ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ಆಘಾತ!
ನವದೆಹಲಿ, ಸೆಪ್ಟೆಂಬರ್ 12: ಕರ್ನಾಟಕದ 17 ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್ ನಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ.
ಶಾಸಕ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಶಾಸಕರು ಮನವಿ ಸಲ್ಲಿಸಿದ್ದರು. ಗುರವಾರ ವಿಚಾರಣೆ ನಡೆಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ನಿಮ್ಮ ಸರದಿ ಬರುವವರೆಗೂ ಕಾಯಿರಿ, ತುರ್ತು ವಿಚಾರಣೆಯ ಅಗತ್ಯವಿಲ್ಲ ಎನ್ನುವ ಮೂಲಕ ಶಾಸಕರಿಗೆ ನಿರಾಸೆಯನ್ನುಂಟು ಮಾಡಿತು.
ಮಂಗಳವಾರ ಸಂಜೆಯೂ ಪ್ರಕರಣಗಳ ಲಿಸ್ಟ್ ಹಾಕುವಾಗ ಸೆ.17 ಕ್ಕೆ ವಿಚಾರಣೆಯನ್ನು ಮುಂದೂಡಲಾಗಿತ್ತು.

ಸೆ.17 ಕ್ಕೆ ಮುಂದೂಡಿಕೆ
ಸೆ. 11ರ ಬುಧವಾರ 14 ಕಾಂಗ್ರೆಸ್ ಮತ್ತು 3 ಜೆಡಿಎಸ್ ಶಾಸಕರು ಸಲ್ಲಿಸಿರುವ ಅರ್ಜಿಯ ನ್ಯಾಯಮೂರ್ತಿಗಳಾದ ಎನ್. ವಿ. ರಮಣ, ಅಜಯ್ ರಸ್ತೋಗಿ ಪೀಠದಲ್ಲಿ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿತ್ತು. ಆದರೆ ಮಂಗಳವಾರ ಸಂಜೆ ಪ್ರಕರಣಗಳ ಪಟ್ಟಿ ಮಾಡುವಾಗ ಅನರ್ಹ ಶಾಸಕರ ಪ್ರಕರಣವನ್ನು ಸೆ.17 ಕ್ಕೆ ಮುಂದೂಡಿತ್ತು.

ತುರ್ತು ವಿಚಾರಣೆಗೆ ಅರ್ಜಿ
ಸೆಪ್ಟೆಂಬರ್ 17 ಕ್ಕೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮುಂದೂಡಿದ್ದರೂ, ಗುರುವಾರವೇ ಪ್ರಕರಣವನ್ನು ಲಿಸ್ಟ್ ಮಾಡುವಂತೆ ಮತ್ತು ತುರ್ತು ವಿಚಾರಣೆ ನಡೆಸುವಂತೆ ಅನರ್ಹ ಶಾಸಕರು ಮನವಿ ಮಾಡಿದ್ದರು. ಆದರೆ ಅದನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, "ನಿಮ್ಮ ಸರದಿ ಬರುವವರೆಗೂ ಕಾಯಿರಿ, ತುರ್ತು ವಿಚಾರಣೆಯ ಅಗತ್ಯವಿಲ್ಲ" ಎಂದಿತು.

ಯಾರ್ಯಾರು ಅನರ್ಹ ಶಾಸಕರು?
ರಮೇಶ್ ಜಾರಕಿಹೊಳಿ (ಗೋಕಾಕ್), ಎಂಟಿಬಿ ನಾಗರಾಜ್ (ಹೊಸಕೋಟೆ), ಎಸ್. ಟಿ. ಸೋಮಶೇಖರ್ (ಯಶವಂತಪುರ), ಆನಂದ್ ಸಿಂಗ್ (ವಿಜಯನಗರ), ಶಿವರಾಂ ಹೆಬ್ಬಾರ್ (ಯಲ್ಲಾಪುರ), ಶ್ರೀಮಂತ ಪಾಟೀಲ್ (ಕಾಗವಾಡ), ಕೆ.ಸುಧಾಕರ್ (ಚಿಕ್ಕಬಳ್ಳಾಪುರ), ಮುನಿರತ್ನ (ಆರ್. ಆರ್. ನಗರ), ಪ್ರತಾಪ್ ಗೌಡ ಪಾಟೀಲ್ (ಮಸ್ಕಿ), ರೋಷನ್ ಬೇಗ್ (ಶಿವಾಜಿನಗರ). ಬೈರತಿ ಬಸವರಾಜ (ಕೆ. ಆರ್. ಪುರಂ), ಮಹೇಶ್ ಕಮಟಳ್ಳಿ (ಅಥಣಿ), ಕೆ. ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್), ಎಚ್. ವಿಶ್ವನಾಥ್ (ಹುಣಸೂರು),ಕೆ. ನಾರಾಯಣ ಗೌಡ (ಕೆ. ಆರ್. ಪೇಟೆ), ಆರ್. ಶಂಕರ್ (ರಾಣೆಬೆನ್ನೂರು), ಬಿ. ಸಿ. ಪಾಟೀಲ್ (ಹಿರೇಕೆರೂರು)

ಗೊಂದಲಕ್ಕೀಡಾದ ರಾಜಕೀಯ ಭವಿಷ್ಯ
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಸರ್ಕಾರದ ವಿರುದ್ಧ ಬಂಡಾಯ ಎದ್ದು ರೆಸಾರ್ಟ್ ನಲ್ಲಿ ತಂಗಿದ್ದ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ನಂತರ ಸಮ್ಮಿಶ್ರ ಸರ್ಕಾರವೂ ನೆಲಕಚ್ಚಿ ಹೊಸ ಸರ್ಕಾರ ಬಂತು. ಜು.26 ಮತ್ತು ಆ.1 ರಂದೇ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರೂ ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ಮಾಡುವ ಅಗತ್ಯವಿಲ್ಲ ಎಂದು ಮುಂದೂಡುತ್ತಲೇ ಇರುವುದು ಶಾಸಕರಿಗೆ ತಲೆನೋವಾಗಿದೆ. ಅಯೋಧ್ಯೆಯ ರಾಮಜನ್ಮಭೂಮಿ ಪ್ರಕರಣವೂ ಸುಪ್ರೀಂ ಕೋರ್ಟ್ ನಲ್ಲಿ ಪ್ರತಿದಿನವೂ ವಿಚಾರಣೆಗೊಳಪಡುತ್ತಿದ್ದರಿಂದ ವಿಚಾರಣೆಯನ್ನು ಮುಂದೂಡಲಾಗುತ್ತಿತ್ತು. ಸುಪ್ರೀಂ ಕೋರ್ಟ್ ನ ಆದೇಶ ಹೊರಬರುವವರೆಗೂ ಅನರ್ಹ ಶಾಸಕರ ರಾಜಕೀಯ ಭವಿಷ್ಯವೇನು ಎಂಬ ಗೊಂದಲ ಅವರನ್ನೇ ಕಾಡುತ್ತಿದೆ!












Click it and Unblock the Notifications