ತಮ್ಮ ನಾಪತ್ತೆ ವದಂತಿಗೆ ಸ್ಪಷ್ಟನೆ ನೀಡಿದ ಶಶಿ ತರೂರ್
ನವದೆಹಲಿ, ನವೆಂಬರ್ 07: ಶಶಿ ತರೂರ್ ಸಾರ್ವಜನಿಕ ಬದುಕಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದೆ, ನಾಪತ್ತೆಯಾಗಿದ್ದಾರೆ ಎಂಬ ವದಂತಿಗೆ ಸಂಬಂಧಿಸಿದಂತೆ ಸ್ವತಃ ತರೂರ್ ಸ್ಪಷ್ಟನೆ ನೀಡಿದ್ದಾರೆ.
ಈ ವದಂತಿ ಎಲ್ಲವೂ ಸುಳ್ಳು. ನಾನು ನಾಪತ್ತೆಯಾಗುವ ಅಗತ್ಯವೇನಿದೆ? ಕೆಲವು ಆರೋಗ್ಯ ಸಮಸ್ಯೆಯಿಂದಾಗಿ ನಾನು ಕೆಲದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿ ಬಂತು. ಆದ್ದರಿಂದ ನಾನು ಸಾರ್ವಜನಿಕ ಬದುಕಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದರು.

ಇತ್ತೀಚೆಗೆ ಶಶಿ ತರೂರ್ ನೀಡಿದ ಕೆಲ ವಿವಾದಾಸ್ಪದ ಹೇಳಿಕೆಯಿಂದಾಗಿ ಕಾಂಗ್ರೆಸ್ ಪಕ್ಷ ಇರಿಸುಮುರಿಸು ಅನುಭವಿಸುವಂತಾಗಿತ್ತು. ಆ ಕಾರಣದಿಂದ ಪಕ್ಷದ ಹಿರಿಯ ನಾಯಕರ ಒತ್ತಡದಿಂದಲೇ ಶಶಿ ತರೂರ್ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿಲ್ಲವೇ ಎಂಬ ಪ್ರಶ್ನೆ ಎದುರಾಗಿತ್ತು. ಅವರು ಯಾವ ಫೋನ್ ಕರೆಗಳನ್ನೂ ಸ್ವೀಕರಿಸುತ್ತಿರಲಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರನ್ನು, 'ಶಿವಲಿಂಗದ ಮೇಲಿನ ಚೇಳಿನ ಹಾಗೆ ಮೋದಿ. ಅದನ್ನು ಕೈಯಿಂದ ಹೊಡೆಯುವುದೋ ಕಷ್ಟ, ಚಪ್ಪಲಿಯಿಂದ ಹೊಡೆಯುವ ಹಾಗೆಯೂ ಇಲ್ಲ' ಎಂಬ ಹೇಳಿಕೆಯನ್ನು ಇತ್ತೀಚೆಗೆ ನೀಡಿದ್ದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಅಭ್ಯರ್ಥಿಯಲ್ಲ. ಪಿ.ಚಿದಂಬರಂ, ಪ್ರಣಬ್ ಮುಖರ್ಜಿ ಮುಂತಾದ ಹಲವು ಸಮರ್ಥರು ಇದ್ದಾರೆ. ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂದು ಮೈತ್ರಿಕೂಟ ನಿರ್ಧರಿಸಲಿದೆ ಎಂಬ ತರೂರ್ ಹೇಳಿಕೆಯಿಂದಲೂ ಅವರು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿರಬಹುದು!












Click it and Unblock the Notifications