ಬಫರ್ಜೋನ್ ಕುರಿತ ಎನ್ಜಿಟಿ ಆದೇಶ ರದ್ದುಪಡಿಸಿದ ಸುಪ್ರೀಂಕೋರ್ಟ್
ನವದೆಹಲಿ, ಮಾರ್ಚ್ 6: ಬಫರ್ ಝೋನ್ ಕುರಿತ ಎನ್ಜಿಟಿ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ್ದು ಇದು ಕರ್ನಾಟಕ ಸರ್ಕಾರ ಹಾಗೂ ರಾಜಕಾಲುವೆ ಅಥವಾ ಬಫರ್ಜೋನ್ ನಲ್ಲಿ ನಿವೇಶನ ಹೊಂದಿರುವ 35000ಕ್ಕೂ ಹೆಚ್ಚು ಮಾಲಿಕರಿಗೆ ಅನುಕೂಲವಾಗಿದೆ.
ಕೆರೆ ಬದಿಯ 75 ಮೀಟರ್ ಮತ್ತು ರಾಜಕಾಲುವೆ, ಪ್ರಾಥಮಿಕ ಕಾಲುವೆ, ದ್ವಿತೀಯ ಮತ್ತು ತೃತೀಯ ಕಾಲುವೆಗಳ ಬದಿಯಿಂದ ಕ್ರಮವಾಗಿ 50 ಮೀ, 35 ಮೀ ಮತ್ತು 25 ಮೀ ಬಫರ್ ಜೋನ್ ಹಸಿರು ವಲಯ ಎಂದು ಗುರುತಿಸಿದ್ದ ಹಸಿರು ನ್ಯಾಯಾಧೀಕರಣದ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.
ಇದರಿಂದಾಗಿ ಬೆಂಗಳೂರಿನಲ್ಲಿ ಕೆರೆ ಹಾಗೂ ರಾಜಕಾಲುವೆಗಳ ಬದಿಯಲ್ಲಿ ನಿರ್ಮಾಣವಾಗಿದ್ದ ಸಾವಿರಾರು ಕಟ್ಟಡಗಳು ನೆಲಸಮವಾಗುವ ಭೀತಿಯಿಂದ ಪಾರಾದಂತಾಗಿದೆ.
ಇದೇ ವೇಳೆ ಹಸಿರು ನ್ಯಾಯಾಧೀಕರಣ ನಿಗದಿಪಡಿಸಿದ್ದ ಬಫರ್ ಜೋನ್ ಅನ್ನು ಬದಲಿಸಿರುವ ಸುಪ್ರೀಂಕೋರ್ಟ್, ಬೆಂಗಳೂರಿನ ಪರಿಷ್ಕೃತ ಮಾಸ್ಟರ್ ಪ್ಲಾನ್ -2015ರ ಪ್ರಕಾರ ಬಫರ್ ವಲಯವನ್ನು ನಿಗದಿಪಡಿಸುವಂತೆ ಸೂಚಿಸಿದೆ.

ಅದರ ಪ್ರಕಾರ ಕೆರೆ ಹಾಗೂ ಜಲಮೂಲಗಳಿಂದ 30 ಮೀಟರ್ ವರೆಗೆ ನಿರ್ಮಾಣ ಕಾಮಗಾರಿ ಮಾಡುವಂತಿಲ್ಲ, ಇನ್ನು ಪ್ರಾಥಮಿಕ ರಾಜಕಾಲುವೆಯ ಮಧ್ಯದಿಂದ ಎರಡೂ ಬದಿಗೆ 50 ಮೀಟರ್, ದ್ವಿತೀಯ ರಾಜಕಾಲುವೆಯ ಮಧ್ಯದಿಂದ 25 ಮೀಟರ್ ಹಾಗೂ ತೃತೀಯ ರಾಜಕಾಲುವೆಗಳ ಮಧ್ಯದಿಂದ 15 ಮೀಟರ್ ವರೆಗೆ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತಿಲ್ಲ.
ರಾಜ್ಯ ಸರ್ಕಾರದ ವಾದಕ್ಕೆ ಸಿಕ್ಕ ಗೆಲುವು ಇದಾಗಿದೆ. ಬಫರ್ ಜೋನ್ ಮರು ನಿಗದಿಪಡಿಸಿದ ಎನ್ಜಿಟಿ ತೀರ್ಪಿನ ಭಾಗವನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿತ್ತು.
ಒಂದೊಮ್ಮೆ ಬಫರ್ ಜೋನ್ ವಿಚಾರವಾಗಿ ನ್ಯಾಯಾಧೀಕರಣ ಆದೇಶವನ್ನು ಸುಪ್ರೀಂ ಮಾನ್ಯ ಮಾಡಿದರೆ, ಬೆಂಗಳೂರಿನಲ್ಲಿ ಲಕ್ಷಾಂತರ ಕಟ್ಟಡಗಳ ನೆಲಸಮ ಮಾಡುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿತ್ತು.












Click it and Unblock the Notifications