ಸಿಎಎ ವಿರೋಧಿ ಹೋರಾಟ: ದೆಹಲಿ ಆಗ್ನೇಯ ವಿಭಾಗಕ್ಕೆ ಹೆಚ್ಚುವರಿ ಡಿಸಿಪಿ ನೇಮಕ
ನವದೆಹಲಿ, ಫೆಬ್ರವರಿ.03: ಕೇಂದ್ರ ಸರ್ಕಾರದ ವಿರುದ್ಧ ಶಾಹಿನ್ ಬಾಗ್ ಮತ್ತು ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ. ಈ ಹಿನ್ನೆಲೆಯಲ್ಲಿ ನವದೆಹಲಿ ಆಗ್ನೇಯ ವಿಭಾಗಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಕುಮಾರ್ ಜ್ಞಾನೇಶ್ ರನ್ನು ಹೆಚ್ಚುವರಿ ಡಿಸಿಪಿ ಆಗಿ ನೇಮಕಗೊಳಿಸಲಾಗಿದೆ.
ದೆಹಲಿಯಲ್ಲಿ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಮುಂಬರುವ ಫೆಬ್ರವರಿ.08ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಇನ್ನೊಂದಡೆ ರಾಷ್ಟ್ರ ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಪ್ರತಿಭಟನೆ ತೀವ್ರಗೊಳ್ಳುತ್ತಿದೆ.
ಈ ಮೊದಲು ನವದೆಹಲಿ ಆಗ್ನೇಯ ವಿಭಾಗ ಡಿಸಿಪಿ ಆಗಿದ್ದ ಚಿನ್ಮಯಿ ಬಿಸ್ವಾಸ್ ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಶಿಫಾರಸ್ಸಿನ ಮೇಲೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

2008ನೇ ಐಪಿಎಸ್ ಬ್ಯಾಚ್ ನ ಅಧಿಕಾರಿಯಾಗಿದ್ದ ಚಿನ್ಮಯಿ ಬಿಸ್ವಾಸ್ ವ್ಯಾಪ್ತಿಯಲ್ಲೇ ಎರಡು ಬಾರಿ ಫೈರಿಂಗ್ ಘಟನೆಗಳು ನಡೆದವು. ಜಾಮಿಯಾ ವಿಶ್ವವಿದ್ಯಾಲಯ ಮತ್ತು ಶಾಹಿನ್ ಬಾಗ್ ನಲ್ಲಿ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದರು. ಇಂಥ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಚಿನ್ಮಯಿ ವಿಫಲರಾದ ಕಾರಣಕ್ಕೆ 1997ನೇ ಐಪಿಎಸ್ ಬ್ಯಾಚ್ ನ ಹಿರಿಯ ಪೊಲೀಸ್ ಅಧಿಕಾರಿ ಕುಮಾರ್ ಜ್ಞಾನೇಶ್ ರನ್ನು ಆ ಸ್ಥಾನಕ್ಕೆ ಹೆಚ್ಚುವರಿ ಡಿಸಿಪಿಯಾಗಿ ನೇಮಕ ಮಾಡಲಾಗಿದೆ.
ಕಳೆದ ಫೆಬ್ರವರಿ.01ರಂದು ಈ ಬಗ್ಗೆ ಹಿರಿಯ ಚುನಾವಣಾ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಆದರೆ, ಶನಿವಾರ ಕೂಡ ಶಾಹಿನ್ ಬಾಗ್ ನಲ್ಲಿ ಕಪಿಲ್ ಗುಜ್ಜರ್ ಎಂಬ ವ್ಯಕ್ತಿ ಗುಂಡಿನ ದಾಳಿ ನಡೆಸಿರುವ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಆ ಸ್ಥಳಕ್ಕೆ ದೌಡಾಯಿಸಿದ್ದರು. ಹೀಗಾಗಿ ಅಂದಿನ ಸಭೆಯಲ್ಲಿ ಕೆಲವು ಅಧಿಕಾರಿಗಳು ಹಾಜರ್ ಆಗಿರಲಿಲ್ಲ. ನಂತರದಲ್ಲಿ ಭಾನುವಾರ ನಡೆಸಿದ ಚುನಾವಣಾ ಅಧಿಕಾರಿಗಳ ಸಭೆಯಲ್ಲಿ ಮುಂಬರುವ ದೆಹಲಿ ವಿಧಾನಸಭಾ ಚುನಾವಣಾ ಭದ್ರತೆ ಮತ್ತು ದೆಹಲಿಯಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.












Click it and Unblock the Notifications