ಕೃಷಿ ಕಾಯ್ದೆ ವಾಪಸ್ ಘೋಷಣೆ ಮಾಡಿದರೂ ನಡೆಯಲಿದೆ ರೈತರ 'ಸಂಸತ್ ಮಾರ್ಚ್'
ನವದೆಹಲಿ, ನವೆಂಬರ್ 21: ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಘೋಷಣೆ ಮಾಡಿದ್ದಾರೆ. ಆದರೆ ಸಂಯುಕ್ತ ಕಿಸಾನ್ ಮೋರ್ಚಾ ಮಾತ್ರ ನವೆಂಬರ್ 29 ರಂದು ಸಂಸತ್ತು ಅಧಿವೇಶನ ನಡೆದು ಅದರಲ್ಲಿ ಕೃಷಿ ಕಾಯ್ದೆಯನ್ನು ರದ್ದು ಮಾಡುವವರೆಗೂ ತಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ನವೆಂಬರ್ 22 ರಂದು ಲಕ್ನೋದಲ್ಲಿ ನಡೆಯಲಿರುವ ಮಹಾ ಪಂಚಾಯತ್, ರೈತರ ಪ್ರತಿಭಟನೆ ಆರಂಭವಾಗಿ ಒಂದು ವರ್ಷ ಆಗುವ ಹಿನ್ನೆಲೆ ನವೆಂಬರ್ 26 ರಂದು ನಡೆಯಲಿರುವ ಕಾರ್ಯಕ್ರಮಗಳು ಹಾಗೂ ಚಳಿಗಾಲದ ಸಂಸತ್ತು ಅಧಿವೇಶನದ ಮೊದಲ ದಿನದಂದು ಅಂದರೆ ನವೆಂಬರ್ 29 ರಂದು ನಡೆಯಲಿರುವ ಟ್ರಾಕ್ಟರ್ ಮಾರ್ಚ್ ಈ ಹಿಂದೆ ನಿಗದಿ ಪಡಿಸಿದಂತೆ ನಡೆಯಲಿದೆ.
ಕೃಷಿ ಕಾಯ್ದೆ ವಾಪಾಸ್: ಪಂಜಾಬ್ನಲ್ಲಿ ಬಿಜೆಪಿಯೊಂದಿಗೆ ಮೈತ್ರಿಯಿಲ್ಲ ಎಂದ ಅಕಾಲಿದಳ
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಭಾರತೀಯ ಕಿಸಾನ್ ಯೂನಿಯನ್ನ (ಬಿಕೆಯು) ಮಾಧ್ಯಮದ ಉಸ್ತುವಾರಿಯಾದ ಧರ್ಮೇಂದ್ರ ಮಲಿಕ್, "ಸಂಸತ್ತಿನಲ್ಲಿ ಈ ಮೂರು ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವವರೆಗೂ, ಭಾರತೀಯ ಕಿಸಾನ್ ಮೋರ್ಚಾದ ಕಾರ್ಯಕ್ರಮಗಳು ಮುಂದುವರಿಯಲಿದೆ," ಎಂದು ತಿಳಿಸಿದ್ದಾರೆ.
"ನವೆಂಬರ್ 29 ರಂದು ಸಂತಾಪ ಸಭೆಯು ಇದೆ. ಆ ದಿನದಂದು ನಮ್ಮ ಮುಂದಿನ ನಡೆಯ ಬಗ್ಗೆ ನಾವು ನಿರ್ಧಾರ ಕೈಗೊಳ್ಳುತ್ತೇವೆ," ಎಂದು ಸಿಂಘು ಗಡಿಯಲ್ಲಿ ನಡೆದ ಒಂಬತ್ತು ಜನ ಸದಸ್ಯರ ಸಭೆಯಲ್ಲಿ ಮಾತನಾಡಿದ ಬಿಕೆಯು ಮಾಧ್ಯಮದ ಉಸ್ತುವಾರಿಯಾದ ಧರ್ಮೇಂದ್ರ ಮಲಿಕ್ ಮಾಹಿತಿ ನೀಡಿದರು.
ಇನ್ನು ಈ ಸಂದರ್ಭದಲ್ಲೇ ಶನಿವಾರ ಗಾಜಿಪುರ ಗಡಿಗೆ ತಲುಪಿದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್, "ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಮಾಡಿದ ಘೋಷಣೆಯ ಇನ್ನುಳಿದ ಸಿಹಿಯು ರೈತರಿಗೆ ಇನ್ನಷ್ಟೇ ಲಭಿಸಬೇಕಾಗಿದೆ. (ಸಂಸತ್ತಿನಲ್ಲಿ ಕೃಷಿ ರದ್ದು ಮಾಡುವುದು) ಪ್ರಧಾನಮಂತ್ರಿ ನರೇಂದ್ರ ಮೋದಿ ಸಣ್ಣ ಹಾಗೂ ದೊಡ್ಡ ಎಂಬ ಉಲ್ಲೇಖದೊಂದಿಗೆ ರೈತರನ್ನು ವಿಂಗಡನೆ ಮಾಡುವುದನ್ನು ಮುಂದುವರಿಸಿದ್ದಾರೆ. ನಮ್ಮನ್ನು ಅವರು ಕೆಲವು ರೈತರು ಎಂದು ಹೇಳಿಕೊಂಡಿದ್ದಾರೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೃಷಿ ಕಾಯ್ದೆ ವಾಪಾಸ್: 'ಸತ್ಯ, ನ್ಯಾಯ ಹಾಗೂ ಅಹಿಂಸೆಗೆ ಜಯ'
ರೈತರ ವಿರುದ್ಧದ ಪ್ರಕರಣಗಳನ್ನು ವಾಪಾಸ್ ಪಡೆಯಿರಿ
ಪ್ರಧಾನಮಂತ್ರಿ ನರೇಂದ್ರ ಮೋದಿ ನೇರವಾಗಿ ರೈತರನ್ನು ಉದ್ದೇಶಿಸಿ ಮಾತನಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಕೇಶ್ ಟಿಕಾಯತ್, "ಮಾಧ್ಯಮದಲ್ಲಿ ಮಾತನಾಡುವುದು ನೇರವಾಗಿ ರೈತರನ್ನು ಉದ್ದೇಶಿಸಿ ಮಾತನಾಡಿದಂತೆ ಅಲ್ಲ. ಪ್ರಜಾಪ್ರಭುತ್ವದಲ್ಲಿ ಏಕಪಕ್ಷೀಯ ನಿರ್ಧಾರವನ್ನು ಕೈಗೊಳ್ಳಲಾಗದು. ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಹಲವಾರು ರೈತರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಆ ಪ್ರಕರಣಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು. ಈ ವಿಚಾರದಲ್ಲಿ ಸರ್ಕಾರವು ರೈತರೊಂದಿಗೆ ಮಾತುಕತೆ ನಡೆಸಬೇಕು. ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ನಮ್ಮ ಬೇಡಿಕೆಯು ಇನ್ನೂ ಕೂಡಾ ಪೂರೈಸಿಲ್ಲ. ಮುಂಬರುವ ಬೀಜ ಕಾನೂನಿನಿಂದ ಹಿಡಿದು ವಿದ್ಯುತ್ ತಿದ್ದುಪಡಿ ಮಸೂದೆವರೆಗೆ ಇನ್ನೂ ಹಲವಾರು ವಿವಾದಾತ್ಮಕ ಸಮಸ್ಯೆಗಳು ಬಾಕಿಯಾಗಿಯೇ ಉಳಿದಿದೆ," ಎಂದು ತಿಳಿಸಿದ್ದಾರೆ.
ಸರಿಯಾದ ರೀತಿಯಲ್ಲಿ ಲಖಿಂಪುರ ಖೇರಿ ಪ್ರಕರಣದ ತನಿಖೆ ನಡೆಯುತ್ತಿಲ್ಲ
ಇನ್ನು ಈ ಸಂದರ್ಭದಲ್ಲೇ ರಾಕೇಶ್ ಟಿಕಾಯತ್, "ಲಖಿಂಪುರ ಖೇರಿ ಪ್ರಕರಣದ ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ಈ ಪ್ರಕರಣದಲ್ಲಿ ಬಾಗಿಯಾಗಿರುವ ಆರೋಪ ಹೊತ್ತಿರುವ ಕೇಂದ್ರ ಸಚಿವರ ವಿಚಾರಣೆಯನ್ನು ಇನ್ನು ಕೂಡಾ ನಡೆಸಿಲ್ಲ. ಕಬ್ಬಿನ ಬೆಲೆಯು ನಾವು ಅಂದಾಜು ಮಾಡಿದಷ್ಟು ಅಧಿಕವಾಗಿಲ್ಲ. ಪಂಜಾಬ್ ಹಾಗೂ ಹರಿಯಾಣಕ್ಕಿಂತ ಕಬ್ಬಿನ ಬೆಲೆಯು ಕಡಿಮೆ ಇದೆ," ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)