'ದೆಹಲಿಗೆ ವಾಪಸ್ ಬನ್ನಿ, ಕೆಲಸ ಮಾಡಿ' ಕೇಜ್ರಿಗೆ ಬಿಜೆಪಿ ನಾಯಕನ ಉಪದೇಶ
ನವದೆಹಲಿ, ಜೂನ್ 25: ಬೆಂಗಳೂರಿನಲ್ಲಿ ನ್ಯಾಚುರೋಪತಿ ಚಿಕಿತ್ಸೆ ಪಡೆಯುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ದೆಹಲಿಗೆ ವಾಪಸ್ ಬಂದು ಕೆಲಸದಲ್ಲಿ ತೊಡಗಿಸಿಕೊಳ್ಳಿ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಪತ್ರ ಬರೆದಿದ್ದಾರೆ.
ದೆಹಲಿಗೆ ಬಂದು ಮುಂಗಾರು ಮಳೆಗೆ ಮೊದಲು ಚರಂಡಿ ವ್ಯವಸ್ಥೆ ಸರಿಯಾಗಿರುವುದನ್ನು ಖಾತರಿಪಡಿಸಿ. ವೈದ್ಯರು ಅವರು ಫಿಟ್ ಆಗಿದ್ದಾರೆ ಎಂದು ಘೋಷಿಸಿರುವುದರಿಂದ ಅವರು ದೆಹಲಿಗೆ ವಾಪಸಾಗಬೇಕು ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ತಿವಾರಿ ಹೇಳಿದ್ದಾರೆ.
"ನೀವು (ಕೇಜ್ರಿವಾಲ್) ಫಿಟ್ ಎಂದು ವೈದ್ಯರು ಘೋಷಿಸಿರುವುದರಿಂದ ನೀವು ಆದಷ್ಟು ಬೇಗ ದೆಹಲಿಗೆ ವಾಪಸಾಗಬೇಕು ಮತ್ತು ಕೆಲಸ ಆರಂಭಿಸಬೇಕು," ಎಂಬುದಾಗಿ ಪತ್ರದಲ್ಲಿ ಮನೋಜ್ ತಿವಾರಿ ಹೇಳಿದ್ದಾರೆ.

"ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಚರಂಡಿಗಳು ಕಟ್ಟಿಕೊಂಡಿರುವುದರ ಕಡೆಗೆ ನಿಮ್ಮ ಗಮನ ಸೆಳೆಯಲು ನಾನು ಬಯಸುತ್ತೇನೆ. ಮುಂದಿನ ವಾರ ದೆಹಲಿಗೆ ಮಾನ್ಸೂನ್ ಮಾರುತಗಳು ತಲುಪಲಿದ್ದು, ದೆಹಲಿ ಸರ್ಕಾರ ಚರಂಡಿ ವ್ಯವಸ್ಥೆ ಸರಿ ಮಾಡಬೇಕಾಗಿದೆ. ಇದರಿಂದ ನೀರು ನಿಲ್ಲುವ ಸಮಸ್ಯೆಯನ್ನು ಜನರು ಎದುರಿಸುವುದಿಲ್ಲ," ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.
ದೆಹಲಿಯ ಜನರು ನೀರು, ವಿದ್ಯುತ್ ಕಡಿತ ಮತ್ತು ಮಾಲಿನ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂಬುದನ್ನೂ ತಿವಾರಿ ಕೇಜ್ರಿವಾಲ್ ಅವರ ಗಮನಕ್ಕೆ ತಂದಿದ್ದಾರೆ.
ಕೇಜ್ರಿವಾಲ್ ಅವರು ಮಧುಮೇಹದಿಂದ ಬಳಲುತ್ತಿದ್ದು 10 ದಿನಗಳ ನ್ಯಾಚುರೋಪತಿ ಚಿಕಿತ್ಸೆಗಾಗಿ ಕಳೆದ ವಾರ ಬೆಂಗಳೂರಿಗೆ ಬಂದಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ 9 ದಿನಗಳ ಕಾಲ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅವರ ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಏರುಪೇರು ಸಂಭವಿಸಿತ್ತು.
ಅವರಿಗೆ ಚಿಕಿತ್ಸೆ ನೀಡುತ್ತಿರುವ ಜಿಂದಾಲ್ ನೇಚರ್ ಕೇರ್ ಸಂಸ್ಥೆಯ ಅಧಿಕಾರಿಯೊಬ್ಬರು, "ಅವರು ಚೆನ್ನಾಗಿದ್ದಾರೆ, ಉತ್ತಮ ಸ್ಥಿತಿಯಲ್ಲಿದ್ದಾರೆ. ಅವರು ಡಿಟಾಕ್ಸಿಫಿಕೇಶನ್ ಪೂರ್ಣಗೊಳಿಸಿದ್ದು ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರು ಎಲ್ಲ ರೀತಿಯಿಂದಲೂ ಈಗ ಆರೋಗ್ಯವಾಗಿದ್ದಾರೆ," ಎಂದಿದ್ದರು.
ಈ ಹೇಳಿಕೆ ಬೆನ್ನಿಗೆ ಮನೀಜ್ ತಿವಾರಿ ಈ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications