ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ರಾಮಮೂರ್ತಿ ಬಿಜೆಪಿಗೆ?
ನವದೆಹಲಿ, ಅಕ್ಟೋಬರ್ 16: ರಾಜ್ಯಸಭೆಯ ಸದಸ್ಯ ಸ್ಥಾನದ ಜತೆಗೆ ಕಾಂಗ್ರೆಸ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಿರುವ ಮಾಜಿ ಐಪಿಎಸ್ ಅಧಿಕಾರಿ ಕೆಸಿ ರಾಮಮೂರ್ತಿ ಅವರು ಬಿಜೆಪಿ ಸೆರುವ ಸುಳಿವು ನೀಡಿದ್ದಾರೆ.
ನವದೆಹಲಿಯಲ್ಲಿ ಬುಧವಾರ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ ಕೆಸಿ ರಾಮಮೂರ್ತಿ, ರಾಜೀನಾಮೆ ಪತ್ರ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿರುವುದು ನಿಜ ಎಂದು ಸ್ಪಷ್ಟಪಡಿಸಿದರು.
'ರಾಜ್ಯಸಭೆ ಸದಸ್ಯತ್ವದ ಜತೆಗೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಕುರಿತು ಸೋನಿಯಾ ಗಾಂಧಿ ಅವರ ಗಮನಕ್ಕೆ ಕೂಡ ತಂದಿದ್ದೇನೆ' ಎಂದು ಹೇಳಿದರು.

'ಇದು ಆತುರಕ್ಕೆ ತೆಗೆದುಕೊಂಡ ನಿರ್ಧಾರವಲ್ಲ. ಒಂದು ವರ್ಷಕ್ಕೂ ಹೆಚ್ಚು ಕಾಲ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಈ ಉದ್ದೇಶದ ಕುರಿತು ಕಾಂಗ್ರೆಸ್ ನಾಯಕರ ಬಹಳ ಹಿಂದೆಯೇ ತಿಳಿಸಿದ್ದೆ. ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ' ಎಂದರು.
'ಕಾಂಗ್ರೆಸ್ ಪಕ್ಷ ನಿಂತ ನೀರಾಗಿದೆ. ನನ್ನ ಅನುಭವವನ್ನು ಕಾಂಗ್ರೆಸ್ ಬಳಸಿಕೊಳ್ಳಲಿಲ್ಲ. ಕಾಂಗ್ರೆಸ್ ಮತ್ತು ಅದರ ನಾಯಕರ ಕುರಿತು ಮಾತನಾಡುವುದಿಲ್ಲ. ದೇಶದ ಪ್ರಗತಿಯಲ್ಲಿ ಭಾಗಿಯಾಗುವ ದೃಷ್ಟಿಯಿಂದ ರಾಜೀನಾಮೆ ನೀಡಿದ್ದೇನೆ. ಬಿಜೆಪಿ ಸೇರುವ ಬಗ್ಗೆ ಒಲವಿದೆ. ಅವರು ನನ್ನ ಅನುಭವ ಸರಿಯಾಗಿ ಬಳಸಿಕೊಳ್ಳುವುದಾದರೆ ಮಾತ್ರ ಬಿಜೆಪಿ ಸೇರಲು ಸಿದ್ಧ. ಹಲವು ಕಾರಣಗಳಿಗಾಗಿ ಅಮಿತ್ ಶಾ ಅವರನ್ನು ಈ ಹಿಂದೆ ಭೇಟಿ ಮಾಡಿದ್ದೆ. ಹಾಗೆಯೇ ಬಿಜೆಪಿಯ ಬೇರೆ ನಾಯಕರನ್ನೂ ಭೇಟಿಯಾಗಿದ್ದೆ. ಆದರೆ ಪಕ್ಷ ಸೇರುವ ವಿಚಾರವಾಗಿ ಯಾರೊಂದಿಗೂ ಮಾತನಾಡಿಲ್ಲ. ಬಿಜೆಪಿ ಸೇರುವ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ' ಎಂದು ತಿಳಿಸಿದರು.
'ನಾನು ಯಾವುದೇ ಆಮಿಷಗಳಿಗೆ ಒಳಗಾಗಿಲ್ಲ. ನನ್ನ ರಾಜೀನಾಮೆಗೆ ಯಾವುದೇ ಬೆದರಿಕೆಗಳೂ ಕಾರಣವಲ್ಲ' ಎಂದು ಸ್ಪಷ್ಟನೆ ನೀಡಿದರು.












Click it and Unblock the Notifications