ಶ್ರೇಷ್ಠ ರಾಜಕಾರಣಿಯನ್ನು ದೇಶ ಕಳೆದುಕೊಂಡಿದೆ : ರಮೇಶ್ ಜಿಗಜಿಣಗಿ
ನವದೆಹಲಿ, ನವೆಂಬರ್ 12 : ಕೇಂದ್ರ ರಸಾಯನ ಮತ್ತು ರಸಗೊಬ್ಬರ ಖಾತೆ ಹಾಗು ಸಂಸದೀಯ ವ್ಯವಹಾರಗಳ ಖಾತೆಯ ಸಚಿವರಾದ ಅನಂತ ಕುಮಾರ್ ಅವರ ನಿಧನಕ್ಕೆ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಅನಂತ ಕುಮಾರ್ ಅವರು ತಮ್ಮ ಪರಮಾಪ್ತ ಸ್ನೇಹಿತರು, ಮಾರ್ಗದರ್ಶಿಗಳು, ನೆಚ್ಚಿನ ನಾಯಕರಾಗಿದ್ದರು. 2004ರಲ್ಲಿ ತಾವು ಬಿಜೆಪಿ ಸೇರಿದ ದಿನದಿಂದ ಇಂದಿನವರೆಗೂ ಅತ್ಯಂತ ಆತ್ಮೀಯ ಸ್ನೇಹಿತರಾಗಿದ್ದರು. ತಾವು ಕೇಂದ್ರ ಸಚಿವರಾಗುವ ಸಂದರ್ಭದಲ್ಲೂ ತಮಗೆ ಸಹಕಾರ ನೀಡಿದ್ದರು ಎಂದು ಅನಂತ್ ಅವರನ್ನು ನೆನೆದರು.
ರಾಜ್ಯ ಕಂಡ ಅತ್ತ್ಯುತ್ತಮ ಸಂಸದೀಯ ಪಟು, ವಾಕ್ ಚತುರಾಗಿದ್ದರು. ಗುರು ಹಿರಿಯರ ಬಗ್ಗೆ ಅಪಾರ ಪ್ರೀತಿ ಮತ್ತು ವಿಶ್ವಾಸ ಹೊಂದಿದ್ದರು. ಕನ್ನಡ ನಾಡ ನುಡಿ, ಭಾಷೆ, ಗಡಿ, ಜಲ ವಿಷಯಗಳಲ್ಲಿ ಅಪಾರವಾದ ಪೀತಿ ಹೊಂದಿದ್ದು, ಇಂತಹ ವಿಷಯಗಳಲ್ಲಿ ಕರ್ನಾಟಕಕ್ಕೆ ನ್ಯಾಯ ಒದಗಿಸುವಲ್ಲಿ ಅವರ ಪಾತ್ರ ಮಹತ್ತರವಾದುದು ಎಂದು ಅವರನ್ನು ಸ್ಮರಿಸಿದರು.

ಕರ್ನಾಟಕದ ಬಗ್ಗೆ ಅವರ ಕಾಳಜಿ ಅನುಕರಣೀಯವಾದುದು. ಕರ್ನಾಟಕದ ವಿಷಯದಲ್ಲಿ ಎಲ್ಲರನ್ನೂ ಒಗ್ಗೂಡಿಸಿ, ಪಕ್ಷಭೇದ ಮರೆತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಸಮಸ್ಯೆಗಳ ಪರಿಹಾರಕ್ಕೆ ಸ್ವಂದಿಸುತ್ತಿದ್ದರು. ಭಾರತೀಯ ಜನತಾ ಪಕ್ಷದ ಕರ್ನಾಟಕ ಮತ್ತು ದೇಶದಾದ್ಯಂತ ಬಲವಾಗಲು ಶ್ರಮಿಸಿದ್ದರು ಎಂದು ಕೊಂಡಾಡಿದರು.
ಉಪ ಪ್ರಧಾನ ಮಂತ್ರಿಗಳಾದ ಎಲ್. ಕೆ. ಅಡ್ವಾಣಿ ಅವರ ಮಾನಸಪುತ್ರರಂತಿದ್ದರೂ ಸರಳ ಸಜ್ಜನಿಕೆಯ ಸಹನಾಮೂರ್ತಿಯಾಗಿದ್ದರು. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ಬಲವರ್ಧನೆಗೆ ಕಾರ್ಯಕ್ರಮಗಳ ಕ್ರಿಯಾ ಯೋಜನೆ ರೂಪಿಸುತ್ತಿದ್ದ ನಿಪುಣರಾಗಿದ್ದರು. ಅವರ ಚಿಂತನೆ, ಆದರ್ಶ ಜೀವನ ಯುವಕರಿಗೆ ಮಾದರಿಯಾಗಿದೆ ಎಂದು ಜಿಗಜಿಣಗಿ ಅವರು ನುಡಿದರು.
ಅನಂತ್ ಕುಮಾರ್ ಅವರು ಪಕ್ಷದ ಬಲವರ್ಧನೆಗೆ ದೇಶದಾದ್ಯಂತ ಸಂಚರಿಸಿ, ಶ್ರಮಿಸಿದ್ದಾರೆ. ಇವರ ಅಗಲಿಕೆಯಿಂದ ಕರ್ನಾಟಕ ಮಾತ್ರವಲ್ಲದೇ ದೇಶದಲ್ಲೇ ಒಬ್ಬ ಅತ್ಯುನ್ನತ ಶೇಷ್ಠ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ. ಇವರ ಅಗಲಿಕೆಯಿಂದ ಕರ್ನಾಟಕ ಬಡವಾಗಿದೆ. ಇವರ ಅಗಲಿಕೆಯ ನೋವನ್ನು ಭವರಿಸುವ ಶಕ್ತಿಯನ್ನು ಅವರ ಕುಟುಂಬ ಪರಿವಾರಕ್ಕೆ ಹಾಗು ಅಭಿಮಾನಿಗಳಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಅವರು ತಿಳಿಸಿದರು.












Click it and Unblock the Notifications