ಶಬರಿಮಲೆ ವಿವಾದ: ವಕೀಲರ ಅಂಗಳಕ್ಕೆ ಚೆಂಡು ಎಸೆದ ಸುಪ್ರೀಂಕೋರ್ಟ್!
ನವದೆಹಲಿ, ಜನವರಿ 13: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ತೀರ್ಪಿನ ವಿರುದ್ಧ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮೂರು ವಾರಗಳ ಕಾಲ ಮುಂದೂಡಿದೆ.
ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಅವರ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ನ್ಯಾಯಪೀಠವು ಅರ್ಜಿಯನ್ನು ಸೋಮವಾರ ವಿಚಾರಣೆಗೆ ಒಳಪಡಿಸಿತು.
ಕಳೆದ ವರ್ಷ ನ.14ರಂದು ನೀಡಲಾಗಿದ್ದ ಶಬರಿಮಲೆ ದೇವಸ್ಥಾನದ ಕುರಿತಾದ ಪರಾಮರ್ಶನಾ ಆದೇಶದಲ್ಲಿ ಉಲ್ಲೇಖಿಸಲಾದ ಪ್ರಶ್ನೆಗಳ ಕುರಿತು ಮಾತ್ರವೇ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಹೇಳಿತು.
ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರೂ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ನ ಹಿಂದಿನ ಆದೇಶವನ್ನು ಪ್ರಶ್ನಿಸಿ 50ಕ್ಕೂ ಪರಾಮರ್ಶನಾ ಅರ್ಜಿಗಳು ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿದ್ದವು.

ಅನೇಕ ಅರ್ಜಿಗಳಿವೆ
ಶಬರಿಮಲೆ ಪ್ರಕರಣದಂತೆಯೇ ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶವಿಲ್ಲದ ನಿಯಮದ ಕುರಿತು ಅನೇಕ ಅರ್ಜಿಗಳು ಸುಪ್ರೀಂಕೋರ್ಟ್ ಮುಂದಿವೆ. ಮಸೀದಿ, ಪಾರ್ಸಿ ದೇವಾಲಯ, ದಾವೂದಿ ಬೋರಾ ಸಮುದಾಯಗಳಲ್ಲಿಯೂ ಮಹಿಳೆಯರಿಗೆ ಪ್ರವೇಶ ನಿರಾಕರಣೆಯ ವಿವಾದಗಳಿವೆ. ಹೀಗಾಗಿ ಈ ಎಲ್ಲ ಪ್ರಕರಣಗಳನ್ನೂ ಒಟ್ಟಿಗೆ ವಿಚಾರಣೆ ನಡೆಸುವುದು ಸೂಕ್ತ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತು.
ಶಬರಿಮಲೆ, ಮುಸ್ಲಿ ಮಹಿಳೆಯರು, ಪಾರ್ಸಿ ಮತ್ತು ದಾವೂದಿ ಬೋರಾ ಪ್ರಕರಣಗಳ ಎಲ್ಲಾ ಅರ್ಜಿದಾರರು, ಪ್ರತಿವಾದಿಗಳ ಪರ ವಕೀಲರು ಒಟ್ಟಿಗೆ ಕುಳಿತು ಚರ್ಚಿಸಿ ಯಾವ ಸಮಸ್ಯೆಗಳನ್ನು ನ್ಯಾಯಾಲಯದ ಮುಂದಿಡಬೇಕು ಎಂದು ನಿರ್ಧರಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತು.

ಜ.17ರಂದು ವಿಚಾರಣೆ
ವಿಚಾರಣೆಗೆ ಒಳಪಡಿಸಬೇಕಾದ ಅಂಶಗಳನ್ನು ಅಂತಿಮಗೊಳಿಸಲು ವಕೀಲರಿಗೆ ಮೂರುವಾರಗಳ ಕಾಲಾವಕಾಶ ನೀಡಲಾಗಿದೆ. ವಕೀಲರ ಸಭೆಯ ಆಯೋಜನೆಗೆ ಪ್ರಧಾನ ಕಾರ್ಯದರ್ಶಿಯು ಸಮನ್ವಯ ಸಾಧಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ನ್ಯಾಯಾಲಯದ ಆದೇಶದಂತೆ ಜ.17ರಂದು ಎಲ್ಲ ಅರ್ಜಿದಾರರ ಪರ ವಕೀಲರೂ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಹಿಂದಿನ ನ್ಯಾಯಪೀಠಗಳ ಪ್ರಶ್ನೆಗಳಷ್ಟೇ ವಿಚಾರಣೆ
ಸೋಮವಾರ ಅರ್ಜಿ ವಿಚಾರಣೆ ಆರಂಭಿಸಿದ ಆರಂಭದಲ್ಲಿಯೇ ಸಿಜೆಐ ಎಸ್ಎ ಬೊಬ್ಡೆ ಅವರು, 'ನಾವು ಇಂದು ಪರಾಮರ್ಶನಾ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿಲ್ಲ. ಐವರು ನ್ಯಾಯಮೂರ್ತಿಗಳ ನ್ಯಾಯಪೀಠವು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದ ಏಳು ಪ್ರಶ್ನೆಗಳನ್ನು ಮಾತ್ರವೇ ವಿಚಾರಣೆ ನಡೆಸುತ್ತೇವೆ' ಎಂದು ಸ್ಪಷ್ಟಪಡಿಸಿದರು.
ಇದುವರೆಗೆ ಅಯೋಧ್ಯಾ ಪ್ರಕರಣದಲ್ಲಿ ಹೇಗೆ ಎಲ್ಲ ಅರ್ಜಿದಾರರ ವಕೀಲರು ಸೇರಿ ವಾದ ಮಂಡಿಸಿದ್ದರೋ, ಅದೇ ಮಾದರಿಯಲ್ಲಿ ವಕೀಲರು ತಮ್ಮೊಳಗೆ ಚರ್ಚೆ ನಡೆಸಿ ಸಮಸ್ಯೆಗಳನ್ನು ಮಂಡಿಸಬೇಕು ಎಂದು ಸಿಜೆಐ ನಿರ್ದೇಶಿಸಿದರು.

ಅಯೋಧ್ಯಾ ಪ್ರಕರಣ ಮಾದರಿ
'ಅಯೋಧ್ಯಾ ಪ್ರಕರಣದಲ್ಲಿ ಹಿರಿಯ ವಕೀಲರಾದ ರಾಜೀವ್ ಧವನ್ ಮತ್ತು ವೈದ್ಯನಾಥನ್ ಅವರು ಅದ್ಭುತವಾದ ಕೆಲಸ ಮಾಡಿದ್ದರು. ನಾವು ಅದನ್ನು ಅನುಸರಿಸಬೇಕು' ಎಂದು ಸಿಜೆಐ ಹೇಳಿದರು.
ಆಗಿನ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು 3:2ರ ಬಹುಮತದ ತೀರ್ಪಿನೊಂದಿಗೆ ಪುನರ್ ಪರಿಶೀಲನಾ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದರಿಂದ 9 ನ್ಯಾಯಮೂರ್ತಿಗಳ ಪೀಠವನ್ನು ಸ್ಥಾಪಿಸಲಾಗಿತ್ತು.












Click it and Unblock the Notifications