ಪಕ್ಷಾಧ್ಯಕ್ಷರ ಆಯ್ಕೆ ವಿಳಂಬವಾದಷ್ಟೂ ಪಕ್ಷಕ್ಕೇ ಅಪಾಯ: ಶಶಿ ತರೂರ್
ನವದೆಹಲಿ, ಜುಲೈ 29: "ಅಧ್ಯಕ್ಷ ಪಟ್ಟ ಹಲವು ದಿನಗಳ ಕಾಲ ಖಾಲಿ ಉಳಿದರೆ ಅದು ಪಕ್ಷಕ್ಕೇ ಅಪಾಯಕಾರಿ, ಅದರಿಂದ ಪಕ್ಷದಲ್ಲಿ ಬಿರುಕು ಮೂಡಬಹುದು" ಎಂದು ತಿರುವನಂತಪುರಂ ಕ್ಷೇತ್ರದ ಕಾಂಗ್ರೆಸ್ ಸಂಸದ ಶಶಿ ತರೂರ್ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕುರಿತಂತೆ ನಡೆಯುತ್ತಿರುವ ಚರ್ಚೆಯ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದಿದ್ದ ಶಶಿ ತರೂರ್ ಇದೀಗ ಮೌನ ಮುರಿದಿದ್ದು, 'ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆರಿಸುವ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನೀಡಿದ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಆದರೆ ಪ್ರಿಯಾಂಕಾ ಗಾಂಧಿ ಅವರು ಆಯ್ಕೆ ಮಾಡಿದ ಅಧ್ಯಕ್ಷರಾಗಬೇಕು, ನೇಮಿಸಿದ ಅಧ್ಯಕ್ಷರಾಗಬಾರದು" ಎಂದು ಒಗಟಾಗಿ ಹೇಳಿದ್ದಾರೆ.
ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷ ಕಳಪೆ ಪ್ರದರ್ಶನದ ನೈತಿಕ ಹೊಣೆ ಹೊತ್ತು ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದರು. 140 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ನಾಯಕ ಯಾರು ಎಂಬ ಚಿಂತೆ ಎದುರಾಗಿದ್ದು, ಎರಡು ತಿಂಗಳಿನಿಂದ ಅಧ್ಯಕ್ಷರಿಲ್ಲದೆ ಪಕ್ಷ ಮುನ್ನಡೆಯುತ್ತಿದೆ!

ಗಾಂಧಿ-ನೆಹರು ಕುಟುಂಬಸ್ಥರನ್ನೇ ಈ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಕಾಂಗ್ರೆಸ್ ನ ಹಿರಿಯರ ಅಭಿಪ್ರಾಯವಾಗಿದ್ದು, ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರು ಮುಂಚೂಣಿಯಲ್ಲಿದೆ. ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ, ನಾನು ಅದೇ ಸ್ಥಾನದಲ್ಲಿದ್ದುಕೊಂಡು ಕೆಲಸ ಮಾಡುತ್ತೇನೆ, ನನಗೆ ಅಧ್ಯಕ್ಷ ಪಟ್ಟ ಬೇಡ ಎಂದಿದ್ದರು. ಆದರೆ ಕಾಂಗ್ರೆಸ್ ಹಿರಿಯ ನಾಯಕರೆಲ್ಲರೂ ಪ್ರಿಯಾಂಕಾ ಗಾಂಧಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲು ಉತ್ಸುಕತೆ ತೋರಿದ್ದು, ಅಧ್ಯಕ್ಷ ಸ್ಥಾನ ಬಹಳ ದಿನ ತೆರವಾಗಿರುವುದು ಪಕ್ಷದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಸೋಮವಾರ ಮಾತನಾಡುತ್ತ, "ಪ್ರಿಯಾಂಕಾ ಗಾಂಧಿ ಅವರು ಅಧ್ಯಕ್ಷರಾಗಬೇಕೋ ಬೇಡವೋ ಎಂಬುದನ್ನು ಈಗ ಸ್ಥಾನ ತ್ಯಜಿಸುತ್ತಿರುವ ಅಧ್ಯಕ್ಷರು ನಿರ್ಧರಿಸಬೇಕು. ಪ್ರಿಯಾಂಕಾ ಗಾಂಧಿ ಅವರು ಅಧ್ಯಕ್ಷರಾಗುವುದಾದರೆ ಅದಕ್ಕೆ ನಮ್ಮೆಲ್ಲರ ಬೆಂಬಲವಿದೆ" ಎಂದಿದ್ದರು.












Click it and Unblock the Notifications