NDA ಜೊತೆ ಬ್ರೇಕಪ್: ಉಪೇಂದ್ರ ಕುಶ್ವಾಹ ನೀಡಿದ ಕಾರಣವೇನು?
ನವದೆಹಲಿ, ಡಿಸೆಂಬರ್ 10: ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಎನ್ ಡಿಎ ಜೊತೆಗಿನ ಮೈತ್ರಿ ಕಡಿದುಕೊಂಡ ರಾಷ್ಟ್ರೀಯ ಲೋಕ ಸಮತಾ ಪಕ್ಷ(ಆರ್ ಎಲ್ ಎಸ್ ಪಿ)ದ ನಾಯಕ ಉಪೇಂದ್ರ ಕುಶ್ವಾಹ ತಮ್ಮ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ರಾಜೀನಾಮೆ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕುಶ್ವಾಹ, ತಮ್ಮ ರಾಜೀನಾಮೆಗೆ ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಬಹ್ರೈಚ್ ಸಂಸದೆಯಾಗಿದ್ದ ಸಾವಿತ್ರಿಬಾಯಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. 'ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ, ದಲಿತರನ್ನು ಕಡೆಗಣಿಸುತ್ತಿದೆ. ಆ ಕಾರಣಕ್ಕೆ ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದಿದ್ದರು.
ಅದರ ಬೆನ್ನಲ್ಲೇ ಇದೀಗ ಕುಶ್ವಾಹ ಸಹ ಎನ್ ಡಿಎಯಿಂದ ಹೊರಬಂದಿರುವುದು ಬಿಜೆಪಿಗೆ ಆಘಾತವನ್ನುಂಟು ಮಾಡಿದೆ. ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ನಾಯಕರು ಮೈತ್ರಿಕೂಟವನ್ನೂ,ಪಕ್ಷವನ್ನೂ ತೊರೆಯುತ್ತಿರುವುದು ಉತ್ತಮ ಬೆಳವಣಿಗೆಯಂತೂ ಅಲ್ಲವೇ ಅಲ್ಲ.
ಆದರೆ ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಯು ಪಕ್ಷಗಳು ಸಹಮತಕ್ಕೆ ಬಂದಿದ್ದು, ಆರ್ ಎಲ್ ಎಸ್ ಪಿಯನ್ನು ಕಡೆಗಣಿಸಲಾಗುತ್ತಿದೆ ಎಂದು ಕುಶ್ವಾಹ ದೂರುತ್ತಿದ್ದಾರೆ.

ಮೋದಿ ಮೇಲೆ ಮುನಿಸು!
"ಪ್ರಧಾನಿ ನರೇಂದ್ರ ಮೋದಿಯವರು ಬಿಹಾರದ ಜನರ ಆಶೋತ್ತರಗಳನ್ನು ಈಡೇರಿಸಿಲ್ಲ. ವಿಶೇಷ ಸ್ಥಾನಮಾನದ ಬಗ್ಗೆ ಏನೂ ಮಾಡಿಲ್ಲ. ಬಿಹಾರ ಆಗ ಹೇಗಿತ್ತೋ, ಈಗಲೂ ಹಾಗೆಯೇ ಇದೆ. ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಸುಧಾರಿಸಿಲ್ಲ. ಬಿಹಾರಕ್ಕಾಗಿ ಈ ಸರ್ಕಾರ ಏನನ್ನೂ ಮಾಡಿಲ್ಲ"- ಉಪೇಂದ್ರ ಕುಶ್ವಾಹ

ನಿತೀಶ್ ಬಿಹಾರದ ಜನರಿಗೆ ಮೋಸ ಮಾಡಿದ್ದಾರೆ!
"ನನಗೆ ಸಾಕಷ್ಟು ಕಹಿ ಅನುಭವವಾಗಿದೆ. ನಾಣು ಎನ್ ಡಿಎ ಜೊತೆ ಸೇರುವುದರಿಂದ ಬಿಹಾರದ ಜನರಿಗೆ ನ್ಯಾಯ ದೊರಕಿಸಿಕೊಡಬಹುದು ಎಂದು ತಿಳಿದಿದ್ದೆ. ಆದರೆ ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ಬಿಜೆಪಿ ಮಾತ್ರ ಬಿಹಾರ ಮುಖ್ಯಮಂತ್ರಿಯ ಪರವಾಗಿ ನಿಂತಿತು. ನಿತೀಶ್ ಕುಮಾರ್ ಬಿಹಾರದ ಜನರಿಗೆ ಮೋಸ ಮಾಡಿದ್ದಾರೆ" - ಉಪೇಂದ್ರ ಕುಶ್ವಾಹ

ನನ್ನನ್ನು ನಾಶ ಮಾಡುವುದೇ ನಿತೀಶ್ ಅಜೆಂಡಾ
"ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರಿಗೆ ನನ್ನನ್ನು ಮತ್ತು ನನ್ನ ಪಕ್ಷವನ್ನು ನಾಶ ಮಾಡುವುದೇ ಅಜೆಂಡಾ. ಅದನ್ನು ಆಅರಂಭಿಸಿದ್ದು ಬಿಜೆಪಿ. ಬಿಹಾರದಲ್ಲಿ ಎಲ್ಲಾ ಮೈತ್ರಿಕೂಟಗಳಿಗೆ ಹೆಚ್ಚಿನ ಸೀಟು ನೀಡಲು ಬಿಜೆಪಿ ಒಪ್ಪಿದೆ. ಆದರೆ ಆರ್ ಎಲ್ ಎಸ್ ಪಿಯನ್ನು ಕಡೆಗಣಿಸಲಾಗಿದೆ" - ಉಪೇಂದ್ರ ಕುಶ್ವಾಹ

ಎನ್ ಡಿಎ ಜೊತೆ ಬ್ರೇಕಪ್!
ಎಲ್ಲವನ್ನೂ ಗಮನಿಸಿದ ಮೇಲೆ ನನಗೆ ಈ ಸಂಪುಟದಲ್ಲಿ ಇರುವುದು ಸರಿಯಲ್ಲ ಎನ್ನಿಸಿತು. ಆರೆಸ್ಸೆಸ್ ಅಜೆಂಡಾವನ್ನು ಪ್ರಚಾರ ಮಾಡುವ ಈ ಸಂಪುಟದಲ್ಲಿ ಒಂದು ನಿಮಿಷವೂ ಇರುವುದು ಬೇಡ ಎಂದು ನಾನು ರಾಜೀನಾಮೆ ನೀಡಿದೆ. ನನ್ನ ಪಕ್ಷವೂ ಎನ್ ಡಿಎ ಜೊತೆ ಇನ್ನುಮುಂದೇ ಹೆಜ್ಜೆ ಹಾಕುವುದಿಲ್ಲ- ಉಪೇಂದ್ರ ಕುಶ್ವಾಹ












Click it and Unblock the Notifications