹಲಿ ಈಗ ಗ್ಯಾಸ್ ಚೇಂಬರ್ನಂತಾಗಿದೆ. ಅಲ್ಲಿಂದ ರಾಜಧಾನಿಯನ್ನು ಹೊರಗೆ ತನ್ನಿ. ದಕ್ಷಿಣ ಭಾರತಕ್ಕೂ ಹತ್ತಿರವಾಗುವ ನಗರವನ್ನು ರಾಜಧಾನಿಯನ್ನಾಗಿ ಮಾಡಿ. ಇಲ್ಲವೇ, ಮತ್ತೊಂದು ಪರ್ಯಾಯ ರಾಜಧಾನಿಯನ್ನು ಸ್ಥಾಪಿಸಿ. ಇದರಿಂದ ಆಡಳಿತ ವಿಭಜನೆಯಾಗುವುದರಿಂದ ಆಡಳಿತ ಕಾರ್ಯಗಳೂ ಸುಲಭವಾಗಲಿದೆ. ದೆಹಲಿಯ ಮಾಲಿನ್ಯ ಕೂಡ ತಗ್ಗಲಿದೆ ಎಂದು ಅನೇಕರು ಸಲಹೆ ನೀಡಿದ್ದಾರೆ.