ಐಎನ್ಎಸ್ ಸೂರತ್, ಐಎಸ್ಎನ್ ಉದಯಗಿರಿ ಲೋಕಾರ್ಪಣೆ
ಮುಂಬೈ, ಮೇ 18: ಮುಂಬೈನಲ್ಲಿ ನಡೆದ ಐತಿಹಾಸಿಕ ಸಮಾರಂಭದಲ್ಲಿ ಐಎನ್ಎಸ್ ಸೂರತ್ ಮತ್ತು ಐಎಸ್ಎನ್ ಉದಯಗಿರಿ ಯುದ್ಧ ನೌಕೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಾರ್ಪಣೆಗೊಳಿಸಿದರು. ನೂತನ ಯುದ್ಧ ನೌಕೆಗಳ ಸೇರ್ಪಡೆಯಿಂದ ಭಾರತೀಯ ನೌಕಾ ಪಡೆಗೆ ಮತ್ತಷ್ಟು ಬಲ ಬಂದಿದೆ.
ಮುಂಬೈನ ಮಾಜ್ಗಾಂವ್ ಡಾಕ್ಸ್ ಲಿಮಿಟೆಡ್ (ಎಂಡಿಎಲ್) ಈ ಎರಡು ನೂತನ ಯುದ್ಧ ನೌಕೆಗಳನ್ನು ತಯಾರಿಸಿದೆ.
ಲೋಕಾರ್ಪಣೆ ಸಮಾರಂಭದಲ್ಲಿಮಾತನಾಡಿದ ರಾಜನಾಥ್ ಸಿಂಗ್, "ಈ ಎರಡು ಯುದ್ಧ ನೌಕೆಗಳ ಸೇರ್ಪಡೆಯಿಂದ ಭಾರತೀಯ ನೌಕಾ ಪಡೆಯ ಶಸ್ತ್ರಾಗಾರಕ್ಕೆ ಮತ್ತಷ್ಟು ಬಲ ಬಂದಿದೆ. ಇದು ವಿಶ್ವಕ್ಕೆ ಭಾರತದ ಯುದ್ಧ ಸಾಮರ್ಥ್ಯ ಮತ್ತು ಸ್ವಂತ ಬಲದ ಪರಿಚಯ ಮಾಡಿಕೊಳ್ಳಲಿದೆ'' ಎಂದು ಹೇಳಿದರು.
"ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ಐಎನ್ಎಸ್ ಸೂರತ್ ಮತ್ತು ಐಎಸ್ಎನ್ ಉದಯಗಿರಿ ಯುದ್ಧ ನೌಕೆಗಳನ್ನುದೇಶಿಯವಾಗಿ ನಿರ್ಮಿಸಲಾಗಿದೆ. ಅಲ್ಲದೇ ಇತರೆ ದೇಶಗಳಿಗೂ ಕೂಡ ನಾವು ಈ ರೀತಿಯ ಯುದ್ಧ ನೌಕೆಗಳನ್ನು ತಯಾರಿಸಿಕೊಡಲು ಸಿದ್ಧವಾಗಿದ್ದೇವೆ. ಈ ಮೂಲಕ ಮೇಕ್ ಫಾರ್ ವಲ್ಡ್ಗೆ ಭಾರತ ಅಣಿಯಾಗಿದೆ'' ಎಂದು ಹರ್ಷ ವ್ಯಕ್ತಪಡಿಸಿದರು.

"ನೂತನ ಯುದ್ಧ ನೌಕೆಗಳ ಮೂಲಕ ಭಾರತ ಸರಕಾರವು ನೌಕಾ ಪಡೆಯನ್ನು ಬಲಪಡಿಸುವ ತನ್ನ ಭರವಸೆಗೆ ಬದ್ಧವಾಗಿದೆ. ಅಲ್ಲದೇ ಕೋವಿಡ್-19 ಹಾಗೂ ಉಕ್ರೇನ್-ರಷ್ಯಾ ಯುದ್ಧದ ಈ ಪರಿಸ್ಥಿತಿಯಲ್ಲೂ ಕೂಡ ಆತ್ಮನಿರ್ಭರ ಭಾರತದ ಗುರಿಯ ಮೇಲೆ ದೇಶ ಹೆಚ್ಚು ಒತ್ತು ನೀಡಿದೆ'' ಎಂದು ರಾಜನಾಥ್ ಸಿಂಗ್ ಹೇಳಿದರು.
"ಇಂಡೋ-ಫೆಸಿಫಿಕ್ ಪ್ರದೇಶವು ವಿಶ್ವದ ಆರ್ಥಿಕತೆಗೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಪ್ರದೇಶದಲ್ಲಿ ಭಾರತ ಪ್ರಮುಖ ದೇಶವಾಗಿದೆ. ನಾವು ಶಾಂತಿಯುತ, ನಿಷ್ಪಕ್ಷಪಾತವಾದ, ಸ್ಥಿರವಾದ ಮತ್ತು ನಿಯಮಗಳ ಆಧಾರದ ಜಲ ಸಂಬಂಧವನ್ನು ಬಯಸುತ್ತೇವೆ. ಅಲ್ಲದೇ ಪಾರಾದರ್ಶಕ, ಸುರಕ್ಷಿತ ಮತ್ತು ನಿರ್ಭೀತ ಇಂಡೋ-ಫೆಸಿಫಿಕ್ ಪ್ರದೇಶವೇ ಭಾರತೀಯ ನೌಕಾ ಪಡೆಯ ಗುರಿಯಾಗಿದೆ'' ಎಂದು ರಾಜನಾಥ ಸಿಂಗ್ ತಿಳಿಸಿದರು.

ಭಾರತೀಯ ನೌಕಾ ಸೇನೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಕೊರೊನಾ ನಡುವೆಯೂ ಐಎನ್ಎಸ್ ಸೂರತ್ ಮತ್ತು ಐಎಸ್ಎನ್ ಉದಯಗಿರಿ ಯುದ್ಧ ನೌಕೆಗಳ ತಯಾರಿಕೆಯನ್ನು ಮಾಜ್ಗಾಂವ್ ಡಾಕ್ಸ್ ಲಿಮಿಟೆಡ್ (ಎಂಡಿಎಲ್) ಸಂಸ್ಥೆ ಮುಂದುವರಿಸಿತು.












Click it and Unblock the Notifications