2 ಕೋಟಿ ವಕೀಲಿಕೆ ಶುಲ್ಕಕ್ಕೆ ಕೇಜ್ರಿವಾಲ್ ಗೆ ಜೇಠ್ಮಲಾನಿ ಪತ್ರ
ನವದೆಹಲಿ, ಜುಲೈ 26: ತಮ್ಮ ವಕೀಲಿಕೆ ಶುಲ್ಕ ಎರಡು ಕೋಟಿ ರುಪಾಯಿ ನೀಡುವಂತೆ ಹಿರಿಯ ವಕೀಲ ರಾಮ್ ಜೇಠ್ಮಲಾನಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಪತ್ರ ಬರೆದಿದ್ದಾರೆ. ಅದರ ಬೆನ್ನಲ್ಲೇ ಅರುಣ್ ಜೇಟ್ಲಿ ಹಾಕಿದ್ದ ಮಾನನಷ್ಟ ಮೊಕದ್ದಮೆಯಿಂದ ಹಿಂದೆ ಸರಿದಿದ್ದಾರೆ.
ಅರುಣ್ ಜೇಟ್ಲಿ ವಿರುದ್ಧ ಅವಮಾನ ಆಗುವಂಥ ಭಾಷೆ ಬಳಸುವಂತೆ ನಾನೇನೂ ಹೇಳಿರಲಿಲ್ಲ ಎಂದು ಕೇಜ್ರಿವಾಲ್ ಹೇಳಿಕೆ ನೀಡಿದ್ದರು. ಆ ಹೇಳಿಕೆ ನೀಡಿದ ನಂತರ ಜೇಠ್ಮಲಾನಿ ಪತ್ರ ಬರೆದಿದ್ದಾರೆ. ಖಾಸಗಿ ಸಭೆಗಳಲ್ಲಿ ತಮಗಿಂತ ಹೆಚ್ಚು ಖಾರವಾಗಿ ಜೇಟ್ಲಿ ವಿರುದ್ಧ ಕೇಜ್ರಿವಾಲ್ ಮಾತನಾಡಿದ್ದಾರೆ ಎಂದು ಜೇಠ್ಮಲಾನಿ ಹೇಳಿದ್ದಾರೆ.

ಕೇಜ್ರಿವಾಲ್ ವಿರುದ್ಧ ಜೇಟ್ಲಿ ಹಾಕಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ಕೋರ್ಟ್ ವಿಚಾರಣೆ ವೇಳೆ ವಕೀಲ ಜೇಠ್ಮಲಾನಿ ಅವರು ಅವಮಾನ ಆಗುವಂಥ ಪದ ಬಳಕೆ ಮಾಡಿದ್ದಾರೆ ಎಂದು ಹತ್ತು ಕೋಟಿ ರುಪಾಯಿಗೆ ಮತ್ತೊಂದು ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಆ ನಂತರ ಕೇಜ್ರಿವಾಲ್ ದೆಹಲಿ ಹೈ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದರು. ಜತೆಗೆ ಜೇಠ್ಮಲಾನಿ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ, ಜೇಟ್ಲಿ ವಿರುದ್ಧ ಅವಮಾನಕರ ಪದ ಬಳಕೆಗೆ ನಾನೇನೂ ಸೂಚನೆ ನೀಡಿರಲಿಲ್ಲ. ಹಿರಿಯ ವಕೀಲರಿಗೆ ಅಂಥ ಪದ ಬಳಕೆಗೆ ಸೂಚನೆ ನೀಡುವುದು ಒಪ್ಪಲು ಸಾಧ್ಯವೇ ಇಲ್ಲ ಎಂದಿದ್ದರು.












Click it and Unblock the Notifications