ರೈಲ್ವೆ ಕಡತಗಳೂ ನಾಪತ್ತೆ: ಸಚಿವ ಡಿವಿಎಸ್ ಗರಂ
ನವದೆಹಲಿ, ಜೂನ್ 5: ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನಾ ದಿನಗಳಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ 13 ಮಹತ್ವದ ಕಡತಗಳು ಕಣ್ಮರೆಯಾಗಿವೆ. ಮೇ 23 ರಂದು ಇದು ಇಲಾಖೆಯ ಉನ್ನತಾಧಿಕಾರಿಗಳ ಗಮನಕ್ಕೆ ಬಂದಿದ್ದು, ಶೀಘ್ರವೇ ಕಡತಗಳನ್ನು ಪತ್ತೆ ಹಚ್ಚುವಂತೆ ಅಧೀನ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಕೆಲ ಅಧಿಕಾರಿಗಳ ಭಡ್ತಿ, ವರ್ಗಾವಣೆ ಸೇರಿ ಹಲವು ಮಹತ್ವದ ನಿರ್ಧಾರಗಳನ್ನೊಳಗೊಂಡ ಕಡತಗಳು ದಿಲ್ಲಿಯಲ್ಲಿರುವ ರೈಲ್ ಭವನ್ ನಿಂದ ನಾಪತ್ತೆಯಾಗಿರುವುದರ ಹಿಂದೆ ಕಾಣದ ಕೈಗಳ ಕೈವಾಡವಿರಬಹುದಾ ಎಂಬ ಅನುಮಾನ ವ್ಯಕ್ತವಾಗಿದೆ.

ತಮ್ಮ ಇಲಾಖೆಯ ಕಡತಗಳು ನಾಪತ್ತೆಯಾಗಿರುವ ಬಗ್ಗೆ ಹಾಲಿ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರು ಗರಂ ಆಗಿದ್ದಾರೆ. ಆದಷ್ಟು ಬೇಗ ಅವುಗಳನ್ನು ಪತ್ತೆ ಹಚ್ಚುವಂತೆ ಅಥವಾ ಮರು ರಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಾಪತ್ತೆಯಾಗಿರುವ ಕಡತಗಳಲ್ಲಿರುವ ಮಾಹಿತಿಗಳು ಇಲಾಖೆಯ ಕಂಪ್ಯೂಟರುಗಳಲ್ಲಿ ಇರಬಹುದು ಎನ್ನಲಾಗಿದೆಯಾದರೂ ಈ ಬಗ್ಗೆ ಅಧಿಕಾರಿಗಳಿಗೆ ಖಚಿತತೆ ಇಲ್ಲ ಎಂದು ತಿಳಿದುಬಂದಿದೆ. (ಜುಲೈನಲ್ಲಿ ಸದಾನಂದ ಗೌಡ ಚೊಚ್ಚಲ ಬಜೆಟ್)
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಕೊನೆಯ ದಿನಗಳಲ್ಲಿ ನಾಪತ್ತೆಯಾಗಿರುವ ರೈಲ್ವೆ ಇಲಾಖೆಯ ಕೆಲ ಕಡತಗಳು ಯಾವುವೆಂದರೆ
* ರೈಲ್ವೆ ಇಲಾಖೆಯ ಜಂಟಿ ಕಾರ್ಯದರ್ಶಿ ದರ್ಜೆಯ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಹಾಗೂ ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದ ಕಡತಗಳು.
* ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗೆ (ಬಿಸಿಸಿಐ) ನಡೆಸಲಾಗಿದ್ದ ಸಂವಹನದ ಕಡತಗಳು.
* ರೈಲ್ವೆ ಸುರಕ್ಷತೆಗೆ ಕೈಗೊಳ್ಳಬೇಕಾಗಿದ್ದ ಕ್ರಮಗಳ ಕುರಿತು ಸಿದ್ಧಪಡಿಸಲಾಗಿದ್ದ ಕಡತಗಳು.
* ಮುಂಬೈ ರೈಲ್ ವಿಕಾಸ್ ಕಾರ್ಪೊರೇಷನ್ ಗೆ ನಿಯೋಜಿಸಲಾಗಿದ್ದ ನೌಕರರಿಗೆ ವಿಶೇಷ ಪ್ಯಾಕೇಜ್ ನೀಡುವ ಕುಡಿತಾದ ಕಡತ.












Click it and Unblock the Notifications