ದೆಹಲಿಯಲ್ಲಿ ತೆರೆದುಕೊಳ್ಳಲಿದೆ ಬಸವಣ್ಣನ ಅನುಭವ ಮಂಟಪ
ದೆಹಲಿ, ಜನವರಿ.03: ಭಾರತ ಸಂವಿಧಾನವನ್ನು ಅಳವಡಿಸಿಕೊಂಡು ಏಳು ದಶಕಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವಕ್ಕೆ ಭರ್ಜರಿ ತಯಾರಿ ನಡೆದಿದೆ. ಈ ಬಾರಿ ದೆಹಲಿಯಲ್ಲಿ ಜಗಜ್ಯೋತಿ ಬಸವಣ್ಣರ ಅನುಭವ ಮಂಟಪ ತೆರೆದುಕೊಳ್ಳಲಿದೆ.
ಜನವರಿ.26ರ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ನಡೆಯುವ ಪಥ ಸಂಚಲನದಲ್ಲಿ ಬಸವಣ್ಣನವರ ಅನುಭವ ಮಂಟಪದ ಸ್ತಬ್ಧಚಿತ್ರವು ಪ್ರದರ್ಶನಗೊಳ್ಳಲಿದೆ. ಸತತ 11ನೇ ಬಾರಿಗೆ ರಾಜ್ಯದ ಸ್ತಬ್ಧಚಿತ್ರವು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದೆ.
ಪ.ಬಂಗಾಳ, ಮಹಾರಾಷ್ಟ್ರ ನಂತರ ಬಿಹಾರ, ಕೇರಳದ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರ
ಬೀದರ್ ಜಿಲ್ಲೆ ಬಸವ ಕಲ್ಯಾಣದಲ್ಲಿ 9 ಶತಮಾನಗಳ ಹಿಂದೆಯೇ ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಸಮಾಜದ ಅಭಿವೃದ್ಧಿಗಾಗಿ ಅನುಭವ ಮಂಟಪವನ್ನು ಜಗಜ್ಯೋತಿ ಬಸವಣ್ಣನವರು ಅಸ್ತಿತ್ವಕ್ಕೆ ತಂದಿದ್ದರು. ಅದರ ಮಹತ್ವವನ್ನು ದೇಶಕ್ಕೆ ಸಾರುವ ಉದ್ದೇಶದಿಂದ ಗಣರಾಜ್ಯೋತ್ಸವದ ಪಥಸಂಚಲನದ ಸಂದರ್ಭದಲ್ಲಿ ಸ್ತಬ್ಧಚಿತ್ರ ಪ್ರದರ್ಶಿಸಲು ತೀರ್ಮಾನಿಸಲಾಗಿದೆ.
12ನೇ ಶತಮಾನದಲ್ಲೇ ಸಮಾನತೆ ಸಂದೇಶ:
ಸಾಮಾಜಿಕ, ಧಾರ್ಮಿಕ, ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಸಮಾಜದ ಅಭಿವೃದ್ಧಿಗಾಗಿ ಬಸವಣ್ಣನವರು ಹೊಸ ಮಾರ್ಗವನ್ನು ಹಾಕಿಕೊಟ್ಟಿದ್ದರು. ಆಧ್ಯಾತ್ಮಿಕ, ತತ್ವಶಾಸ್ತ್ರದ ಆಧಾರದ ಮೇಲೆ ಸಮಾನತೆ, ಸೋದರತೆ, ಸಹೋದರತ್ವದ ದೃಷ್ಟಿಕೋನವನ್ನು ರೂಪಿಸಿದ್ದರು. ಈ ಬಗ್ಗೆ ಸಂದೇಶವನ್ನು ದೇಶಕ್ಕೆ ಸಾರುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಈ ಬಾರಿ ಅನುಮಭ ಮಂಟಪದ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಿದೆ. ಇದು 2020ರ ಜನವರಿ.26ರಂದು ನಡೆಯುವ ಗಣರಾಜ್ಯೋತ್ಸವ ಪಥಸಂಚಲನದ ಕೇಂದ್ರಬಿಂದುವಾಗಿ ಎಲ್ಲರ ಲಕ್ಷ್ಯ ಸೆಳೆಯುವ ಲಕ್ಷಣಗಳು ಎದ್ದು ಕಾಣುತ್ತಿವೆ.