ನೆಹರೂ,ಗಾಂಧಿ ಕುರಿತು ಅನುರಾಗ್ ಹೇಳಿಕೆ: ಕ್ಷಮೆಗೆ ಕಾಂಗ್ರೆಸ್ ಆಗ್ರಹ
ನವದೆಹಲಿ, ಸೆಪ್ಟೆಂಬರ್ 18: ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಹಾಗೂ ಗಾಂಧಿ ಪರಿವಾರದ ಕುರಿತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಲೋಕಸಭೆಯಲ್ಲಿ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಕ್ಷಮೆ ಕೋರುವಂತೆ ಆಗ್ರಹಿಸಿದೆ.
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ 1948ರಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಸ್ಥಾಪಿಸಿದ್ದರು. ಆದರೆ ಇದುವರೆಗೂ ಅದರ ನೋಂದಣಿಯಾಗಿಲ್ಲ. ಕಾಂಗ್ರೆಸ್ನವರು ಕೇವಲ ಗಾಂಧಿ ಪರಿವಾರದ ಲಾಭಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಅನುರಾಗ್ ಠಾಕೂರ್ ಗಂಭೀರ ಆರೋಪ ಮಾಡಿದ್ದರು.
ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಅನುರಾಗ್ ಠಾಕೂರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಎಲ್ಲ ವಿಷಯದಲ್ಲೂ ನೆಹರೂ-ಗಾಂಧಿ ಪರಿವಾರವನ್ನು ಎಳೆದು ತರುವುದು ನಿಮಗೆ ರೂಢಿಯಾಗಿದೆ. ನಾವು ಪಿಎಂ ಕೇರ್ಸ್ ವಿಷಯದಲ್ಲಿ ಪ್ರಧಾನಿ ಹೆಸರನ್ನು ಪ್ರಸ್ತಾಪಿಸಿಯೇ ಇಲ್ಲ ಎಂದು ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಪಿಎಂ ಕೇರ್ಸ್ ಬೆಂಬಲಿಸಿ ಮಾತನಾಡುತ್ತಿದ್ದ ಅನುರಾಗ್ ಠಾಕೂರ್, ಸುಪ್ರೀಂಕೋರ್ಟ್ನಿಂದ ಹಿಡಿದು ಸಮಸ್ತ ದೇಶ ಪಿಎಂ ಕೇರ್ಸ್ ಪರವಾಗಿದ್ದರೆ ಕಾಂಗ್ರೆಸ್ ಮಾತ್ರ ಈ ಕುರಿತು ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ಹರಿಹಾಯ್ದರು.
ಠಾಕೂರ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಅಪ್ರಬುದ್ಧವಾಗಿ ಮಾತನಾಡುವ ಹಿಮಾಚಲದ ಈ ಹುಡುಗ ಯಾರು ಎಂದು ಪ್ರಶ್ನಿಸಿದರು.
ಪಿಎಂ ಕೇರ್ಸ್ ವಿಷಯದಲ್ಲಿ ಅನವಶ್ಯಕವಾಗಿ ನೆಹರೂ-ಗಾಂಧಿ ಪರಿವಾರದ ಹೆಸರನ್ನು ಎಳೆದು ತಂದ ಅನುರಾಗ್ ಠಾಕೂರ್ ಅವರು ಈ ಕೂಡಲೇ ಕ್ಷಮೆ ಕೋರಬೇಕೆಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.
ಅಲ್ಲದೇ ಅನುರಾಗ್ ಠಾಕೂರ್ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಸಂಸದರು ಪ್ರತಿಭಟನೆ ಆರಂಭಿಸಿದರು. ವಾಕ್ಸಮರ ತೀವ್ರವಾದ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸದನವನ್ನು ಮುಂದೂಡಿದರು.












Click it and Unblock the Notifications