ಭೂ ಹಗರಣ: ಸೋನಿಯಾ ಅಳಿಯನಿಗೆ ರಿಲೀಫ್
ನವದೆಹಲಿ, ಸೆ.16: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾಗೆ ರಿಲೆಫ್ ಸಿಕ್ಕಿದೆ. ಭೂ ಹಗರಣಗಳ ಸುಳಿಯಲ್ಲಿ ಸಿಲುಕಿದ್ದ ವಾದ್ರಾ ಅವರ ವಿರುದ್ಧ ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಆದೇಶಿಸಿದೆ. ವಾದ್ರಾ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಸಲ್ಲಿಸಿದ್ದ ಪಿಟೀಷನ್ ರದ್ದಾಗಿದೆ.
ವಕೀಲ ಎಂ.ಎಲ್ ಶರ್ಮ ಎಂಬುವರು ರಾಬರ್ಟ್ ವಾದ್ರಾ ವಿರುದ್ಧ ಸಿಬಿಐ ತನಿಖೆಗೆ ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ, ಜಸ್ಟೀಸ್ ಜಿ. ರೋಹಿಣಿ ಹಾಗೂ ಜಸ್ಟೀಸ್ ಆರ್ ಎಸ್ ಎಂಡ್ಲಾ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ತಿರಸ್ಕರಿಸಿದೆ.

ಹರ್ಯಾಣ, ದೆಹಲಿ ಸೇರಿದಂತೆ ಅನೇಕ ಕಡೆ ಭೂ ಹಗರಣದಲ್ಲಿ ಭಾಗಿಯಾಗಿರುವ ರಾಬರ್ಟ್ ವಾದ್ರಾ ಅವರು ವಂಚನೆ, ಫೋರ್ಜರಿ, ಕ್ರಿಮಿನಲ್ ಸಂಚು, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಉಲ್ಲಂಘಿಸಿದ್ದಾರೆ. ಸುಮಾರು 20, ೦೦೦ ಕೋಟಿ ರು ಗೂ ಅಧಿಕ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆದರೆ ಮಾತ್ರ ಸತ್ಯ ಹೊರಬೀಳಲಿದೆ ಎಂದು ವಕೀಲ ಎಂ.ಎಲ್ ಶರ್ಮ ಮನವಿ ಸಲ್ಲಿಸಿದ್ದರು.
ಸ್ಕೈ ಲೈಟ್ ಪ್ರೈ. ಲಿ ವಿರುದ್ಧ ಸಿಎಜಿ ಆಡಿಟ್ ಹಾಗೂ ತನಿಖೆ ನಡೆಸದಂತೆ ಹಾಲಿ ಸಿಎಜಿ ಶಶಿಕಾಂತ್ ಶರ್ಮ ಅವರು ಆದೇಶಿಸಿದ್ದರ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ವಕೀಲ ಶರ್ಮ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ವಿನೋದ್ ರೈ ಅವರು ಸಿಎಜಿ ಸ್ಥಾನ ತೊರೆದ ಮೇಲೆ ಅಧಿಕಾರ ವಹಿಸಿಕೊಂಡ ಶಶಿಕಾಂತ್ ಅವರು ಅಧಿಕಾರವಹಿಸಿಕೊಂಡ 15 ದಿನಗಳಲ್ಲೇ ವಾದ್ರಾ ಪರ ನಿಲುವು ತೋರಿದ್ದರು ಎಂದು ಆರೋಪಿಸಲಾಗಿದೆ.
ಸ್ಕೈಲೈನ್ ಪ್ರೈ ಲಿ ಸಂಸ್ಥೆ ರಾಬರ್ಟ್ ವಾದ್ರಾ ಹಾಗೂ ಅವರ ತಾಯಿ ಮೌರೀನ್ ವಾದ್ರಾ ಅವರಿಗೆ ಸೇರಿದ್ದಾಗಿದೆ. ವಾದ್ರಾ ಕಂಪನಿ ಹರ್ಯಾಣದಲ್ಲಿ ಕೃಷಿ ಭೂಮಿಗಳನ್ನು ಖರೀದಿಸಿರುವ ಬಗ್ಗೆ ಕೂಡಾ ಪ್ರಶ್ನಿಸಲಾಗಿದೆ. ಸಿಎಜಿ ಶಶಿಕಾಂತ್ ಶರ್ಮ ಅವರನ್ನು ಹುದ್ದೆಯಿಂದ ಕೆಳಗಿಸುವಂತೆ ಕೂಡಾ ಪಿಐಎಲ್ ನಲ್ಲಿ ಕೋರಲಾಗಿದೆ.[ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಹಿನ್ನೆಲೆ]












Click it and Unblock the Notifications