ತಿಹಾರ್ ಬದಲಿಗೆ ಮಂಡೋಲಿ ಕಾರಾಗೃಹಕ್ಕೆ ಸಜ್ಜನ್ ಕುಮಾರ್
ನವದೆಹಲಿ, ಜನವರಿ 01: ಸಿಖ್ ಹತ್ಯಾಕಾಂಡ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ಸಿನ ಮಾಜಿ ಮುಖಂಡ ಸಜ್ಜನ್ ಕುಮಾರ್ (73) ಅವರು ಕೊನೆಗೂ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.
ಸೋಮವಾರದಂದು ದೆಹಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಶರಣಾದ ಸಜ್ಜನ್ ಅವರನ್ನು ಭದ್ರತಾ ಕಾರಣಕ್ಕಾಗಿ ರಿಹಾರ ಜೈಲಿನ ಬದಲಾಗಿ ಮಂಡೋಲಿ ಜೈಲಿನಲ್ಲಿರಿಸುವಂತೆ ಕೋರ್ಟ್ ಸೂಚಿಸಿದೆ. ಡಿ. 17ರಂದು ಶಿಕ್ಷೆ ಪ್ರಕಟಿಸಿದ್ದ ದೆಹಲಿ ಹೈಕೋರ್ಟ್, 31ರೊಳಗೆ ಶರಣಾಗುವಂತೆ ಸೂಚಿಸಿತ್ತು.
ಹೆಚ್ಚಿನ ಭದ್ರತೆ ಇರುವ ತಿಹಾರ್ ಜೈಲಿನಲ್ಲಿ ಇರಿಸುವಂತೆ ಸಜ್ಜನ್ ಕುಮಾರ್ ಮಾಡಿದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಧೀಶ ಅದಿತ್ ಗರ್ಗ್, ಈಶಾನ್ಯ ದೆಹಲಿಯಲ್ಲಿರುವ ಮಂಡೋಲಿ ಕಾರಾಗೃಹಕ್ಕೆ ಕಳುಹಿಸಿದರು. ಆದರೆ, ಅಪರಾಧಿಯನ್ನು ಪ್ರತ್ಯೇಕ ವಾಹನದಲ್ಲಿ ಜೈಲಿಗೆ ಕೊರೆದೊಯ್ಯುವಂತೆ ಪೊಲೀಸರಿಗೆ ಸೂಚಿಸಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ನಂತರ ನಡೆದಿದ್ದ ಸಿಖ್ ನರಮೇಧ ಪ್ರಕರಣದಲ್ಲಿ, ಕಾಂಗ್ರೆಸ್ ಹಿರಿಯ ಮುಖಂಡ ಸಜ್ಜನ್ ಕುಮಾರ್ ಅವರು ಪ್ರಮುಖ ಆರೋಪಿಯಾಗಿದ್ದರು. ಅವರು ದೆಹಲಿಯ ಕಂಟೋನ್ಮೆಂಟ್ ಬಳಿ ಸಿಖ್ ಧರ್ಮೀಯರ ಮೇಲೆ ತಮ್ಮ ಬೆಂಬಲಿಗರಿಂದ ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಹಿಂಸಾಚಾರಕ್ಕೆ ಬೆಂಬಲ ನೀಡಿದ ಆರೋಪದ ಎರಡು ಪ್ರಕರಣವನ್ನೂ ಅವರು ಎದುರಿಸುತ್ತಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಸಜ್ಜನ್ ರಾವ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಡಿ.17 ರಂದು ತೀರ್ಪು ನೀಡಿತ್ತು. ಈ ಮೂಲಕ ಸಜ್ಜನ್ ಕುಮಾರ್ ಅವರನ್ನು ಖುಲಾಸೆಗೊಳಿಸಿದ್ದ ಟ್ರಯಲ್ ಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾದ ಆದೇಶವನ್ನು ಹೈಕೋರ್ಟ್ ನೀಡಿತ್ತು.
1984ರ ಅಕ್ಟೋಬರ್ 31ರಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ನಂತರ ನಡೆದಿದ್ದ ಸಿಖ್ ನರಮೇಧ ಪ್ರಕರಣದಲ್ಲಿ, ಕಾಂಗ್ರೆಸ್ ಹಿರಿಯ ಮುಖಂಡರು ಸೇರಿದಂತೆ ಅನೇಕ ಮಂದಿ ಮೇಲೆ ಗಲಭೆ, ಹತ್ಯೆ ಪ್ರಕರಣಗಳು ದಾಖಲಾಗಿವೆ.
ಶರಣಾಗತಿ ದಿನಾಂಕ ಒಂದು ತಿಂಗಳು ವಿಸ್ತರಿಸುವಂತೆ ಸಜ್ಜನ್ ಕುಮಾರ್ ಮಾಡಿಕೊಂಡಿದ್ದ ಮನವಿಯನ್ನು ಕೋರ್ಟ್ ಡಿ. 21ರಂದು ತಳ್ಳಿಹಾಕಿತ್ತು.












Click it and Unblock the Notifications