ರಾಜೀವ್ ಗಾಂಧಿ ಹಂತಕಿಗೆ ಬಿಡುಗಡೆ ಭಾಗ್ಯವಿಲ್ಲ
ನವದೆಹಲಿ, ಅ.27: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೈದಿದ್ದ ನಳಿನಿ ಶ್ರೀಹರನ್ ಅವರು ಅವಧಿಗೆ ಮುನ್ನ ಬಿಡುಗಡೆ ಬಯಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ. ಹೀಗಾಗಿ ಹಂತಕಿ ನಳಿನಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ.
ತಮಿಳುನಾಡಿನ ವೆಲ್ಲೂರಿನ ಜೈಲಿನಲ್ಲಿರುವ ನಳಿನಿ ಅವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಅವಧಿ ಪೂರ್ವ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದರು.ಅದರೆ, ಸುಪ್ರೀಂಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ.
ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಅಪರಾಧಿಗಳಾಗಿರುವ ನಳಿನಿ ಶ್ರೀಹರನ್ ಸೇರಿದಂತೆ ಸಂತನ್, ಮುರಗನ್ ಮತ್ತು ಪೆರಾರಿವೇಲನ್ ಅವರ ಗಲ್ಲುಶಿಕ್ಷೆಯನ್ನು ಫೆ.18ರಂದು ಸುಪ್ರೀಂಕೋರ್ಟ್ ಜೀವಾವಧಿಗೆ ಇಳಿಸಿತ್ತು. [ರಾಜೀವ್ ಹಂತಕರಿಗೆ ಜೀವಾವಧಿ ಶಿಕ್ಷೆ]

ಇದಾದ ಮಾರನೇ ದಿನವೇ ತಮಿಳುನಾಡು ಸರ್ಕಾರ ರಾಜೀವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಏಳೂ ಅಪರಾಧಿಗಳನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿತ್ತು. ತಮಿಳುನಾಡು ಸರ್ಕಾರದ ನಿರ್ಧಾರ ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆರೋಪಿಗಳ ಬಿಡುಗಡೆಗೆ ತಡೆ ನೀಡಿತ್ತು.
'ನನ್ನ ತಂದೆ ದೇಶಕ್ಕಾಗಿ ಹುತಾತ್ಮರದರು. ಒಬ್ಬ ಮಾಜಿ ಪ್ರಧಾನಿಯ ಹಂತಕರನ್ನೇ ಬಿಡುಗಡೆ ಮಾಡಲಾಗುತ್ತಿದೆ ಎಂದಾದರೆ ಜನಸಾಮಾನ್ಯರು ನ್ಯಾಯ ನಿರೀಕ್ಷೆ ಮಾಡುವುದು ಹೇಗೆ' ಎಂದು ಜಯಲಲಿತಾ ಅವರ ನಿರ್ಧಾರವನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಸಂತನ್, ಮುರಗನ್ ಮತ್ತು ಪೆರಾರಿ ವೇಲನ್ ಅವರುಗಳು ಪ್ರಸ್ತುತ ವೆಲ್ಲೂರು ಕೇಂದ್ರ ಕಾರಾಗೃಹದಲ್ಲಿದ್ದಾರೆ (1991ರಿಂದ). ಉಳಿದ ನಾಲ್ವರು ಶ್ರೀಪೆರಂಬದೂರು ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. 1991ರ ಮೇ 21ರಂದು ಶ್ರೀಪೆರಂಬದೂರು ಸಮೀಪ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯಾಗಿತ್ತು. ಆ ಬಾಂಬ್ ಸ್ಫೋಟದಲ್ಲಿ ಇನ್ನೂ 14 ಮಂದಿ ಪ್ರಾಣ ತೆತ್ತಿದ್ದರು.












Click it and Unblock the Notifications