ಮಂದಿರ ನಿರ್ಮಾಣಕ್ಕೆ ಜತೆಯಾಗಿ ಕೆಲಸ ಮಾಡೋಣ: ಮೋಹನ್ ಭಾಗ್ವತ್
ನವದೆಹಲಿ, ನವೆಂಬರ್ 9: ನಾವು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಲಿದ್ದೇವೆ. ಹಲವು ದಶಕಗಳ ಕಾಲ ಈ ಪ್ರಕರಣ ನಡೆದರೂ ಅಂತಿಮವಾಗಿ ಸರಿಯಾದ ತೀರ್ಪು ಪ್ರಕಟವಾಗಿದೆ. ಇದನ್ನು ನಾವು ಸೋಲು ಅಥವಾ ಗೆಲುವು ಎಂದು ನೋಡಬಾರದು. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಸರ್ಕಾರ ಮತ್ತು ಪ್ರತಿಯೊಬ್ಬರ ಪ್ರಯತ್ನವನ್ನು ನಾವು ಸ್ವಾಗತಿಸುತ್ತೇವೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದರು.
ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದಂತೆ ಶನಿವಾರ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ನ್ಯಾಯಾಲಯ ಏನು ಹೇಳಿದೆಯೋ ಅದನ್ನು ಪರಿಶೀಲಿಸುತ್ತೇವೆ. ವಿವಾದ ಅಂತ್ಯವಾಗುವಂತಹ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಅಪೇಕ್ಷಿಸುತ್ತೇವೆ. ಮುಂದೆ ಏನೇನು ಮಾಡಬೇಕೋ ಅವೆಲ್ಲವೂ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು. ನಾವು ರಾಮಮಂದಿರ ನಿರ್ಮಾಣವನ್ನು ಬಯಸಿದ್ದೇವೆ ಎಂದು ತಿಳಿಸಿದರು.
ಮುಸ್ಲಿಂ ಅರ್ಜಿದಾರರ ಕಡೆಗೆ ಭೂಮಿ ಒದಗಿಸುವಂತೆ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಅದನ್ನು ಸರ್ಕಾರ ನಿರ್ಧರಿಸಲಿದೆ. ಕೋರ್ಟ್ನ ಆಚೆಗೆ ವಿವಾದ ಬಗೆಹರಿಸಿಕೊಳ್ಳಲು ಅನೇಕ ಪ್ರಯತ್ನ ನಡೆಸಲಾಗಿತ್ತು. ಆದರೆ ಅವು ಸಫಲವಾಗಿರಲಿಲ್ಲ ಎಂದರು.

ಧರ್ಮಗಳಾಚೆ ನಾವೆಲ್ಲರೂ ಭಾರತದ ನಾಗರಿಕರು. ಇಲ್ಲಿ ಯಾವುದೇ ಹಿಂದೂ-ಮುಸ್ಲಿಮರು ಇಲ್ಲ. ಎಲ್ಲರೂ ಭಾರತೀಯರು. ನಾವು ಒಂದಾಗಿ ಬದುಕಬೇಕು. ನಾವು ಈ ಹಿಂದೆ ಏನು ನಡೆದಿತ್ತು ಎನ್ನುವುದು ಮರೆಯಬಾರದು. ಆದರೆ ಅವುಗಳನ್ನು ಹಿಂದಿಕ್ಕಿ ವೈಭವೋಪೇತ ಮಂದಿರ ನಿರ್ಮಾಣ ಮಾಡುವಲ್ಲಿ ಜತೆಯಾಗಿ ಕೆಲಸ ಮಾಡೋಣ ಎಂದು ಹೇಳಿದರು.












Click it and Unblock the Notifications