370ನೇ ವಿಧಿ ರದ್ದತಿಯಿಂದ ಜಮ್ಮು ಜನರಿಗೆ ಪ್ರಯೋಜನ: ರಾಷ್ಟ್ರಪತಿ ಕೋವಿಂದ್
ನವದೆಹಲಿ, ಆಗಸ್ಟ್ 15: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ 370ನೇ ವಿಧಿಯ ರದ್ದತಿಯಿಂದ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವುದರಿಂದ ಈ ಪ್ರದೇಶದ ಜನರಿಗೆ ಭಾರಿ ಪ್ರಮಾಣದ ಪ್ರಯೋಜನವಾಗಲಿದೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಭರವಸೆ ವ್ಯಕ್ತಪಡಿಸಿದರು.
ಸ್ವಾತಂತ್ರ್ಯೋತ್ಸವದ ಮುನ್ನಾದಿನವಾದ ಬುಧವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ನಲ್ಲಿ ಇತ್ತೀಚೆಗೆ ಮಾಡಿರುವ ಬದಲಾವಣೆಗಳು ಜನರಿಗೆ ದೇಶದ ಇತರೆ ಭಾಗದ ನಾಗರಿಕರು ಪಡೆದುಕೊಳ್ಳುವಂತೆಯೇ ಸಮಾನ ಮುಕ್ತತೆ, ಹಕ್ಕುಗಳು, ಸವಲತ್ತುಗಳನ್ನು ಹಾಗೂ ಸೌಲಭ್ಯಗಳನ್ನು ಪಡೆದುಕೊಂಡು ಅನುಭವಿಸಲು ಅವಕಾಶ ನೀಡಲಿದೆ ಎಂದು ಹೇಳಿದರು.
''ಜಮ್ಮು-ಕಾಶ್ಮೀರ ಮತ್ತು ಲಡಾಕ್ನಲ್ಲಿ ಇತ್ತೀಚೆಗೆ ಮಾಡಲಾಗಿರುವ ಬದಲಾವಣೆಗಳು ಆ ಭಾಗದ ಪ್ರದೇಶಗಳಿಗೆ ಅಪಾರ ಲಾಭವನ್ನು ನೀಡಲಿವೆ ಎಂದು ನಾನು ಭರವಸೆ ಹೊಂದಿದ್ದೇನೆ' ಎಂದರು.

ನಾವು ಇಂದು ಅನುಭವಿಸುತ್ತಿರುವ ಸವಾಲುಗಳ ಬಗ್ಗೆ ಮಹಾತ್ಮಾ ಗಾಂಧಿ ಅವರು ಅಂದೇ ಮುನ್ಸೂಚನೆ ನೀಡಿದ್ದರು ಎಂದು ಹೇಳಿದರು.
ಈ ವರ್ಷ ಶ್ರೇಷ್ಠ, ಅತಿ ಪ್ರತಿಭಾವಂತ ಮತ್ತು ಪ್ರಭಾವಶಾಲಿ ವ್ಯಕ್ತಿಯಾಗಿದ್ದ ಗುರು ನಾನಕ್ ದೇವ್ ಜೀ ಅವರು 550ನೇ ಜಯಂತಿಯನ್ನು ಆಚರಿಸಲಿದ್ದೇವೆ. ಸಿಖ್ ಧರ್ಮದ ಸಂಸ್ಥಾಪಕರಾದ ಅವರಿಗೆ ಆ ಧರ್ಮದಾಚೆಗೂ ಅಪಾರ ಗೌರವಾದರಗಳು ದೊರಕಿವೆ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳು ಅಭಿವೃದ್ಧಿ, ಸಮತಾವಾದ, ಆರ್ಟಿಐಗೆ ಸಂಬಂಧಿಸಿದಂತೆ ಹಾಗೂ ಶಿಕ್ಷಣದಲ್ಲಿ ಮೀಸಲಾತಿ, ಹಿಂದುಳಿದ ವರ್ಗದವರಿಗೆ ಉದ್ಯೋಗ ಹಾಗೂ ಇತರೆ ಸೌಲಭ್ಯದ ಜತೆಗೆ ತ್ರಿವಳಿ ತಲಾಕ್ ರದ್ದುಗೊಳಿಸುವ ಮೂಲಕ ನಮ್ಮ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸುವುದು ಸೇರಿದಂತೆ ಅನೇಕ ಸವಲತ್ತುಗಳನ್ನು ಒದಗಿಸುತ್ತದೆ ಎಂದು ಹೇಳಿದರು.
ಇತ್ತೀಚಿನ ಸಂಸತ್ ಕಲಾಪಗಳಲ್ಲಿ ಅನೇಕ ಪ್ರಮುಖ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಯಾವ ಯಾವ ಚಟುವಟಿಕೆಗಳು ನಡೆಯಲಿವೆ ಎಂಬುದಕ್ಕೆ ಇದು ಸೂಚನೆ ನೀಡಿದೆ. ಭಾರತೀಯರಿಗೆ ಇರುವುದು ಸಮಾನ ಕನಸುಗಳು. ಅಭಿವೃದ್ಧಿಯ ಕನಸು ಪರಿಣಾಮಕಾರಿ ಹಾಗೂ ಪಾರದರ್ಶಕ ಸರ್ಕಾರದಿಂದ ಸಾಧ್ಯವಾಗುತ್ತಿದೆ ಎಂದರು.
ನಮ್ಮಲ್ಲಿನ ವಾಣಿಜ್ಯೋದ್ಯಮಿಗಳು ಚಿಕ್ಕ ಸ್ಟಾರ್ಟ್ ಅಪ್ ಅಥವಾ ದೊಡ್ಡ ಉದ್ಯಮವೇ ಆಗಿರಲಿ, ಪ್ರಾಮಾಣಿಕ ಮತ್ತು ಅಸಾಧಾರಣ ಉದ್ದಿಮೆಗಳನ್ನು ಸ್ಥಾಪಿಸಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದರೆ ಆರ್ಥಿಕ ಸುಧಾರಣೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರಕ್ಷಾ ಬಂಧನದ ಮುನ್ನಾದಿನವೂ ಆಗಿರುವ ಬುಧವಾರ ರಾಷ್ಟ್ರಪತಿ ಕೋವಿಂದ್ ಅವರು, ದೇಶದ ನಾಗರಿಕರಿಗೆ ಶುಭಾಶಯ ಕೋರಿದರು.
''ರಕ್ಷಾ ಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ವಿಶಿಷ್ಟ ಬಾಂಧವ್ಯದ ಸಂಭ್ರಮವಾಗಿದೆ. ಸಹೋದರಿಯರು ಕಟ್ಟುವ ರಾಖಿ, ಪ್ರೀತಿ, ಅನುಭೂತಿ ಮತ್ತು ಸಹೋದರ ಹಾಗೂ ಸಹೋದರಿಯರ ನಡುವಿನ ಪರಸ್ಪರ ನಂಬಿಕೆಯ ಸಂಕೇತವಾಗಿದೆ'' ಎಂದು ಹೇಳಿದರು.












Click it and Unblock the Notifications