ಶರವಣ ಭವನ್ ಹೋಟೆಲ್ ಮಾಲೀಕರಿಗೆ ಜೀವಾವಧಿ ಶಿಕ್ಷೆ ಕಾಯಂ
ನವದೆಹಲಿ, ಮಾರ್ಚ್ 29: ಶರವಣ ಭವನ್ ಹೋಟೆಲ್ ಸಮೂಹದ ಮಾಲೀಕ ಪಿ.ರಾಜಗೋಪಾಲ್ ಅವರಿಗೆ ಶರಣಾಗಲು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಶುಕ್ರವಾರದಂದು ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಎತ್ತಿ ಹಿಡಿದಿದ್ದು, ತಮ್ಮದೇ ಹೋಟೆಲ್ ಸಮೂಹದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯನ್ನು 2001ರಲ್ಲಿ ಕೊಲೆ ಮಾಡಿದ ಆರೋಪದಲ್ಲಿ ಜೀವಾವಧಿ ಶಿಕ್ಷೆ ಕಾಯಂ ಆಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
2009ರಲ್ಲಿ ಸುಪ್ರೀಂ ಕೋರ್ಟ್ ನಿಂದ ರಾಜ್ ಗೋಪಾಲ್ ಗೆ ಜಾಮೀನು ಮಂಜೂರಾಗಿತ್ತು. ಇದೀಗ ಜುಲೈ 7ನೇ ತಾರೀಕಿನೊಳಗೆ ಶರಣಾಗಬೇಕಿದೆ. ತಮ್ಮ ಹೋಟೆಲ್ ಸಮೂಹದ ಉದ್ಯೋಗಿಯ ಕೊಲೆ ವಿಚಾರದಲ್ಲಿ ಮದ್ರಾಸ್ ಹೈ ಕೋರ್ಟ್ ನೀಡಿದ್ದ ತೀರ್ಪನ್ನು ರಾಜ್ ಗೋಪಾಲ್ ಪ್ರಶ್ನಿಸಿದ್ದರು.
ಶಾಂತಕುಮಾರ್ ಪತ್ನಿಯನ್ನು ತಾವು ಮದುವೆ ಮಾಡಿಕೊಳ್ಳಬೇಕು ಎಂಬ ದುರುದ್ದೇಶದಿಂದ ರಾಜ್ ಗೋಪಾಲ್ ಈ ಕೊಲೆ ಸಂಚು ರೂಪಿಸಿದ್ದರು ಎಂದು ವಾದಿಸಲಾಗಿತ್ತು. ಶರವಣ ಭವನ್ ಹೋಟೆಲ್ ಸಿಬ್ಬಂದಿ ಆಗಿದ್ದ ಶಾಂತಕುಮಾರ್ ನ ಶವವು ಕೊಡೈಕೆನಾಲ್ ನ ಕಾಡಿನ ಪೆರುಮಾಳ್ ಮಲೈ ನಲ್ಲಿ ಪತ್ತೆಯಾಗಿತ್ತು.

1990ರ ದಶಕದ ಪ್ರಕರಣ ಇದು. ಚೆನ್ನೈ ಶಾಖೆಯ ಶರವಣ ಭವನ್ ಹೋಟೆಲ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದವರ ಮಗಳು ಜೀವಜ್ಯೋತಿಯನ್ನು ರಾಜ್ ಗೋಪಾಲ್ ಮದುವೆ ಆಗಲು ಬಯಸಿದ್ದರು. ಅದಾಗಲೇ ರಾಜ್ ಗೋಪಾಲ್ ಗೆ ಇಬ್ಬರು ಹೆಂಡತಿಯರು ಇದ್ದರು. ಆ ಮದುವೆ ಪ್ರಸ್ತಾವಕ್ಕೆ ಜೀವಜ್ಯೋತಿ ತಕರಾರು ತೆಗೆದರು.
ಆ ನಂತರ 1999ರಲ್ಲಿ ಶಾಂತಕುಮಾರ್ ಅವರನ್ನು ಜೀವಜ್ಯೋತಿ ಮದುವೆ ಆದರು. ನೀವಿಬ್ಬರು ಡೈವೋರ್ಸ್ ತೆಗೆದುಕೊಳ್ಳಿ ಎಂದು ರಾಜ್ ಗೋಪಾಲ್ ಬೆದರಿಸಿದ್ದಾಗಿ ವಕೀಲರು ಕೋರ್ಟ್ ಗೆ ಹೇಳಿದ್ದಾರೆ. 2001ರಲ್ಲಿ ಈ ದಂಪತಿ ಪೊಲೀಸರ ಬಳಿ ದೂರು ಕೂಡ ನೀಡಿದ್ದಾರೆ. ಅದಾಗಿ ಕೆಲವು ದಿನಕ್ಕೆ ಶಾಂತಕುಮಾರ್ ಅಪಹರಣವಾಗಿ, ಕೊಲೆ ಆಗಿದ್ದರು.
ಶರವಣ ಭವನ್ ಬಹಳ ಹೆಸರುವಾಸಿಯಾದ ಹೋಟೆಲ್ ಗಳ ಸಮೂಹ. ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ ಡಮ್, ಫ್ರಾನ್ಸ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ 20 ದೇಶಗಳಲ್ಲಿ ಶಾಖೆ ಹೊಂದಿದೆ. ಭಾರತದಲ್ಲಿ ದೆಹಲಿಯೂ ಸೇರಿದಂತೆ 25 ಕಡೆ ಶಾಖೆಗಳನ್ನು ಹೊಂದಿದೆ.












Click it and Unblock the Notifications