ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರದ್ದು ಬುದ್ಧಿವಂತಿಕೆಯ ನಡೆ: ರಜನಿಕಾಂತ್ ಪ್ರಶಂಸೆ
ನವದೆಹಲಿ, ಆಗಸ್ಟ್ 14: ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಜ ಸಚಿವ ಅಮಿತ್ ಶಾ ಅವರನ್ನು ಶ್ಲಾಘಿಸಿದ್ದ ನಟ ರಜನಿಕಾಂತ್, 370ನೇ ವಿಧಿಯನ್ನು ರದ್ದುಗೊಳಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ಕೊಂಡಾಡಿದ್ದಾರೆ.
''370ನೇ ವಿಧಿ ರದ್ದತಿಯ ಇಡೀ ಪ್ರಕರಣವನ್ನು ನಿರ್ವಹಿಸಿದ ಬಗೆ ಇದೆಯಲ್ಲ, ಅದು ಮಾಸ್ಟರ್ ಸ್ಟ್ರಾಟಜಿ. ಮೊದಲು ಅವರು ಸೆಕ್ಷನ್ 144ಅನ್ನು ಹೇರಿದರು. ಜನರು ಯಾವುದೇ ಸಮಸ್ಯೆ ಉಂಟುಮಾಡದಂತೆ ಮೊದಲು ಎಚ್ಚರಿಕೆ ವಹಿಸಿದರು. ಬಳಿಕ ಮಸೂದೆಯನ್ನು ಮಂಡಿಸಿದರು. ಮೊದಲು ತಮಗೆ ಬಹುಮತವಿಲ್ಲದ ರಾಜ್ಯಸಭೆಯಲ್ಲಿ ಮಂಡಿಸಿದರು ಮತ್ತು ನಂತರ ಲೋಕಸಭೆಯಲ್ಲಿ ಅಂಗೀಕರಿಸಿದರು'' ಎಂದು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಮಹತ್ವದ ಮತ್ತು ಸೂಕ್ಷ್ಮ ಸಂಗತಿಯನ್ನು ನಿಭಾಯಿಸಿದ ಬಗೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

''ಅವರು ಅದನ್ನು ಅತ್ಯಂತ ಪರಿಪೂರ್ಣವಾಗಿ ಯೋಜಿಸಿ ಜಾರಿಗೆ ತಂದರು. ರಾಜಕಾರಣಿಗಳನ್ನು ಯಾವುದನ್ನು ರಾಜಕೀಯಗೊಳಿಸಬೇಕು ಮತ್ತು ರಾಜಕೀಯಗೊಳಿಸಬಾರದು ಎಂಬುದನ್ನು ತಿಳಿದಿರಬೇಕು. ನಾನು ಕೇಂದ್ರ ಸರ್ಕಾರದ ನಡೆಯನ್ನು ಶ್ಲಾಘಿಸುತ್ತೇನೆ. ಏಕೆಂದರೆ ಅದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸಂಗತಿ'' ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಭಾನುವಾರ ತಮಿಳುನಾಡಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಜನಿಕಾಂತ್, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಕೃಷ್ಣ-ಅರ್ಜುನರಿಗೆ ಹೋಲಿಸಿದ್ದರು.
''ನಮಗೆ ಕೃಷ್ಣ ಯಾರು, ಅರ್ಜುನ ಯಾರು ಎಂದು ಗೊತ್ತಿಲ್ಲ. ಇದುವರು (ಮೋದಿ ಮತ್ತು ಅಮಿತ್ ಶಾ) ಮಾತ್ರ ಗೊತ್ತು'' ಎಂದಿದ್ದರು. ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವು ಅದ್ಭುತವಾದ ನಡೆ ಎಂದು ಬಣ್ಣಿಸಿದ್ದರು.












Click it and Unblock the Notifications