ಮೊದಲ ಸಲಿಂಗಿ ನ್ಯಾಯಮೂರ್ತಿ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ ಸೌರಭ್ ಕೃಪಾಲ್
ನವದೆಹಲಿ, ನವೆಂಬರ್ 16: ದೆಹಲಿ ಹೈಕೋರ್ಟ್ಗೆ ಶೀಘ್ರದಲ್ಲೇ ಮೊದಲ ಸಲಿಂಗಿ ನ್ಯಾಯಮೂರ್ತಿ ನೇಮಕವಾಗಲಿದೆ.
ದೇಶದ ಸಂವಿಧಾನಾತ್ಮಕ ಕೋರ್ಟ್ಗೆ ತಾನು ಸಲಿಂಗಿ ಎಂದು ಘೋಷಿಸಿಕೊಂಡಿರುವ ವ್ಯಕ್ತಿಯೊಬ್ಬರು ನ್ಯಾಯಮೂರ್ತಿಯಾಗುವ ಸಾಧ್ಯತೆ ಇದೀಗ ನಿಚ್ಚಳವಾಗಿದೆ.
ಹಿರಿಯ ವಕೀಲ ಸೌರಭ್ ಕೃಪಾಲ್ ಅವರನ್ನು ದೆಹಲಿ ಹೈಕೋರ್ಟ್ಗೆ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ್ದು, ಕೃಪಾಲ್ ಅವರ ಪ್ರಸ್ತಾವಿತ ಬಡ್ತಿಗೆ ಕೇಂದ್ರ ಸರ್ಕಾರ ಮಾಡಿದ್ದ ಪ್ರಾಥಮಿಕ ಆಕ್ಷೇಪವನ್ನು ಕೊಲಿಜಿಯಂ ತಳ್ಳಿ ಹಾಕಿದೆ.
ನವೆಂಬರ್ 11ರಂದು ನಡೆದ ಸುಪ್ರೀಂಕೋರ್ಟ್ ಕೊಲಿಜಿಯಂ ಸಭೆಯಲ್ಲಿ ಸೌರಭ್ ಕೃಪಾಲ್ ಅವರನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವ ಪ್ರಸ್ತಾವವನ್ನು ಅನುಮೋದಿಸಲಾಗಿದೆ ಎಂಬ ಕೊಲಿಜಿಯಂ ನಿರ್ಣಯವನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
2017ರ ಅಕ್ಟೋಬರ್ನಲ್ಲಿ ದೆಹಲಿ ಹೈಕೋರ್ಟ್ ಕೃಪಾಲ್ ಅವರ ನೇಮಕಕ್ಕೆ ಅವಿರೋಧ ಶಿಫಾರಸು ಮಾಡಿತ್ತು, ಆದಾಗ್ಯೂ ಕೃಪಾಲ್ ಅವರ ಹಿನ್ನೆಲೆಯಲ್ಲಿ ಪರಿಶೀಲಿಸಲು ಗುಪ್ತಚರ ಬ್ಯೂರೋಗೆ ಸೂಚಿಸಲಾಗಿತ್ತು. ಆದರೆ 2018 ಹಾಗೂ 2019ರಲ್ಲಿ ವ್ಯತಿರಿಕ್ತ ವರದಿ ವರದಿ ನೀಡಿದ್ದ ಐಬಿ, ಕೃಪಾಲ್ ಅವರ ಸಂಗಾತಿ ವಿದೇಶಿಯರಾಗಿದ್ದು, ಇದು ಭದ್ರತಾ ಅಪಾಯ ಸಾಧ್ಯತೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿತ್ತು.
ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ಕೊಲಿಜಿಯಂ 49 ವರ್ಷದ ಕೃಪಾಲ್ ಅವರನ್ನು ಶಿಫಾರಸ್ಸು ಮಾಡಿದೆ. ಕೃಪಾಲ್ ಅವರು ಐತಿಹಾಸಿಕ ನವತೇಜ್ ಸಿಂಗ್ ಜೊಹಾರ್ ಪ್ರಕರಣದಲ್ಲಿ ಮುಂಚೂಣಿ ವಕೀಲರಾಗಿದ್ದು, 2018ರ ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸಲಿಂಗಕಾಮವನ್ನು ಅಪರಾಧಮುಕ್ತಗೊಳಿಸಿತ್ತು.
ನ್ಯಾಯಮೂರ್ತಿ ಉದಯ್ ಯು ಲಲಿತ್, ಎಎಂ ಖನ್ವೀಲ್ಕರ್, ಡಿವೈ ಚಂದ್ರಚೂಡ್ ಹಾಗೂ ಎಲ್ ನಾಗೇಶ್ವರ್ ರಾವ್ ಅವರು ಕೊಲಿಜಿಯಂನಲ್ಲಿದ್ದರು.
ಕೃಪಾಲ್ ಅವರ ಬಡ್ತಿ ಸುದೀರ್ಘ ಕಾಲದಿಂದ ಬಾಕಿ ಇದೆ, ಸಲಿಂಗಕಾಮವನ್ನು ಅಪರಾಧ ಕೃತ್ಯ ಎಂದು ಪರಿಗಣಿಸುವ ಭಾರತೀಯ ದಂಡಸಂಹಿತೆಯ ಸೆಕ್ಷನ್ 377ನ್ನು ರದ್ದುಪಡಿಸಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ನಿಜವಾದ ಗೌರವ ಸಿಕ್ಕಿದೆ ಎಂದು ಅಟಾರ್ನಿ ಜನರಲ್ ಹಾಗೂ ಹಿರಿಯ ವಕೀಲ ಮುಕುಲ್ ಹೇಳಿದ್ದಾರೆ.